ಬಂಡೀಪುರದಲ್ಲಿ ರೈಲು ಕಂಬಿಗೆ ಸಿಲುಕಿ ಗಂಡಾನೆ ಸಾವು
ಚಾಮರಾಜನಗರ, ನವೆಂಬರ್ 04: ಅರಣ್ಯದಿಂದ ಕಾಡಾನೆಗಳು ನಾಡಿಗೆ ಬರದಂತೆ ಅಡ್ಡಲಾಗಿ ಹಾಕಿದ ರೈಲ್ವೆ ಕಂಬಿಯೇ ಗಂಡಾನೆಯ ಜೀವಕ್ಕೆ ಕುತ್ತು ತಂದ ಘಟನೆ ಬಂಡೀಪುರ ಅಭಯಾರಣ್ಯದ ಮೊಳೆಯೂರು ವಲಯ ನಡಹಾಡಿಯ ವ್ಯಾಪ್ತಿಯಲ್ಲಿ ನಡೆದಿದೆ.
ಬಂಡೀಪುರ ಅಭಯಾರಣ್ಯದ ಮೊಳೆಯೂರು ವಲಯ ನಡಹಾಡಿಯ ಸಮೀಪದ ಅರಣ್ಯದಿಂದ ಆನೆಗಳು ಹೊರಬರದಂತೆ ರೈಲ್ವೆ ಕಂಬಿಯನ್ನು ಅಳವಡಿಸಲಾಗಿದೆ. ಇದರಿಂದ ಕಾಡಿನಿಂದ ನಾಡಿಗೆ ಬಂದು ರೈತರ ಜಮೀನುಗಳಿಗೆ ಲಗ್ಗೆಯಿಟ್ಟು ಹಾನಿಮಾಡುವುದು ತಪ್ಪಿತ್ತು. ಆದರೂ ಬಹಳಷ್ಟು ಕಾಡಾನೆಗಳು ಕಂಬಿಯನ್ನು ನುಸುಳಿ ಬರುವ ವಿಫಲ ಯತ್ನ ಮಾಡಿರುವ ಘಟನೆಗಳು ನಡೆದಿತ್ತು. ಆದರೆ ಇದೀಗ ಈ ಕಂಬಿಯನ್ನು ನುಸುಳಿ ಅರಣ್ಯದಿಂದ ಹೊರಹೋಗಲು ಪ್ರಯತ್ನ ಪಟ್ಟ ಗಂಡಾನೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ಸೋಮವಾರ ರಾತ್ರಿ ಗಂಡಾನೆ ನಡಹಾಡಿಯ ಸಮೀಪದ ಅರಣ್ಯದಿಂದ ಹೊರ ಬರಲು ಪ್ರಯತ್ನ ನಡೆಸಿ ರೈಲ್ವೆ ಕಂಬಿಯ ಸುತ್ತಲೂ ಓಡಾಡಿದೆ. ಅಲ್ಲದೆ ಕಂಬಿ ನಡುವೆ ಸೊಂಡಿಲು ಹೊರ ಹಾಕಿ ದಾಟುವ ಪ್ರಯತ್ನ ಮಾಡಿದ್ದು ಈ ವೇಳೆ ಬಹುಶಃ ಜಾರಿ ಬಿದ್ದು ಕೋರೆ ಮತ್ತು ಸೊಂಡಿಲು ಕಂಬಿಗೆ ಸಿಲುಕಿದ್ದರಿಂದ ಮೇಲೇಳಲು ಸಾಧ್ಯವಾಗದೆ ಉಸಿರುಕಟ್ಟಿ ಸ್ಥಳದಲ್ಲಿಯೇ ಮೃತಪಟ್ಟಿದೆ.
Recommended Video

ಮಂಗಳವಾರ ಎಂದಿನಂತೆ ಬೆಳಿಗ್ಗೆ ಅರಣ್ಯ ಸಿಬ್ಬಂದಿ ಗಸ್ತು ನಡೆಸುತ್ತಿದ್ದ ವೇಳೆ ಕಂಬಿಗೆ ಸಿಲುಕಿ ಕಾಡಾನೆ ಸಾವನ್ನಪ್ಪಿರುವುದು ಗೋಚರಿಸಿದೆ. ಕೂಡಲೇ ಅವರು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಹುಲಿ ಯೋಜನೆಯ ನಿರ್ದೇಶಕ ಎಸ್.ಆರ್.ನಟೇಶ್, ಎಸಿಎಫ್ ರವಿಕುಮಾರ್ ಭೇಟಿ ನೀಡಿ ಮಹಜರು ನಡೆಸಿದ್ದು, ಪಶುವೈದ್ಯ ಡಾ.ನಾಗರಾಜು ಅವರು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅಂತ್ಯಸಂಸ್ಕಾರ ಮಾಡಲಾಗಿದೆ.












Click it and Unblock the Notifications