ಚಾಮರಾಜನಗರದಲ್ಲಿ ಕನ್ನಡ ರಾಜ್ಯೋತ್ಸವ; ಸಚಿವ ಸೋಮಣ್ಣಗೆ ಹೆಚ್ಚಿನ ಭದ್ರತೆ
ಚಾಮರಾಜನಗರ, ನವೆಂಬರ್, 01: ಸಚಿವ ಸೋಮಣ್ಣ ಅವರಿಗೆ ರೈತರು ಹಾಗೂ ಯಾರಾದರೂ ಕಪ್ಪು ಬಾವುಟ ಪ್ರದರ್ಶನ ಮಾಡಬಹುದು ಎಂಬ ಆತಂಕದ ಹಿನ್ನೆಲೆ ಭಾರಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ. ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ರಾಜ್ಯೋತ್ಸವ ಆಯೋಜಿಸಿದ್ದು, ಧ್ವಜಾರೋಹಣಕ್ಕೆ ಸಚಿವ ಸೋಮಣ್ಣ ಆಗಮಿಸಿದ್ದರು. ಸಚಿವರಿಗೆ ಈಗಾಗಲೇ ಕಪಾಳಮೋಕ್ಷ ವಿವಾದ ಎದುರಾಗಿದ್ದು, ಇದರಿಂದ ರೈತರು ಆಕ್ರೋಶಗೊಂಡು ಅಹಿತಕರ ಘಟನೆ ನಡೆಸಬಹುದು ಎಂಬ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮೂರು ಹಂತದಲ್ಲಿ ಪೊಲೀಸ್ ಸರ್ಪಗಾವಲನ್ನು ರೂಪಿಸಲಾಗಿದೆ.
ಮಹಿಳೆಗೆ ಕಪಾಳಮೋಕ್ಷ ಆರೋಪ
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ತಾಲೂಕಿನ ಹಂಗಳ ಗ್ರಾಮದಲ್ಲಿ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಮಹಿಳೆಯೊಬ್ಬರು ಸಮಸ್ಯೆ ಹೇಳಿಕೊಳ್ಳಲು ವೇದಿಕೆ ಮೇಲೆ ಬಂದಿದ್ದರು. ಮಹಿಳೆ ಸಚಿವರ ಕಾಲಿಗೆ ನಮಸ್ಕಾರ ಮಾಡಲು ಹೋದಾಗ ವಿ ಸೋಮಣ್ಣ ಕಪಾಳಮೋಕ್ಷ ಮಾಡಿದ್ದಾರೆ. ಈ ಘಟನೆಯಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ನಂತರ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಹಿಳೆಗೆ ಗೌರವ ನೀವು ಕೊಡುವುದು ಹೀಗೇನಾ ಎಂದು ವಿಪಕ್ಷಗಳು ಪ್ರಶ್ನೆ ಮಾಡುತ್ತಿವೆ. ಮತ್ತೊಂದೆಡೆ ಸಚಿವ ವಿ. ಸೋಮಣ್ಣ ವಿರುದ್ದ ರೈತರು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.
ಧ್ವಜಾರೋಹಣ ವೇಳೆ ಬಿಗಿ ಭದ್ರತೆ
ಆದ್ದರಿಂದ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ವೇಳೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಪರಿಣಾಮ ನಾಡಹಹಬ್ಬ, ರಾಷ್ಟೀಯ ಹಬ್ಬಗಳಿಗೆ ತುಂಬಿ ತುಳುಕುತ್ತಿದ್ದ ಜನರು ಇಂದಿನ ರಾಜ್ಯೋತ್ಸವದಲ್ಲಿ ಭಾಗಿ ಆಗಿಲ್ಲ. ಕಂದಾಯ ಇಲಾಖೆ ನೌಕರರು, ಶಿಕ್ಷಕರು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮಕ್ಕಳಿಗಷ್ಟೇ ರಾಜ್ಯೋತ್ಸವ ಸೀಮಿತವಾದಂತೆ ಕಾಣುತ್ತಿತ್ತು.

ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ
ರಾಷ್ಟ್ರಧ್ವಜ ಹಾಗೂ ನಾಡ ಧ್ವಜಾರೋಹಣ ನೆರವೇರಿಸಿದ ಸಚಿವ ಸೋಮಣ್ಣ ವಿವಿಧ ಇಲಾಖೆಗಳು ಸೇರಿದಂತೆ 19 ತುಕಡಿಗಳಿಂದ ಗೌರವ ವಂದನೆಯನ್ನು ಸ್ವೀಕರಿಸಿದರು. ಬಳಿಕ ಅವರು ಮಾತನಾಡಿದ ಅವರು, ಚಾಮರಾಜನಗರದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಜನರ ಆಸೆಯಂತೆ ನಾಡಿನ ಚೇತನ ಪುನೀತ್ ರಾಜ್ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ರಮೇಶ್, ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯತ್ರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications