ನಾನು ಪಕ್ಕಾ ರಾಚಯ್ಯ ಪ್ರಾಡೆಕ್ಟ್.. ಚಿಕ್ಕಂದಿನಲ್ಲಿ ಇಡ್ಲಿ, ದೋಸೆ ತಿನ್ನುತ್ತಿರಲಿಲ್ಲ: ಸಿಎಂ ಸಿದ್ದರಾಮಯ್ಯ
ಚಾಮರಾಜನಗರ, ಆಗಸ್ಟ್, 10: ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದಲ್ಲಿ ಮಾಜಿ ರಾಜ್ಯಪಾಲ ಬಿ.ರಾಚಯ್ಯ ಅವರ ಸ್ಮಾರಕ ಉದ್ಘಾಟಿಸಿದ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಹಾಗಾದರೆ ಏನೆಲ್ಲ ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಚಾಮರಾಜನಗರದಲ್ಲಿ ಬಿ.ರಾಚಯ್ಯ ಅವರ ಸ್ಮಾರಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮಪ್ಪ ಯಾವಾಗಲೂ 10 ಗಂಟೆಗೆ ಊಟ ಮತ್ತೇ 4 ಗಂಟೆಗೆ ಊಟ ಮಾಡುತ್ತಿದ್ದರು. ಈಗ ಗ್ರಾಮೀಣ ಭಾಗವು ಬದಲಾಗಿದೆ, ಬೆಳಗ್ಗೆ ಬ್ರೇಕ್ ಪಾಸ್ಟ್ ಬೇಕಾಗಿದೆ. ನಾವೆಲ್ಲಾ ಹುಡಗರಾಗಿದ್ದಾಗ ಇಡ್ಲಿ, ದೋಸೆ ತಿನ್ನುತ್ತಿರಲಿಲ್ಲ, ತಂಗಳು ಊಟ ತಿನ್ನುತ್ತಿದ್ದೆವು. ಅದೇ ರೀತಿ ರಾಚಯ್ಯ ಅವರೂ ಬೆಳೆದಿದ್ದಾರೆ, ಅವರು ಕರ್ನಾಟಕದ ರಾಜಕಾರಣಿಗಳಲ್ಲಿ ಮುತ್ಸದಿ ರಾಜಕಾರಣಿ ಎಂದು ಹೇಳಿದ್ದಾರೆ.

ಬಿ.ರಾಚಯ್ಯ ಅವರ ದೊಡ್ಡ ಗುಣ ಎಂದರೇ ಯುವ ರಾಜಕಾರಣಿಗಳನ್ನು ಬೆಳೆಸುತ್ತಿದ್ದರು. ನನ್ನನ್ನು ಒಮ್ಮೆ ಕರೆದು ಕಾವಲುಪಡೆ ಸದಸ್ಯನಾಗಿ ಮಾಡುತ್ತೇವೆ ಎಂದಿದ್ದರು. ಕನ್ನಡದ ಬಗ್ಗೆ ಕಳಕಳಿ ಇರುವ ನೀನೇ ಅಧ್ಯಕ್ಷ ಆಗಬೇಕು ಎಂದಿದ್ದರು. ನನಗೆ ಯಾವತ್ತೂ ಕೂಡ ಅಧಿಕಾರ ಬೇಕೆಂದು ಯಾರನ್ನೂ ಕೇಳಿರಲಿಲ್ಲ. ಆದರೆ ರಾಚಯ್ಯ ಅವರ ಪ್ರಯತ್ನದಿಂದ ಮೊದಲ ಬಾರಿ ಮಂತ್ರಿಯಾದೆ. ನಾನು ಮಂತ್ರಿಯಾಗಿ 40 ವರ್ಷ ತುಂಬಲಿದೆ, ಇದಕ್ಕೆ ರಾಚಯ್ಯ ಅವರೇ ಕಾರಣ ಎಂದರು.
