ವಿಷಪ್ರಸಾದ ದುರಂತ:ಬಯಲಾಯ್ತು ಇಮ್ಮಡಿ ಮಹದೇವಸ್ವಾಮಿ ಕ್ರೂರತನ

ಚಾಮರಾಜನಗರ, ಡಿಸೆಂಬರ್ 19: ಹೆಣ್ಣು, ಹೊನ್ನು, ಮಣ್ಣಿನ ವ್ಯಾಮೋಹ ತ್ಯಜಿಸಿ ಆಧ್ಯಾತ್ಮಿಕ ನೆಲೆಯಲ್ಲಿ ಸರ್ವ ಜನರಿಗೂ ಒಳಿತನ್ನು ಮಾಡುತ್ತಾ ಇತರರಿಗೂ ಮಾದರಿಯಾಗಬೇಕಾಗಿದ್ದ ಸ್ವಾಮೀಜಿ ಅಮಾಯಕರ ಜೀವಕ್ಕೆ ಕಂಟಕವಾಗಿ ಪರಿಣಮಿಸುತ್ತಾರೆ ಎಂದರೆ ಅದಕ್ಕಿಂತ ನೋವಿನ ಸಂಗತಿ ಮತ್ತೊಂದಿಲ್ಲ.

ನಿಸ್ವಾರ್ಥದಿಂದ ಮಠಗಳನ್ನು ಕಟ್ಟಿ ಬೆಳೆಸಿ ಅದರ ಅಭಿವೃದ್ಧಿಯೊಂದಿಗೆ ಸಾಮಾನ್ಯ ಜನರಿಗೆ ದಾರಿ ದೀಪವಾಗಬೇಕಿದ್ದ ಸ್ವಾಮೀಜಿವೊಬ್ಬರು ದೇವಸ್ಥಾನವೊಂದಕ್ಕೆ ಹೆಚ್ಚಿನ ಆದಾಯ ಬರುತ್ತಿದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಅದನ್ನು ತನ್ನ ಸುಪರ್ಧಿಗೆ ಪಡೆಯಲು ಮುಂದಾಗಿ ಅದು ಸಾಧ್ಯವಾಗದೆ ಇದ್ದಾಗ ವಾಮಮಾರ್ಗ ಬಳಸಿ ಸಾಧ್ಯಮಾಡಿಕೊಳ್ಳಲು ಮುಂದಾಗಿರುವುದು ಯಾರು ಕ್ಷಮಿಸಲಾರದ ಕೃತ್ಯವಾಗಿದೆ.

ದೇವಾಲಯದ ಪ್ರಸಾದದಲ್ಲಿ ವಿಷಬೆರೆಸಿ ಸುಮಾರು 15 ಮಂದಿಯ ಪ್ರಾಣ ತೆಗೆದು ನೂರಾರು ಮಂದಿಯನ್ನು ಆಸ್ಪತ್ರೆಯಲ್ಲಿ ನರಳುವಂತೆ ಮಾಡುವ ಮೂಲಕ ರಾಜ್ಯ ಮಾತ್ರವಲ್ಲದೆ, ದೇಶವೇ ಇತ್ತ ತಿರುಗಿ ನೋಡುವಂತೆ ಮಾಡಿದ ಪ್ರಕರಣದ ಹಿಂದೆ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಸಾಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿ ಅವರ ಕೈವಾಡ ಇರುವುದು ನಂಬಿದ ಭಕ್ತರನ್ನು ದಿಗ್ಭ್ರಾಂತಗೊಳಿಸುವಂತೆ ಮಾಡಿದೆ.

ಹಾಗೆ ನೋಡಿದರೆ ಇವತ್ತು ವಿಷಪ್ರಸಾದದಿಂದ ಗಮನಸೆಳೆದ ಕಿಚ್ಚುಗುತ್ತಿ ಮಾರಮ್ಮ ದೇವಾಲಯ ಮೂರ್‍ನಾಲ್ಕು ದಶಕಗಳ ಹಿಂದೆ ಇವತ್ತು ಇದ್ದಂತೆ ಇರಲಿಲ್ಲ. ಇಷ್ಟೊಂದು ಅಭಿವೃದ್ಧಿಯೂ ಆಗಿರಲಿಲ್ಲ. ಉದ್ಭವ ಮೂರ್ತಿಯಾಗಿದ್ದ ಮಾರಮ್ಮನಿಗೆ ಚಿಕ್ಕದೊಂದು ಗರ್ಭಗುಡಿ ನಿರ್ಮಿಸಿ ಪೂಜೆ ಮಾಡಲಾಗುತ್ತಿತ್ತು.

