ಚಾಮರಾಜೇಶ್ವರ ದೇವಾಲಯದಲ್ಲಿ ಹುಂಡಿ ಎಣಿಕೆ: ಪತ್ತೆಯಾದ್ವು ವಿಚಿತ್ರ ಪತ್ರಗಳು..
ಚಾಮರಾಜನಗರ, ಅಕ್ಟೋಬರ್, 01: ಐತಿಹಾಸಿಕ ದೇವಾಲಯ, ನಾಡಿನ ಪ್ರಮುಖ ದೇಗುಲಗಳಲ್ಲಿ ಒಂದಾದ ಚಾಮರಾಜನಗರದ ಚಾಮರಾಜೇಶ್ವರ ದೇವಾಲಯದಲ್ಲಿ 9 ತಿಂಗಳ ಬಳಿಕ ಇಂದು ಹುಂಡಿ ಎಣಿಕೆ ಕಾರ್ಯ ನಡೆಯಿತು. ಈ ವೇಳೆ ಭಕ್ತರು ದೇವರಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬಗೆಬಗೆ ಪತ್ರಗಳನ್ನು ಬರೆದಿದ್ದರು.
ಓರ್ವರು ಓಂ ನಮಃ ಶಿವಾಯ ಎಂದು 108 ಬಾರಿ ಬರೆದ ಚೀಟಿಯನ್ನು ಹುಂಡಿಗೆ ಹಾಕಿ ಒಳಿತು ಮಾಡು ಭಗವಂತ ಎಂದು ಕೋರಿಕೊಂಡಿದ್ದಾರೆ. ಮತ್ತೋರ್ವರು "ದೇವರೆ ನಾನು ಏನು ಮಾಡುತ್ತಿದ್ದೇನೆ ಅಂತ ಗೊತ್ತಿಲ್ಲ, ಆದರೆ ತುಂಬಾ ತಪ್ಪು ಮಾಡುತ್ತಿದ್ದೇನೆ. ಇನ್ನು ಮುಂದೆ ಆ ರೀತಿ ಗೊಂದಲ ಆಗದಂತೆ ನೋಡಿಕೋ, ನೀನೆ ಪರಿಹಾರ ಎಂದು ಮೊರೆ ಇಟ್ಟರೇ ಮತ್ತೋರ್ವ ತನ್ನ ಸ್ನೇಹಿತೆ ಪ್ರೀತಿಸಿದವನ ಜೊತೆ ಮನೆ ಬಿಟ್ಟು ಓಡಿ ಹೋಗಿದ್ದನ್ನು ಕುರಿತು ಭಗವಂತನಿಗೆ ಬೇಡಿಕೆ ಸಲ್ಲಿಸಿದ್ದಾನೆ.

"ಹಾಯ್ ಪುಟ್ಟಾ, ಹೇಗಿದಿಯ.., ನೀನು ನಮ್ಮನ್ನು ಮಿಸ್ ಮಾಡ್ಕೋತಿದಿಯಾ, ನೀನು ಹೀಗೆಲ್ಲ ಮಾಡಬಾರದಿತ್ತು, ನೀನು ಪ್ರೀತಿಸಿದವನನ್ನೇ ಮದುವೆ ಆಗುವುದಿದ್ದರೆ ಮನೆಯವರನ್ನೆಲ್ಲ ಒಪ್ಪಿಸಬಹುದಿತ್ತು. ದೊಡ್ಡ ತಪ್ಪು ಮಾಡಿಬಿಟ್ಟೆ," ಎಂದು ಪತ್ರ ಬರೆದಿದ್ದಾನೆ.
ಇನ್ನೊಂದು ಪತ್ರ ವಿಶೇಷವಾಗಿದ್ದು, ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿಸು ದೇವರೆ,, ಏಪ್ರಿಲ್ 9ರಂದು ಬಂಡಿಪುರಕ್ಕೆ ಭೇಟಿ ನೀಡಿದ್ದ ಪ್ರಧಾನಿಯನ್ನು ಭೇಟಿ ಮಾಡಿಸು ಎಂದು ಬರೆದಿದ್ದ ಪತ್ರ ಇಂದು ಪ್ರತ್ಯಕ್ಷವಾಗಿದೆ. ಹೀಗೆ ಆಸ್ಪತ್ರೆ ಚೀಟಿ, ಪಾನ್ ಕಾರ್ಡ್ ಜೆರಾಕ್ಸ್ ಸೇರಿದಂತೆ ಹಲವು ಬೇಡಿಕೆಗಳ ಪತ್ರಗಳು ಹುಂಡಿಯಲ್ಲಿ ಸಿಕ್ಕಿವೆ.