ಹಿಂದುಳಿದ ವರ್ಗದವನಾದ ನನಗೆ ಪ್ರೋತ್ಸಾಹಿಸುವ ಉದ್ದೇಶದಿಂದ ರಾಚಯ್ಯ ನನ್ನನ್ನು ಮಂತ್ರಿ ಮಾಡಿದ್ದರು. ನಾನು ಅಂದು ಮಂತ್ರಿಯಾಗದಿದ್ದರೆ, ಎರಡು ಬಾರಿ ಮುಖ್ಯಮಂತ್ರಿ ಆಗಲು ಸಾಧ್ಯ ಆಗುತ್ತಿರಲಿಲ್ಲ. ಕೆಲವರಿಗೆ ನನ್ನ ಮುಂದೆ ಎರಡು ಬಾರಿ ಸಿಎಂ ಆದನಲ್ಲಾ ಎಂದು ನನ್ನನ್ನು ಕಂಡರೆ ಹೊಟ್ಟೆಯುರಿ ಎಂದರು.
ಡಾ.ಎಚ್.ಸಿ.ಮಹಾದೇವಪ್ಪಗೆ ಟಿಕೆಟ್ ಕೊಟ್ಟಿದ್ದು ಕೂಡ ರಾಚಯ್ಯ, ನಾನು ಮತ್ತು ಮಹಾದೇವಪ್ಪ ಇಬ್ಬರೂ ರಾಚಯ್ಯ ಅವರ ಪ್ರಾಡಕ್ಟ್ಗಳು. ರಾಜ್ಯದ ಎಲ್ಲಾ ಬಹುತೇಕ ಖಾತೆಗಳಲ್ಲಿ ರಾಚಯ್ಯ ಸಚಿವರಾಗಿ ಕಾರ್ಯ ಕಾರ್ವಹಿಸಿದ್ದಾರೆ. ಈ ಅಸಮಾನತೆ ವ್ಯವಸ್ಥೆ ಬದಲಾಗಬೇಕು ಎಂಬ ತುಡಿತ ಅವರಲ್ಲಿತ್ತು, ಅದರ ಆ ಬಗ್ಗೆಯೇ ಚರ್ಚೆ ಮಾಡುತ್ತಿದ್ದರು. ನೀನು ಯಾವಾಗಲೂ ಬಡವರು, ಶೋಷಿತರ ಪರ ಇರಬೇಕು ಅಂತಲೂ ಬುದ್ಧಿವಾದ ಹೇಳುತ್ತಿದ್ದರು ಎಂದರು.
ರಾಚಯ್ಯ ಅವರ ಬುದ್ಧಿವಾದದಂತೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ, ಬಡವರ ಪರ ಇದ್ದೇನೆ. ನಾನು ಅವರ ಮನೆಯಲ್ಲಿ ಮೂರು ದಿನ ಉಳಿದುಕೊಂಡಿದ್ದೆ. ಹಿಮಾಚಲ ಪ್ರದೇಶದಲ್ಲಿ ಅವರು ರಾಜ್ಯಪಾಲರಾಗಿದ್ದಾಗ ಅಲ್ಲಿಗೆ ಹೋಗಿದ್ದೆ. ನಾನು ಶಂಕುಸ್ಥಾಪನೆ ಮಾಡಿದ್ದ ರಾಚಯ್ಯ ಅವರ ಸ್ಮಾರಕವನ್ನು ನಾನೇ ಉದ್ಘಾಟನೆ ಮಾಡಿದ್ದೇನೆ. ಇನ್ನು ಅವರು ನಡೆದ ದಾರಿಯಲ್ಲಿ ಮಗ ಶಾಸಕ ಎ.ಆರ್.ಕೃಷ್ಣಮೂರ್ತಿ ನಡೆಯಲಿ ಎಂದರು.