ತಮಿಳುನಾಡಿನ ಪೂಜಾರಿಗಳಿಂದ ಪೂಜೆ

ತಮಿಳುನಾಡಿನ ಪೂಜಾರಿಗಳಿಂದ ಪೂಜೆ

ಅವತ್ತಿನ ದಿನಗಳಲ್ಲಿ ತಮಿಳುನಾಡಿನ ಪೂಜಾರಿಗಳು ಇಲ್ಲಿ ಪೂಜೆ ಮಾಡುತ್ತಿದ್ದರು. ಆಗ ಸರಿಯಾಗಿ ದೇವಾಲಯದ ಬಾಗಿಲು ತೆಗೆದು ಪೂಜಾ ಕಾರ್ಯಗಳು ನಡೆಯುತ್ತಿರಲಿಲ್ಲ. ಕೆಲವೇ ಕೆಲವು ಭಕ್ತರು ಮಾತ್ರ ಇಲ್ಲಿಗೆ ಬರುತ್ತಿದ್ದರು. ಹೀಗಾಗಿ ಇಲ್ಲಿ ಆದಾಯ ಕಾಣದ ಪೂಜಾರಿಗಳು ದೇವಾಲಯದ ನಿರ್ಲಕ್ಷ್ಯ ವಹಿಸಿದ್ದರು. ಕಾಲಕ್ರಮೇಣ ಸುಳ್ವಾಡಿ ಗ್ರಾಮದ ಜನ ನಮ್ಮೂರಿನ ದೇವಾಲಯವನ್ನು ಬೇರೆಯವರು ಏಕೆ ನೋಡಿಕೊಳ್ಳಬೇಕು. ನಾವೇ ಆಡಳಿತ ಮಂಡಳಿ ರಚಿಸಿ ದೇವಾಲಯದ ಅಭಿವೃದ್ಧಿಗೆ ಏಕೆ ಮುಂದಾಗಬಾರದು ಎಂದು ಯೋಚಿಸಿ ತಮಿಳುನಾಡಿನ ಪೂಜಾರಿಗಳನ್ನು ಮನವೊಲಿಸಿ ದೇವಾಲಯದ ಉಸ್ತುವಾರಿಯನ್ನು ತಮ್ಮ ವಶಕ್ಕೆ ಪಡೆದರು.

ದೇವಾಲಯಕ್ಕೆ ಬರುವವರ ಸಂಖ್ಯೆ ಹೆಚ್ಚಳ

ದೇವಾಲಯಕ್ಕೆ ಬರುವವರ ಸಂಖ್ಯೆ ಹೆಚ್ಚಳ

ಇದಾದ ಬಳಿಕ ಒಂದು ಆಡಳಿತ ಮಂಡಳಿ ರಚಿಸಿಕೊಂಡು ದೇವಾಲಯದ ಅಭಿವೃದ್ಧಿಗೆ ಮುಂದಾದರು. ದಿನ ಕಳೆಯುತ್ತಿದ್ದಂತೆಯೇ ದೇವಾಲಯಕ್ಕೆ ಬರುವವರ ಸಂಖ್ಯೆ ಹೆಚ್ಚಾಯಿತು. ಭಕ್ತರ ಮೇಲೆ ಮಾರಮ್ಮನ ಕೃಪೆಯೂ ಇತ್ತು. ಬೇಡಿದನ್ನು ನೆರವೇರಿಸುತ್ತಿದ್ದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತೆರಳಿ ಕೋಳಿ, ಕುರಿಯನ್ನು ಬಲಿ ನೀಡತೊಡಗಿದರು. ದಿನ ಕಳೆಯುತ್ತಿದ್ದಂತೆಯೇ ದೇವಾಲಯ ಅಭಿವೃದ್ಧಿಯಾಗತೊಡಗಿತು. ಇದನ್ನೆಲ್ಲ ನೋಡಿದ ತಮಿಳುನಾಡಿನ ಪೂಜಾರಿಗಳು ಮತ್ತೆ ನಮ್ಮ ವಶಕ್ಕೆ ನೀಡುವಂತೆ ಒತ್ತಾಯಿಸತೊಡಗಿದರಲ್ಲದೆ, ಈ ಸಂಬಂಧ ವ್ಯಾಜ್ಯ ನ್ಯಾಯಾಲಯದ ಮೆಟ್ಟಿಲೇರಿ ಗ್ರಾಮದ ಜನರ ಪರ ತೀರ್ಪು ಬಂದಿತ್ತು. ಬಳಿಕ ಆಡಳಿತ ಮಂಡಳಿ ರಚನೆಯಾಗಿ ಇದರ ಅಧ್ಯಕ್ಷ ಸ್ಥಾನವನ್ನು ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಸಾಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿಗೆ ನೀಡಲಾಗಿತ್ತು.

ಆದಾಯ ನೋಡಿ ಸ್ವಾಮೀಜಿ ಕಣ್ಣು ಕೆಂಪಾಗಿತ್ತು

ಆದಾಯ ನೋಡಿ ಸ್ವಾಮೀಜಿ ಕಣ್ಣು ಕೆಂಪಾಗಿತ್ತು

ದೇವಾಲಯಕ್ಕೆ ಬರುತ್ತಿರುವ ಆದಾಯವನ್ನು ನೋಡಿದ ಮೇಲೆ ಸ್ವಾಮೀಜಿಗೆ ಕಣ್ಣು ಕೆಂಪಾಗಿತ್ತು. ಇಷ್ಟೊಂದು ಆದಾಯವಿರುವ ದೇವಾಲಯವನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ತಂತ್ರ ಆರಂಭಿಸಿದ್ದರು. ಜತೆಗೆ ದೇವಾಲಯಕ್ಕೆ ಬರುವ ಹಣ, ಚಿನ್ನಾಭರಣವನ್ನು ತಾನೇ ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಇದು ಆಡಳಿತ ಮಂಡಳಿಯ ವಿರೋಧಕ್ಕೆ ಕಾರಣವಾಗಿತ್ತು. ಹೇಗಾದರೂ ಮಾಡಿ ದೇವಾಲಯದ ಆಡಳಿತವನ್ನು ತನ್ನ ವಶಕ್ಕೆ ಪಡೆಯಲೇ ಬೇಕೆಂದು ಹೊರಟ ಸ್ವಾಮೀಜಿ ಇದೀಗ ಮಾಡಿರುವುದು ಮಾತ್ರ ಮನುಕುಲವೇ ಸಹಿಸಲಾರದ ನರಮೇಧ ಎಂಬುದು ಇದೀಗ ಬಯಲಾಗಿದೆ. ತನ್ನ ಕೃತ್ಯಕ್ಕೆ ದೇವಾಲಯದ ಮ್ಯಾನೇಜರ್ ಮಾದೇಶ್ ಮತ್ತು ಆತನ ಪತ್ನಿ ಅಂಬಿಕಾ, ಇನ್ನೊಬ್ಬ ದೇವಾಲಯದ ಪಕ್ಕದ ನಾಗದೇವತೆಯ ದೇವಸ್ಥಾನದ ಪೂಜಾರಿ ದೊಡ್ಡಯ್ಯ ಮತ್ತು ಅಡುಗೆ ಮಾಡಿದ್ದ ಪುಟ್ಟಸ್ವಾಮಿ ಅವರನ್ನು ಬಳಸಿಕೊಂಡಿದ್ದಾರೆ ಎನ್ನುವುದು ಈಗ ಗೊತ್ತಾಗುತ್ತಿದೆ.

ನಿಜಕ್ಕೂ ದುರಂತವೇ ಸರಿ

ನಿಜಕ್ಕೂ ದುರಂತವೇ ಸರಿ

ಇನ್ನು ಮ್ಯಾನೇಜರ್ ಪತ್ನಿ ಅಂಬಿಕಾ ಈ ಕೃತ್ಯದಲ್ಲಿರುವುದು ನಿಜಕ್ಕೂ ದುರಂತವೇ ಸರಿ. ಈ ಘಟನೆಗೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ ರಾಜಮ್ಮ ಎಂಬ ಮಹಿಳೆ ರಾಮಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರಿಂದ ಹಲವರ ವಿರುದ್ಧ ಪ್ರಕರಣವೂ ದಾಖಲಾಗಿದ್ದು, ಪೊಲೀಸರು ಎಲ್ಲ ಮಾಹಿತಿಯನ್ನು ಕಲೆ ಹಾಕಿದ್ದು, ಕೊಳ್ಳೇಗಾಲದಲ್ಲಿ ನ್ಯಾಯಾಧೀಶರ ಮುಂದೆ ಆರೋಪಿಗಳನ್ನು ಹಾಜರುಪಡಿಸುವ ಸಾಧ್ಯತೆಯಿದೆ. ಅಲ್ಲದೆ ಪೊಲೀಸರು ಈ ಪ್ರಕರಣದ ತನಿಖೆ ಮುಗಿಸಿ ಕೃತ್ಯಕ್ಕೆ ಕಾರಣರು ಯಾರು ಎಂಬುದನ್ನು ಅಧಿಕೃತವಾಗಿ ಘೋಷಣೆ ಮಾಡಿದ ಬಳಿಕವಷ್ಟೆ ಎಲ್ಲ ಸಂಶಯಗಳಿಗೆ ತೆರೆ ಬೀಳಲಿದೆ. ಆದರೆ ಈ ಪ್ರಕರಣದ ಕಿಂಗ್‌ಪಿನ್ ಸಾಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿ ಎಂಬುದಂತು ಸತ್ಯ. ಈಗಾಗಲೇ ಮಠದಲ್ಲಿ ಸ್ವಾಮೀಜಿ ನಡೆಸಿರುವ ಕೃತ್ಯಗಳು ಮತ್ತು ಹಿರಿಯ ಸ್ವಾಮಿಗಳನ್ನು ತುಳಿಯಲು ನಡೆಸಿರುವ ತಂತ್ರಗಳು ಮಠಕ್ಕೆ ದಾನ ನೀಡಿದ ಭಕ್ತರ ಮೇಲೆಯೇ ನಡೆಸಿದ ದೌರ್ಜನ್ಯಗಳು ಬೇಕಾದಷ್ಟಿವೆ. ಮಠದ ಹೆಸರಿಗೆ ಮಸಿಬಳಿಯ ಬಾರದೆಂಬ ಕಾರಣಕ್ಕೆ ಎಲ್ಲವೂ ಗಪ್ ಚಿಪ್ ಆಗಿತ್ತಾದರೂ ಅದೆಲ್ಲವೂ ಇನ್ನು ಮುಂದೆ ಹೊರಬರುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+