ಚಾಮರಾಜನಗರದ ಕಕ್ಕೆಹೊಲದ ಜನಕ್ಕೆ ಕಾಲುದಾರಿಯೇ ರಾಜಮಾರ್ಗ
ಚಾಮರಾಜನಗರ,
ಜುಲೈ 1: ಆಡಳಿತಾರೂಢರು ಅಭಿವೃದ್ಧಿಯ ಮಂತ್ರವನ್ನು ಜಪಿಸುತ್ತಾ ಬಡಜನರ ಉದ್ಧಾರಕ್ಕಾಗಿ ಮಾಡಿದ ಸಾಧನೆಗಳನ್ನು ಪುಂಖಾನುಪುಂಖವಾಗಿ ಹೇಳುತ್ತಿದ್ದರೂ ಕಾಡಂಚಿನಲ್ಲಿರುವ ಅದೆಷ್ಟೋ ಹಳ್ಳಿಗಳ ಜನರು ಮೂಲ ಸೌಕರ್ಯ ಕಾಣದೆ ಇನ್ನೂ ಶಿಲಾಯುಗದ ಜನರಂತೆ ಸೌಲಭ್ಯ ವಂಚಿತರಾಗಿ ಜೀವನ ಸಾಗಿಸುತ್ತಿದ್ದಾರೆ. id="toptextpromo"> id='are-slot-1' class='oiad oi-axt oiadv'>ಇದಕ್ಕೊಂದು
ನಿದರ್ಶನ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಕ್ಕೆಹೊಲ ಗ್ರಾಮ. ಇಲ್ಲಿಗೆ ಒಮ್ಮೆ ಹೋಗಿ ನೋಡಿ ಬಂದರೆ ಅಲ್ಲಿನ ಜನರ ಸಂಕಷ್ಟ ಏನು ಎಂಬುದು ಅರ್ಥವಾಗುತ್ತದೆ. ಪ್ರತಿ ಹಳ್ಳಿಯ ಜನ ಇಂದು ನಿರೀಕ್ಷೆ ಮಾಡುವುದು ಊರಿಗೆ ಒಂದೊಳ್ಳೆ ರಸ್ತೆ. ಗ್ರಾಮಕ್ಕೆ ರಸ್ತೆ ಬಂದರೆ ಉಳಿದ ಎಲ್ಲ ಸೌಕರ್ಯ ಪಡೆದುಕೊಳ್ಳಲು ಸಾಧ್ಯ. ಆದರೆ ಕಕ್ಕೆಹೊಲ ಗ್ರಾಮಕ್ಕೆ ಸೂಕ್ತ ರಸ್ತೆಯೇ ಇಲ್ಲ. ಹೀಗಾಗಿ ಎಲ್ಲವನ್ನು ತಲೆಮೇಲೆ ಹೊತ್ತುಕೊಂಡೇ ಸಾಗಬೇಕು. ಆರೋಗ್ಯ ಕೈಕೊಟ್ಟರೆ ಅವರನ್ನು ಹೊತ್ತು ಆಸ್ಪತ್ರೆಗೆ ಸೇರಿಸುವ ಹೊತ್ತಿಗೆ ರೋಗಿ ಕೈಲಾಸ ಸೇರಿಬಿಡುತ್ತಾನೆ. ಮಕ್ಕಳು ಶಾಲೆಗೆ ಹೋಗಬೇಕಾದರೆ ಕಾಡು ರಸ್ತೆಯಲ್ಲಿ ಕಾಡುಪ್ರಾಣಿಗಳ ಭಯದಲ್ಲೇ ಎರಡು ಕಿ.ಮೀ. ನಡೆಯಬೇಕು. ಮನೆಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನಂತೂ ತಲೆ ಮೇಲೆಯೇ ಹೊತ್ತು ಸಾಗಬೇಕು. id='are-slot-2' class='oiad oi-axt oiadv'>
ಹತ್ತು ಹಲವು ಸಮಸ್ಯೆಗಳಲ್ಲಿ ಜನಜೀವನ
ಕಕ್ಕೆಹೊಲ ಗ್ರಾಮ ತಾಲೂಕು ಕೇಂದ್ರ ಹನೂರಿನಿಂದ 45 ಕಿ.ಮೀ. ದೂರದಲ್ಲಿದ್ದು, ಪೊನ್ನಾಚಿ ಗ್ರಾಮ ಪಂಚಾಯತಿಗೆ ಸೇರಿದ ಅರಣ್ಯದಂಚಿನ ಮರೂರಿಗೆ ಹೊಂದಿಕೊಂಡಂತೆ ಇದೆ. ಇಲ್ಲಿ ಮೂರ್ನಾಲ್ಕು ತಲೆಮಾರುಗಳಿಂದ ಕೃಷಿ ಮಾಡಿಕೊಂಡು ಜನ ಜೀವನ ಸಾಗಿಸುತ್ತಿದ್ದಾರೆ. ಕಾಡಂಚಿಗೆ ಹೊಂದಿಕೊಂಡಂತೆ ಗ್ರಾಮವು ಇರುವುದರಿಂದ ಇಲ್ಲಿ ಕಾಡುಪ್ರಾಣಿಗಳ ಹಾವಳಿಯೂ ಇದ್ದೇ ಇದೆ. ಆದರೂ ಜನ ಎಲ್ಲ ಸಮಸ್ಯೆಗಳನ್ನು ಎದುರಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ.
ಇನ್ನು ಗ್ರಾಮದಲ್ಲಿ ಸೋಲಿಗ, ಭೋವಿ, ಪರಿಶಿಷ್ಟ ಜಾತಿ ಹಾಗೂ ಲಿಂಗಾಯತರು ಸೇರಿದಂತೆ ಸುಮಾರು ನೂರಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಸುಮಾರು ನಾನೂರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇವರೆಲ್ಲರೂ ತಮ್ಮ ಊರಿನಿಂದ ಹೊರಗೆ ಹೋಗಬೇಕೆಂದರೆ ಎರಡು ಕಿ.ಮೀ. ನಡೆಯಲೇಬೇಕು. ಹೊಂಡಮಯವಾದ, ಕಲ್ಲು, ಗುಡ್ಡಗಳಿಂದ ಕೂಡಿದ ರಸ್ತೆಯಲ್ಲಿ ನಡೆಯಬೇಕು. ಗ್ರಾಮಕ್ಕೆ ನಾಲ್ಕು ಚಕ್ರದ ವಾಹನಗಳಿರಲಿ, ಬೈಕ್ ಕೂಡ ಹೋಗಲಾಗದ ಸ್ಥಿತಿಯಿದೆ. ಕಳೆದ ಅಷ್ಟು ವರ್ಷಗಳಿಂದ ಜನಕ್ಕೆ ತಮ್ಮ ಅಗತ್ಯ ವಸ್ತುಗಳನ್ನು ಹೊತ್ತುಕೊಂಡು ಸಾಗುವುದು ಅನಿವಾರ್ಯವಾಗಿದೆ.

ರಸ್ತೆ ನಿರ್ಮಿಸಲು ಮುಂದಾಗದ ಜನಪ್ರತಿನಿಧಿಗಳು
ಮನೆಕಟ್ಟಲು, ಶೌಚಾಲಯ ನಿರ್ಮಿಸಲು ಬೇಕಾದ ಸಾಮಗ್ರಿಗಳನ್ನು ಮರೂರು ತನಕ ವಾಹನಗಳಲ್ಲಿ ಕೊಂಡೊಯ್ದು ಅಲ್ಲಿಂದ ಹೊತ್ತುಕೊಂಡೇ ಹೋಗುತ್ತಾರೆ. ಇಲ್ಲಿಗೆ ಸಮೀಪದ ಪೊನ್ನಚ್ಚಿಯಲ್ಲಿ ಗಣಿಗಾರಿಕೆಯನ್ನು ಸುಮಾರು ನಾಲ್ಕು ದಶಕಗಳ ಹಿಂದೆಯೇ ನಡೆಸಲಾಗಿತ್ತು. ಇಲ್ಲಿನ ಗ್ರಾನೈಟ್ ಗೆ ಉತ್ತಮ ಬೇಡಿಕೆ ಇದ್ದುದರಿಂದಾಗಿ ಜಮೀನು ಮಾಲೀಕರ ಖಾಸಗಿ ವ್ಯಕ್ತಿಗಳು ಭೂಮಿಯನ್ನು ಬಗೆದು ಹಣ ಮಾಡಿಕೊಂಡರು. ಸರ್ಕಾರವಾಗಲೀ ಸ್ಥಳೀಯ ಜನಪ್ರತಿನಿಧಿಗಳಾಗಲೀ ಇತ್ತ ಗಮನಹರಿಸಲಿಲ್ಲ. ಪರಿಣಾಮ ಮರೂರಿನಂತಹ ಗ್ರಾಮಗಳು ಕುಗ್ರಾಮಗಳಾಗಿಯೇ ಉಳಿದು ಹೋದವು. ಇಲ್ಲಿನವರಿಗೆ ಮೂಲಸೌರ್ಕರ್ಯ ಕಲ್ಪಿಸಿಕೊಡಬೇಕೆಂಬ ಚಿಕ್ಕ ಆಲೋಚನೆಯೂ ಜನಪ್ರತಿನಿಧಿಗಳಿಗೆ ಬಂದಿಲ್ಲ. ಚುನಾವಣೆ ವೇಳೆ ಭರವಸೆ ನೀಡಿ ಮತ ಹಾಕಿಸಿಕೊಂಡು ಬಳಿಕ ಮರೆಯುವುದು ಇಲ್ಲಿ ಮಾಮೂಲು.

