ಮಹಿಳೆಗೆ ಕಪಾಳಮೋಕ್ಷ:KRSನಿಂದ ವಿ.ಸೋಮಣ್ಣ ವಿರುದ್ಧ ದೂರು ದಾಖಲು
ಚಾಮರಾಜನಗರ, ಅಕ್ಟೋಬರ್ 24: ಮಹಿಳೆಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದ ವಸತಿ ಸಚಿವ ವಿ.ಸೋಮಣ್ಣ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಿಸಿದೆ.
ದೂರು ದಾಖಲಿಸಿರುವ ಕರ್ನಾಟಕ ರಾಷ್ಟ್ರ ಸಮಿತಿಯು ವಿ.ಸೋಮಣ್ಣ ಅವರು ಸಚಿವ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು. ಸರ್ಕಾರ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಸಬೇಕು ಎಂದು ಆಗ್ರಹಿಸಿದೆ.
ಪ್ರಕರಣದಲ್ಲಿ ವಿಧಾನಸಭೆ ಸಭಾಧ್ಯಕ್ಷರು ಮತ್ತು ರಾಜ್ಯಪಾಲ ಥಾವರ್ ಚೆಂದ್ ಗೆಹಲೋಟ್ ಅವರು ಮಧ್ಯೆ ಪ್ರವೇಶಿಸಬೇಕು. ವೇದಿಕೆ ಮೇಲೆ ಬಹಿರಂಗವಾಗಿ ಒಬ್ಬ ಬಡ ಅಮಾಯಕ ಮಹಿಳೆ ಮೇಲೆ ಸಚಿವರು ದೈಹಿಕವಾಗಿ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನೈತಿಕತೆ ಇದಿದ್ದೆ ಆದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕೂಡಲೇ ರೌಡಿ ವರ್ತನೆ ಪ್ರದರ್ಶಿಸಿ ವಸತಿ ಸಚಿವ ವಿ. ಸೋಮಣ್ಣ ಅವರಿಂದ ರಾಜೀನಾಮೆ ಪಡೆದು ಜೈಲಿಗೆ ಕಳುಹಿಸಬೇಕು ಎಂದು ಕೆಆರ್ಎಸ್ ಒತ್ತಾಯಿಸಿದೆ. ಮಹಿಳೆ ಮೇಲೆ ಈ ರೀತಿ ಜನಪ್ರತಿನಿಧಿಗಳ ವರ್ತನೆ ನಡೆಯುತ್ತದೇ. ಹೀಗಾಗಿ ರಾಜ್ಯಪಾಲರು ಮತ್ತು ಸ್ಪೀಕರ್ ಮಧ್ಯಪ್ರವೇಶಿಸಿ ರಾಜ್ಯಕ್ಕೆ ಹಾಗೂ ಮಹಿಳೆಗೆ ನ್ಯಾಯ ಕೊಡಿಸಬೇಕು.
ಯಾರೇ ತಪ್ಪು ಮಾಡಿದರೂ ಕೆಆರ್ಎಸ್ ಬಿಡಲ್ಲ
ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಪ್ರಕರಣ ದಾಖಲಿಸಿ ಸಚಿವರನ್ನು ಬಂಧಿಸಬೇಕು. ಯಾರೇ ತಪ್ಪು ಮಾಡಿದರೂ ಕಾನೂನಿಗೆ ಎಲ್ಲರು ಸಮಾನರು. ಸರ್ಕಾರ ಅವರನ್ನು ಶಾಸಕ ಸ್ಥಾನದಿಂದ ಕೆಳಗಿಸಬೇಕು. ತಪ್ಪು ಮಾಡಿ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ ಕೇವಲ ಕೆಳಸ್ತರದ ಅಧಿಕಾರಿಗಳನ್ನು ಮಾತ್ರವಲ್ಲ ಮಂತ್ರಿಗಳನ್ನು ಕೆಆರ್ಎಸ್ ಪಕ್ಷ ಬಿಡುವುದಿಲ್ಲ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಯುವ ಘಟಕದ ಅಧ್ಯಕ್ಷ ರವಿಕುಮಾರ್ ತಿಳಿಸಿದ್ದಾರೆ.
ಶನಿವಾರ ನಡೆದದ್ದೇನು?
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ತಾಲೂಕಿನ ಹಂಗಳ ಗ್ರಾಮದಲ್ಲಿ ಶನಿವಾರ ಸಂಜೆ ನಿವೇಶನಗಳ ಹಕ್ಕುಪತ್ರಗಳನ್ನು ವಿತರಸುವ ಕಾರ್ಯಕ್ರಮ ಜರುಗಿತ್ತು. ಈ ವೇಳೆ ಮಹಿಳೆಯೊಬ್ಬರು ತಮ್ಮ ಸಮಸ್ಯೆಯನ್ನು ಸಚಿವರ ಬಳಿ ಹೇಳಿಕೊಳ್ಳಲು ವೇದಿಕೆ ಮೇಲೆ ಬಂದರು. ಈ ವೇಳೆ ಸಚಿವರ ಕಾಲಿಗೆ ನಮಸ್ಕಾರ ಮಾಡಲು ಮುಂದಾದ ಮಹಿಳೆಗೆ ವಿ. ಸೋಮಣ್ಣ ಕಪಾಳಕ್ಕೆ ಹೊಡೆದ ಘಟನೆ ನಡೆಯಿತು.

ಸಚಿವರ ಈ ವರ್ತನೆಗೆ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಅನೇಕ ಮುಖಂಡರು ಖಂಡಿಸಿದರು. ಸಾರ್ವಜನಿಕರ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಯಿತು. ಇದರಿಂದ ಎಚ್ಚೆತ್ತ ಸಚಿವ ವಿ.ಸೋಮಣ್ಣ ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ ಕ್ಷಮೆ ಕೇಳಿದ್ದಾರೆ. ನನಗೆ ಮಹಿಳೆಯರು ಮತ್ತು ಮಕ್ಕಳ ಮೇಲೆ ಗೌರವವಿದೆ. ಆ ಹೆಣ್ಣು ಮಗಳು ಪದೇ ಪದೆ ವೇದಿಕೆಗೆ ಬರುತ್ತಿದ್ದಳು. ತಾಯಿ ಎಷ್ಟು ಸರಿ ಬರುತ್ತೀಯಾ ಎಂದು ವಿಚಾರಿಸಿ, ನಿನ್ನ ಸಮಸ್ಯೆ ಬಗೆಹರಿಸುತ್ತೇನೆ ಎಂದು ಕೈಯಲ್ಲಿ ಪಕ್ಕಕ್ಕೆ ಸರಿಸಿದೆ. ವಿನಃ ಕೆಟ್ಟ ಉದ್ದೇಶವಿರಲಿಲ್ಲ. ಯಾರಿಗಾದರೂ ನನ್ನ ವರ್ತನೆಯಿಂದ ನೋವಾಗಿದ್ದರೆ ವಿಷಾಧ ವ್ಯಕ್ತಪಡಿಸುತ್ತೇನೆ ಎಂದು ಕ್ಷಮೆ ಕೇಳಿದ್ದಾರೆ.












Click it and Unblock the Notifications