ಕಾವೇರಿ ನದಿಯಲ್ಲಿ ಸಿಲುಕಿಕೊಂಡಿದ್ದ ತಮಿಳುನಾಡು ಪ್ರವಾಸಿಗರ ರಕ್ಷಣೆ
ಚಾಮರಾಜನಗರ, ಜುಲೈ 27: ಕೆಆರ್ ಎಸ್ ನಿಂದ ಕಾವೇರಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟ ಕಾರಣ ಇದರ ಅರಿವಿಲ್ಲದೆ ನದಿಯಲ್ಲಿ ಈಜಾಡುತ್ತಿದ್ದ ಪ್ರವಾಸಿಗರು ಪ್ರವಾಹದಲ್ಲಿ ಸಿಲುಕಿ ದಡ ಸೇರಲು ಪರದಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಬಳಿಯ ದರ್ಗಾದ ಬಳಿ ಜುಲೈ 26 ರಂದು ನಡೆದಿದೆ.
ಪ್ರವಾಸಕ್ಕೆಂದು ತಮಿಳುನಾಡಿನಿಂದ ಆಗಮಿಸಿದ್ದ ಪಳನಿಯಪ್ಪನ್, ತಂಬ, ದೊರೆಸ್ವಾಮಿ ಹಾಗೂ ಪುಷ್ಪ ಕುಮಾರಿ ಎಂಬುವರೇ ಕಾವೇರಿ ನದಿಯಲ್ಲಿ ಸಿಲುಕಿ ಪ್ರಾಣಾಪಾಯದಿಂದ ಪಾರಾದವರಾಗಿದ್ದಾರೆ.

ಇವರು ತಮಿಳುನಾಡಿನಿಂದ ಪ್ರವಾಸಕ್ಕೆಂದು ಆಗಮಿಸಿದ್ದರಲ್ಲದೆ, ಈ ನಾಲ್ಕು ಜನರು ಕೆಲ ಕಾಲ ಸತ್ತೇಗಾಲ ಹಾಗೂ ಶಿವನಸಮುದ್ರದ ನಡುವೆ ಇರುವ ದರ್ಗಾದ ಬಳಿಯ ನೀರಿನಲ್ಲಿ ಈಜಲು ತೆರಳಿದ್ದಾರೆ. ಇವರು ನದಿಯಲ್ಲಿ ಈಜುವ ವೇಳೆ ನದಿಯಲ್ಲಿ ನೀರಿನ ಹರಿವು ಹೆಚ್ಚತೊಡಗಿದೆ.
ಇದರಿಂದ ಭಯಗೊಂಡ ಅವರು ದಡ ಸೇರಲು ಸಾಧ್ಯವಾಗದೆ ನದಿ ಮಧ್ಯೆಯಿದ್ದ ಬಂಡೆಯ ಮೇಲೆ ನಿಂತು ತಮ್ಮನ್ನು ರಕ್ಷಿಸುವಂತೆ ಕೂಗಿಕೊಂಡಿದ್ದಾರೆ. ಇದನ್ನು ಕೇಳಿದ ಸ್ಥಳೀಯರು ಅತ್ತ ತೆರಳಿ ನೋಡಿದಾಗ ನೀರಿನಲ್ಲಿ ಸಿಲುಕಿಕೊಂಡಿರುವುದು ಕಂಡಿದೆ. ತಕ್ಷಣ ಅವರು, ಕೊಳ್ಳೇಗಾಲ ಗ್ರಾಮಾಂತರ ಪೊಲೀಸರಿಗೆ ತಿಳಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಈಜು ತಜ್ಞರಿಂದ ಎರಡು ಬಂಡೆಗಳ ನಡುವೆ ಏಣಿಯನ್ನು ಇಟ್ಟು ಅದರ ಮೇಲೆ ಬರುವಂತೆ ಪ್ರವಾಸಿಗರಿಗೆ ಧೈರ್ಯ ತುಂಬಿದ್ದಾರೆ. ನಂತರ ನಾಲ್ಕು ಜನರು ಸ್ಥಳೀಯರ, ಪೊಲೀಸರ ಹಾಗೂ ಈಜುಗಾರರ ಸಹಾಯದಿಂದ ದಡ ತಲುಪಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.












Click it and Unblock the Notifications