ತಲೆಮೇಲೆ ಹೊತ್ತು ಸಾಗುವ ಜನ
ಇದರಿಂದಾಗಿ ಇಲ್ಲಿನ ಜನ ಇವತ್ತಿಗೂ ಕಾಲು ರಸ್ತೆಯಲ್ಲಿಯೇ ಗ್ಯಾಸ್ ಸಿಲಿಂಡರ್, ಪಡಿತರ ಅಕ್ಕಿ, ದಿನ ಬಳಕೆ ವಸ್ತುಗಳನ್ನು ತಲೆ ಮೇಲೆ ಹೊತ್ತು ಸಾಗಲೇಬೇಕಾಗಿದೆ. ವಯಸ್ಸಾದ ಮತ್ತು ಗರ್ಭಿಣಿಯರನ್ನು ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಬೇಕಾದರೆ ಜೋಲಿ ಕಟ್ಟಿ ಹೆಗಲ ಮೇಲೆ ಹೊತ್ತು ಸುಮಾರು ಮೂರು ಕಿ.ಮೀ ನಡೆಯಬೇಕಾಗಿದೆ. ಮರೂರು ಗ್ರಾಮದಿಂದ ಕಕ್ಕೆಹೊಲ ಗ್ರಾಮಕ್ಕೆ ಸಮರ್ಪಕ ರಸ್ತೆಯಿಲ್ಲ. ಜಮೀನುಗಳ ನಡುವೆ ಹಳ್ಳ ಕೊಳ್ಳ, ಗುಡ್ಡದ ಹಾದಿಯಿದ್ದು ಇದುವೇ ಇಲ್ಲಿನವರ ಪಾಲಿನ ರಾಜಮಾರ್ಗ. ಜನಪ್ರತಿನಿಧಿಗಳು ಮತ್ತು ಸರ್ಕಾರದ ಅಧಿಕಾರಿಗಳು ಕಂದಾಯ ದಾಖಲಾತಿಗಳನ್ನು ಪರಿಶೀಲಿಸಿ ಸುಮಾರು ಆರು ಕಿ.ಮೀ ರಸ್ತೆ ನಿರ್ಮಾಣ ಮಾಡಿದರೆ ಗ್ರಾಮದ ಸಮಸ್ಯೆ ಬಗೆಹರಿಯುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯ.

ಶಾಸಕರಿಂದ ಸಮಸ್ಯೆ ಬಗೆಹರಿಸುವ ಭರವಸೆ
ಈ ಕುರಿತಂತೆ ಪ್ರತಿಕ್ರಿಯಿಸಿರುವ ಹನೂರು ಕ್ಷೇತ್ರದ ಶಾಸಕರಾದ ನರೇಂದ್ರ ರಾಜುಗೌಡ ಅವರು, ಮರೂರು ಕಕ್ಕೆಹೊಲ ಗ್ರಾಮದ ರಸ್ತೆ ಕುರಿತಂತೆ ಸಂಬಂಧಿತ ಇಲಾಖೆ ಮತ್ತು ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಲಾಗುವುದು, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಚ್ಚಾ ರಸ್ತೆ ನಿರ್ಮಾಣ ಮಾಡಲು ಸಾಧವಿದೆಯೇ ಎಂದು ಪರಿಶೀಲಿಸುವ ಭರವಸೆ ನೀಡಿದ್ದಾರೆ.












Click it and Unblock the Notifications