ಪ್ರೇಯಸಿಗಾಗಿ ಚಿನ್ನಾಭರಣ ಕಳ್ಳತನ: ಪ್ರೇಮಿ ಸೇರಿ ಮೂವರು ಜೈಲುಪಾಲು
ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಪ್ರೇಯಸಿಗಾಗಿ ಮಾಲೀಕರ ಸಹೋದರನ ಮನೆಯಲ್ಲೇ ಚಿನ್ನಾಭರಣ ಕಳ್ಳತನ ಮಾಡಿದ ಪ್ರೇಮಿ ಜೊತೆಗೆ ಆತನ ಸ್ನೇಹಿತ ಸೇರಿ ಮೂವರನ್ನು ಚಾಮರಾಜನಗರ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜನಗರ, ಫೆಬ್ರವರಿ 4: ಅಡುಗೆ ಮನೆಯ ಕಿಟಕಿ ಸರಳು ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಪ್ರೇಮಿಗಳು ಸೇರಿ ಮೂವರನ್ನು ಚಾಮರಾಜನಗರ ಜಿಲ್ಲೆ ಪೊಲೀಸರು ಜೈಲಿಗಟ್ಟಿದ್ದಾರೆ.
ಭರತ್ ಹಾಗೂ ಕಾವ್ಯ, ಲೋಹಿತ್ ಕುಮಾರ್ ಬಂಧಿತ ಆರೋಪಿಗಳು. ಭರತ್ ಹಾಗೂ ಕಾವ್ಯ ಪ್ರೇಮಿಗಳಾದ್ದು, ಹಣದ ಮೋಹಕ್ಕೆ ಬಿದ್ದು ಭರತ್ ಚಿನ್ನವನ್ನು ಕದ್ದು ಕಾವ್ಯಳಿಗೆ ತಂದು ಕೊಟ್ಟಿದ್ದ. ಈ ಪ್ರೇಮಿಗಳಿಗೆ ಲೋಹಿತ್ ಎನ್ನುವಾತ ಸಹಾಯ ಮಾಡಿದ್ದು, ಸದ್ಯ ಆತನೂ ಜೈಲುಪಾಲಾಗಿದ್ದಾನೆ.
ಕೊಳ್ಳೇಗಾಲದ ಶ್ರೀಬಸವೇಶ್ವರ ನಗರದ ನಿವಾಸಿ ಹಾಗೂ ದತ್ತ ಮೆಡಿಕಲ್ ಮಾಲೀಕ ವಿನಯ್ ಅವರ ಮನೆಯಲ್ಲಿ ಜನವರಿ 18ರಂದು ಕಿಟಕಿ ಸರಳನ್ನು ಕತ್ತರಿಸಿ ಒಳ ನುಗ್ಗಿದ ಖದೀಮರು 513 ಗ್ರಾಂ ಚಿನ್ನಾಭರಣ ಹಾಗೂ 49 ಸಾವಿರ ನಗದನ್ನು ದೋಚಿ ಪರಾರಿಯಾಗಿದ್ದರು.
ದತ್ತ ಮೆಡಿಕಲ್ ಮಾಲೀಕ ವಿನಯ್ ಅವರು ಭಾವನ ಮನೆ ಶಿವಮೊಗ್ಗಕ್ಕೆ ಹೋಗಿದ್ದರು. ಇವರ ಪತ್ನಿ ರಶ್ಮಿ ಮನೆಗೆ ಬೀಗ ಹಾಕಿಕೊಂಡು ಅಂಗಡಿಗೆ ಬಂದಿದ್ದ ವೇಳೆ, ವಿನಯ್ ಅವರ ಹಿರಿಯ ಸಹೋದರ ನಾಗರಾಜು ಬಾಬು ಅವರ ಮೆಡಿಕಲ್ ಅಂಗಡಿಯಲ್ಲಿ 10 ವರ್ಷದಿಂದ ನಂಬಿಕಸ್ಥ ನೌಕರನಾಗಿ ಕೆಲಸ ಮಾಡುತ್ತಿದ್ದ ಭರತ್ ಈ ಕೃತ್ಯ ಎಸಗಿದ್ದಾನೆ.
ವಿನಯ್ ಅವರ ಮನೆಯಲ್ಲಿ ಯಾರೂ ಇಲ್ಲ ಎನ್ನುವುದನ್ನು ಅರಿ ಭರತ್ ಉಂಡ ಮನೆಗೆ ದ್ರೋಹ ಬಗೆದಿದ್ದಾನೆ. ಕೊಳ್ಳೇಗಾಲದಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿ, ಮೈಸೂರಿನಲ್ಲಿ ಬ್ಯೂಟಿಪಾರ್ಲರ್ ನಡೆಸುತ್ತಿದ್ದ ಪ್ರೇಯಸಿಗೆ ಕೊಟ್ಟು ಅದನ್ನು ಮಾರಾಟ ಮಾಡಲು ಯತ್ನಿಸಿದ್ದಾನೆ. ಇವರ ಜೊತೆ ಭರತ್ ಸ್ನೇಹಿತ ಲೋಹಿತ್ ಕುಮಾರ್ ಸಹ ಕೈ ಜೋಡಿಸಿದ್ದಾನೆ.
ಇತ್ತ ಚಿನ್ನಾಭರಣ ಕಳ್ಳತನ ಪ್ರಕರಣ ಸಂಬಂಧ ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 513 ಗ್ರಾಂ ಚಿನ್ನಾಭರಣ, 20 ಸಾವಿರ ರೂಪಾಯಿ ನಗದು, ಒಂದು ಬೈಕ್, ಒಂದು ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.