ಚಾಮರಾಜನಗರ: ಹಸಿವಿನಿಂದಲೇ ಕಂಡ ಕಂಡಲ್ಲಿ ಚಿರತೆಗಳ ಸಾವು: ಪರಿಹಾರವೇನು?
ಚಾಮರಾಜನಗರ, ಸೆಪ್ಟೆಂಬರ್ 24: ಚಾಮರಾಜನಗರ ಜಿಲ್ಲೆಯಲ್ಲಿ ಚಿರತೆಗಳ ಸಂಖ್ಯೆ ಅಧಿಕವಾಗಿದ್ದು, ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ಸೆರೆಯಾದರೆ ಮತ್ತೊಂದೆಡೆ ಹಸಿವಿನಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದ ಹೊರವಲಯದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆಯೊಂದು ಬಿದ್ದಿದೆ.
ಗುಂಡ್ಲುಪೇಟೆ ತಾಲೂಕಿನ ಪಡುಗೂರು ಗ್ರಾಮದ ಶಿವಕುಮಾರ್ ಎಂಬುವವರ ಜಮೀನಿನಲ್ಲಿ ಇರಿಸಿದ್ದ ಬೋನಿನಲ್ಲಿ ಸುಮಾರು 5ರಿಂದ 6 ವರ್ಷದ ಗಂಡು ಚಿರತೆ ಸೆರೆಯಾಗಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೈತರ ಒತ್ತಾಯದ ಮೇರೆಗೆ ಗುಂಡುಪೇಟೆ ಬಫರ್ ಜೋನ್ವಲಯ ಅರಣ್ಯಾಧಿಕಾರಿಗಳು ಜಮೀನಿನಲ್ಲಿ ಬೋನ್ ಇರಿಸಿದ್ದರು. ಇದೀಗ ಆ ಬೋನಿಗೆ ಚಿರತೆ ಬಿದ್ದಿದೆ.

ಜಮೀನು ಮಾಲೀಕರು ಮಂಗಳವಾರ ಬೆಳಗ್ಗೆ ಜಮೀನಿಗೆ ಬೇಟಿ ನೀಡಿದ್ದ ವೇಳೆ ಬೋನಿನಲ್ಲಿ ಚಿರತೆ ಸೆರೆಯಾಗಿರುವುದು ತಿಳಿದು ಬಂದಿದೆ. ಅರಣ್ಯಾಧಿಕಾರಿಗಳಿಗೆ ಮಾಹಿತಿ ತಿಳಿಸಿದ ಕೂಡಲೇ ಆಗಮಿಸಿದ ಆರ್ಎಫ್ಒ ಸತೀಶ್ ಕುಮಾರ್ ನೇತೃತ್ವದ ತಂಡ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
ವಡ್ಡರಹಳ್ಳಿ ಬಳಿ ಹಸಿವಿನಿಂದ ಚಿರತೆ ಸಾವು
ಚಾಮರಾಜನಗರ ತಾಲೂಕಿನ ಹರದನಹಳ್ಳಿ ಹೋಬಳಿಯ ವಡ್ಡರಹಳ್ಳಿ ಗ್ರಾಮದ ಬಳಿಯ ಸರ್ಕಾರಿ ಜಮೀನೊಂದರಲ್ಲಿ ಚಿರತೆ ಮೃತದೇಹ ಪತ್ತೆಯಾಗಿದ್ದು ಹಸಿವಿನಿಂದ ಚಿರತೆ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ ಚಾಮರಾಜನಗರ ಪ್ರಾದೇಶಿಕ ವಲಯ ವ್ಯಾಪ್ತಿಯ ವಡ್ಡರಹಳ್ಳಿಗ್ರಾಮದ ಸ.ನಂ. 63 ಸರ್ಕಾರಿ ಖರಾಬು ಜಮೀನಿನಲ್ಲಿ ಸೋಮವಾರ ಚಿರತೆ ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿದು ಬಿಆರ್ಟಿ ಹುಲಿ ಯೋಜನೆ ನಿರ್ದೇಶಕ ಶ್ರೀಪತಿ, ಎಸಿಎಫ್ ಪ್ರಕಾಶ್ಕರ್ ಅಕ್ಷಯ್ ಅಶೋಕ್, ರಮೇಶ್ ಸೇರಿದಂತೆ ಇತರೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಬಂಡೀಪುರಹುಲಿ ಯೋಜನೆಯ ಪಶು ವೈದ್ಯಾಧಿಕಾರಿ ಡಾ. ವಾಸೀಮ್ ಮಿರ್ಜಾ ಮೃತ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದರು. ಅಂದಾಜು 8 ತಿಂಗಳಿಂದ 1 ವರ್ಷ ವಯಸ್ಸಿನ ಚಿರತೆ ಇದಾಗಿದ್ದು ಚಿರತೆ ಮರಿಯು ಹಸಿವಿನಿಂದ ಮೃತಪಟ್ಟಿರುವುದಾಗಿ ಪ್ರಾಥಮಿಕ ಪರೀಕ್ಷೆಯಿಂದ ತಿಳಿದುಬಂದಿದೆ. ಬಳಿಕ ನಿಯಮಾನುಸಾರ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಚಿರತೆ ಕಳೇಬರವನ್ನು ವಿಲೇವಾರಿ ಮಾಡಲಾಗಿದೆ.












Click it and Unblock the Notifications