ಬಿ.ರಾಚಯ್ಯ ಸ್ಮಾರಕ ಉದ್ಘಾಟಿಸಿದ ಸಿಎಂ: ಶುದ್ಧ ಹಸ್ತರು, ಸ್ವಚ್ಛ ರಾಜಕಾರಣಿ, ಅಜಾತ ಶತ್ರು ಎಂದೇ ಜನಮನ್ನಣೆ ಗಳಿಸಿದ್ದ ಮಾಜಿ ರಾಜ್ಯಪಾಲ ಬಿ.ರಾಚಯ್ಯ ಸ್ಮಾರಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಆಗಸ್ಟ್ 10) ಉದ್ಘಾಟನೆ ಮಾಡಿದರು. ಹಾಗಾದರೆ ಇದಕ್ಕೆ ಮೀಸಲಿಟ್ಟ ಅನುದಾನ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಹಳೇ ಮೈಸೂರು ಭಾಗದಲ್ಲಿ ಪ್ರಭಾವಿ ನಾಯಕರಾಗಿದ್ದ ಬಿ.ರಾಚಯ್ಯ ಸಿದ್ದರಾಮಯ್ಯ ರಾಜಕೀಯ ಏಳಿಗೆಗೆ ಕಾರಣರಾಗಿದ್ದರು. ತಮಗೆ ಶಕ್ತಿ ತುಂಬಿದ ಗುರುವಿಗೆ ಸಿದ್ದರಾಮಯ್ಯ ನಮಿಸಿದರು. ಅಂದಹಾಗೆ, ಬಿ.ರಾಚಯ್ಯ ಅವರ ಸ್ಮಾರಕಕ್ಕೆ ಮೊದಲ ಸಿಎಂ ಅವಧಿಯಲ್ಲಿ ಬಜೆಟ್ನಲ್ಲಿ ಅನುದಾನ ಘೋಷಣೆ ಮಾಡಿದ್ದರು.
ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದ ಹೊರವಲಯದಲ್ಲಿ 1 ಹೆಕ್ಟೇರ್ 11 ಗುಂಟೆ ಜಾಗದಲ್ಲಿ ಭವ್ಯ ಸ್ಮಾರಕ ನಿರ್ಮಾಣ ಮಾಡಲಾಗಿದೆ. ನೆಲ ಮಹಡಿ ಹಾಗೂ ಮೊದಲ ಮಹಡಿ ಸೇರಿ 6,400 ಚದರ ಅಡಿ ವಿಸ್ತೀರ್ಣ ಹೊಂದಿರುವ ಸ್ಮಾರಕವು ಶ್ವೇತ ವರ್ಣದಲ್ಲಿ ಕಂಗೊಳಿಸುತ್ತಿದೆ. ರಾಚಯ್ಯ ಅವರ ವ್ಯಕ್ತಿತ್ವಕ್ಕೆ ಹೊಂದುವಂತೆ ಅರಳುವ ಕಮಲ ಶೈಲಿಯಲ್ಲಿ ಸ್ಮಾರಕ ರೂಪಿಸಿದ್ದು, ಇಡೀ ಸ್ಮಾರಕಕ್ಕೆ ರಾಜಸ್ತಾನದ ಮಾರ್ಬಲ್ ಬಳಕೆ ಮಾಡಲಾಗಿದೆ.
₹4.87 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆದಿದ್ದು, ಬಿ.ರಾಚಯ್ಯ ಅವರ ಜೀವನ ಚರಿತ್ರೆ ಬಿಂಬಿಸುವ 120ಕ್ಕೂ ಹೆಚ್ಚು ಛಾಯಾಚಿತ್ರಗಳ ಗ್ಯಾಲರಿ ಸ್ಮಾರಕದಲ್ಲಿ ಪ್ರದರ್ಶಿಸಲಾಗುತ್ತಿದೆ. ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು, ವಿವಿಧ ಇಲಾಖೆಗಳ ಸಚಿವರಾಗಿ ತೆಗೆದುಕೊಂಡ ಮಹತ್ವದ ನಿರ್ಧಾರಗಳ ಮಾಹಿತಿ ಲಭ್ಯವಾಗಲಿದೆ.
ಇದರ ಜೊತೆಗೆ ರಾಚಯ್ಯ ಅವರು ಉಪಯೋಗಿಸುತ್ತಿದ್ದ ಕೋಟ್, ವಾಚ್, ವಾಕಿಂಗ್ ಸ್ಟಿಕ್, ವಿಸಿಟಿಂಗ್ ಕಾರ್ಡ್ ಹಾಗೂ ಸಾರ್ವಜನಿಕ ಜೀವನದಲ್ಲಿ ದೊರೆತ ಅಪರೂಪದ ಸ್ಮರಣಿಕೆಗಳು, ಪುಸ್ತಕಗಳು ಸ್ಮಾರಕದಲ್ಲಿ ವೀಕ್ಷಣೆಗೆ ಲಭ್ಯವಿದೆ.












Click it and Unblock the Notifications