ಇನ್ನು ಕಳೆದ 9 ತಿಂಗಳ ಅವಧಿಯಲ್ಲಿ ದೇವಾಲಯದ ಹುಂಡಿ ಎಣಿಕೆಯಲ್ಲಿ 4,30,680 ರೂಪಾಯಿ ಸಂಗ್ರಹವಾಗಿದೆ. ಎಣಿಕೆ ಕಾರ್ಯದಲ್ಲಿ ದೇವಾಲಯದ ಬಂಡಿಗಾರ್ ಮಹೇಶ್, ಉಪ್ಪಾರ ಮುಖಂಡ ಜಯಕುಮಾರ್, ಪೊಲೀಸರು ಹಾಜರಿದ್ದರು.
1ಕೋಟಿ 24 ಲಕ್ಷ ಹಣ ಸಂಗ್ರಹ
ಹಿರಿಯೂರು ತಾಲೂಕಿನ ಶ್ರೀ ಕ್ಷೇತ್ರ ವದ್ದೀಕೆರೆ ಸಿದ್ದೇಶ್ವರ ದೇವಾಲಯದಲ್ಲಿ ಇತ್ತೀಚೆಗಷ್ಟೇ ಹುಂಡಿ ಹಣ ಎಣಿಕೆ ನಡೆದಿದ್ದು, ಈ ವೇಳೆ 1ಕೋಟಿ 24 ಲಕ್ಷ ಹಣ ಸಂಗ್ರಹವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಅಧಿಸೂಚಿತ "ಎ" ಪ್ರವರ್ಗದ ಹಿರಿಯೂರು ತಾಲೂಕಿನ ಐಮಂಗಲ ಹೋಬಳಿಯ ವದ್ದಿಕೆರೆ ಗ್ರಾಮದ ಶ್ರೀ ಕಾಲಭೈರವೇಶ್ವರ ಸ್ವಾಮಿ ಯಾನೆ ಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಆಡಳಿತ ಅಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳಾದ ಎಂ.ಕಾರ್ತಿಕ್, ತಹಶೀಲ್ದಾರ್ ರಾಜೇಶ್ ಕುಮಾರ್ ಸಮ್ಮುಖದಲ್ಲಿ ದೇವಸ್ಥಾನದಲ್ಲಿನ ಕಾಣಿಕೆ ಹುಂಡಿಗಳ ಹಣವನ್ನು ಎಣಿಕೆ ಮಾಡಲಾಗಿದೆ.
ತಿಹಾಸದಲ್ಲಿ ಪ್ರಥಮ ಬಾರಿಗೆ ದಾಖಲೆ ಮೊತ್ತದ 1,24,67,800 ರೂಪಾಯಿ (ಒಂದು ಕೋಟಿ 24 ಲಕ್ಷದ 67 ಸಾವಿರದ 800 ರೂ.) ಹಣ ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ ಹುಂಡಿಯಲ್ಲಿ ವಿದೇಶಿ ಕರೆನ್ಸಿಗಳು ಸೇರಿದಂತೆ, ಭಕ್ತರು ಹರಕೆ ರೂಪದಲ್ಲಿ ಸಲ್ಲಿಸಿದ ಬಂಗಾರ ಮತ್ತು ಬೆಳ್ಳಿ ಆಭರಣಗಳು ಸಹ ಕಾಣಿಕೆ ರೂಪದಲ್ಲಿ ಸ್ವಾಮಿಗೆ ಅರ್ಪಿತವಾಗಿವೆ.
ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ದೇವಸ್ಥಾನದ ಹೆಸರಿನಲ್ಲಿ ತೆರೆದಿರುವ ಉಳಿತಾಯ ಖಾತೆಗಳಿಗೆ ಸಮನಾಗಿ 1) ಕೆನರಾ ಬ್ಯಾಂಕ್ ಐಮಂಗಲ ಶಾಖೆ ಹಾಗೂ 2) ಪ್ರಗತಿ ಕೃಷ್ಣ ಬ್ಯಾಂಕ್ ಯರಬಳ್ಳಿ ಶಾಖೆಗೆ ಸ್ಥಳದಲ್ಲಿ ಜಮಾ ಮಾಡಲಾಗಿರುತ್ತದೆ. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಅಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳಾದ ಎಂ.ಕಾರ್ತಿಕ್, ತಹಶೀಲ್ದಾರ್ ರಾಜೇಶ್ ಕುಮಾರ್. ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರುಗಳು, ಹಿರಿಯೂರು ತಾಲೂಕಿನ ಕಂದಾಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು, ವದ್ದಿಕೆರೆ ಗ್ರಾಮಸ್ಥರುಗಳು ಉಪಸ್ಥಿತರಿದ್ದರು.












Click it and Unblock the Notifications