ಮಲೆಮಹದೇಶ್ವರ ಭಕ್ತರ FB ಪೇಜ್ ಹ್ಯಾಕ್: ಅಶ್ಲೀಲ ವಿಡಿಯೋ ಪೋಸ್ಟ್
ಚಾಮರಾಜನಗರ, ಸೆಪ್ಟೆಂಬರ್ 20 : ಲಕ್ಷಾಂತರ ಭಕ್ತರ ಪರಮ ದೈವ 'ಶ್ರೀಮಲೆ ಮಹದೇಶ್ವರ ಸ್ವಾಮಿ'ಯ ಹೆಸರಿನಲ್ಲಿ ಸೃಷ್ಟಿಸಿರುವ ಪೇಸ್ಬುಕ್ ಪೇಜ್ನಲ್ಲಿ ಅಶ್ಲೀಲ ವಿಡಿಯೋಗಳು ಅಪ್ಲೋಡ್ ಆಗುತ್ತಿದ್ದು, ಭಕ್ತರ ಭಾವನೆಗೆ ಧಕ್ಕೆ ಉಂಟಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಳ್ಳೇಗಾಲದ ಸಂಜಯ್ಕುಮಾರ್ 2013ರಲ್ಲಿ ಈ ಫೇಜ್ಬುಕ್ ಪೇಜ್ ಕ್ರಿಯೇಟ್ ಮಾಡಿದ್ದು, ಸುಮಾರು 17 ಸಾವಿರ ಅನುಯಾಯಿಗಳಿದ್ದಾರೆ. ಇದರಲ್ಲಿ ದೇವರ ಪೋಟೋಗಳು, ಮಲೈ ಮಹದೇಶ್ವರ ಬೆಟ್ಟದ ಪೂಜಾ ಕೈಂಕರ್ಯಗಳು ಸೇರಿದಂತೆ ಇತರ ಮಾಹಿತಿಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ. ಆದರೆ ಕಳೆದ ಎರಡು ತಿಂಗಳ ಹಿಂದೆ ಈ ಪೇಜ್ ಅನ್ನು ಹ್ಯಾಕ್ ಮಾಡಲಾಗಿದೆ. ಸ್ಟೋರಿಗಳ ವಿಭಾಗದಲ್ಲಿ ಹುಡುಗಿಯರ ಅಶ್ಲೀಲ ಪೋಟೋ, ವಿಡಿಯೊಗಳನ್ನು ಹಾಕಲಾಗುತ್ತಿದೆ.
ಫೇಸ್ಬುಕ್ ಪೇಜ್ ಹ್ಯಾಕ್ ಆದ ಮರು ದಿನವೇ ಅಡ್ಮಿನ್ ಸಂಜಯ್ಕುಮಾರ್ ಸೈಬರ್ ಕ್ರೈಂಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ. 30 ಜನರಿಂದ ಈ ಪೇಜ್ ವಿರುದ್ಧ ರಿಪೋರ್ಟ್ ಮಾಡಿಸು ಎಂದು ಪೊಲೀಸರು ಸಂಜಯ್ಗೆ ಸಲಹೆ ನೀಡಿದ್ದಾರೆ. ಈವರೆಗೆ 5 ಜನರಿಂದ ಸಂಜಯ್ ರಿಪೋರ್ಟ್ ಮಾಡಿಸಿದ್ದಾರೆ. ಹಾಗಾಗಿ ಹ್ಯಾಕ್ ಆಗಿರುವ ಪೇಜ್ ಅನ್ನು ಡೀ ಆ್ಯಕ್ಟಿವ್ ಮಾಡಲು ಸಾಧ್ಯವಾಗುತ್ತಿಲ್ಲ. ಪೊಲೀಸರು ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಂಜಯ್ ಒತ್ತಾಯಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಜಯ್, "ತಾನು ಕ್ರಿಯೇಟ್ ಮಾಡಿದ್ದ ಫೇಸ್ಬುಕ್ ಪೇಜ್ ಹ್ಯಾಕ್ ಆಗಿದೆ. ಈ ಬಗ್ಗೆ ದೂರು ಸಲ್ಲಿಸಿದ್ದರೂ ಕ್ರಮವಹಿಸಿಲ್ಲ. ಅದರಲ್ಲಿ ಅಶ್ಲೀಲ ಪೋಟೋ, ವಿಡಿಯೋಗಳು ಅಪ್ಲೋಡ್ ಆಗುತ್ತಿದ್ದು, ಹ್ಯಾಕ್ ಆಗಿರುವ ಬಗ್ಗೆ ತಿಳಿಯದ ಜನರು ನನಗೆ ಕರೆ ಮಾಡಿ ಬಾಯಿಗೆ ಬಂದಂತೆ ಬೈಯುತ್ತಿದ್ದಾರೆ," ಎಂದು ಅಳಲು ತೋಡಿಕೊಂಡಿದ್ದಾರೆ.
ಸೆ.23ರಿಂದ 26ರವರೆಗೆ ಮಹಾಲಯ ಅಮಾವಾಸ್ಯೆ ಜಾತ್ರೆ
ಹನೂರು ತಾಲ್ಲೂಕಿನ ಪ್ರಸಿದ್ದ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ಸೆಪ್ಟೆಂಬರ್ 23ರಿಂದ 26ರವರೆಗೆ ಮಹಾಲಯ ಅಮಾವಾಸ್ಯೆ ಜಾತ್ರೆ, ಅಕ್ಟೋಬರ್ 3ರಿಂದ 5ರವರೆಗೆ ದಸರಾ ಜಾತ್ರೆ, ಅಕ್ಟೋಬರ್ 22ರಿಂದ 26ರವರೆಗೆ ದೀಪಾವಳಿ ಜಾತ್ರಾ ಮಹೋತ್ಸವ ನಡೆಯಲಿದೆ.
ಮಹಾಲಯ ಜಾತ್ರಾ ಪ್ರಯುಕ್ತ 23ರಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ. 24ರಂದು ಎಣ್ಣೆಮಜ್ಜನ, ತೈಲಾಭಿಷೇಕ, ವಿಶೇಷ ಸೇವೆ ಉತ್ಸವಗಳು ನಡೆಯಲಿವೆ. 25ರಂದು ಮಹಾಲಯ ಅಮವಾಸ್ಯೆ ವಿಶೇಷ ಸೇವೆ ಉತ್ಸವ ನಡೆಯಲಿವೆ.
26ರಂದು ಶರನ್ನವರಾತ್ರಾರಂಭ, ಉಯ್ಯಾಲೋತ್ಸವ ಪ್ರಾರಂಭ, ಅಕ್ಟೋಬರ್ 4ರಂದು ಮಹಾನವಮಿ, ಆಯುಧಪೂಜೆ, ಅಕ್ಟೋಬರ್ 5ರಂದು ವಿಜಯದಶಮಿ, ಕುದುರೆ ವಾಹನೋತ್ಸವ, ದಶಮಿ ಪೂಜೆ ನಡೆಯಲಿದೆ.












Click it and Unblock the Notifications