ಚಾಮರಾಜನಗರದಲ್ಲಿ ಇಂದಿನಿಂದ ಹೆಲ್ಮೆಟ್ ಕಡ್ಡಾಯಕ್ಕೆ ಎಸ್ಪಿ ಆದೇಶ
ಚಾಮರಾಜನಗರ, ಜುಲೈ 1: ಈಗಾಗಲೇ ಹೆಲ್ಮೆಟ್ ಕಡ್ಡಾಯ ಮಾಡಿರುವ ಸುಪ್ರೀಂ ನ್ಯಾಯಾಲಯದ ಆದೇಶ ಚಾಮರಾಜನಗರ ಜಿಲ್ಲೆಗೆ ಅನ್ವಯವಾಗದೇ ಇದ್ದುದನ್ನು ಮನಗಂಡು ಚಾಮರಾಜನಗರ ಜಿಲ್ಲಾ ಎಸ್ಪಿ ಆನಂದ್ ಕುಮಾರ್ ಕಟ್ಟುನಿಟ್ಟಾಗಿ ಆದೇಶ ಪಾಲಿಸುವಂತೆ ಸೂಚಿಸಿದ್ದಾರೆ.
ಎಸ್ಪಿ ಕುಲದೀಪ್ ಕುಮಾರ್ ಜೈನ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಂಚಾರಿ ಠಾಣಾ ಪೊಲೀಸ್ ಜಯಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ಮಾಡಿ ಹೆಲ್ಮೆಟ್ ಕಡ್ಡಾಯ ನಿಯಮವನ್ನು ಶೇ.80ರಷ್ಟು ಯಶಸ್ವಿಯಾಗಿತ್ತು. ತದ ನಂತರ ಅವರ ವರ್ಗಾವಣೆ ಆದ ಮೇಲೆ ನಿಯಮ ಮಾಯವಾಗಿತ್ತು.
ಹೆಲ್ಮೆಟ್ ಕಡ್ಡಾಯ ನಿಯಮ ಕೆಲವು ವಾಹನ ಸವಾರರಿಗೆ ಕಿರಿಕಿರಿ ಅನಿಸಿದರೂ ವಾಹನ ಸವಾರರ ಹಿತದೃಷ್ಟಿಯಿಂದ ಇದು ಅನಿವಾರ್ಯ. ಅವರ ಪ್ರಾಣ ರಕ್ಷಣೆ ಜವಾಬ್ದಾರಿ ಕೂಡ ನಮ್ಮ ಮೇಲಿದೆ. ಆದೇಶ ಪಾಲಿಸಿದರೆ ಅವರಿಗೆ ಸೂಕ್ತ ಎಂದಿದ್ದಾರೆ ಈಗಿನ ಎಸ್ಪಿ ಆನಂದ್ ಕುಮಾರ್.

ಎಸ್ಪಿ ಜೈನ್ ಅವರ ಅವಧಿಯಲ್ಲಿ ಸಮವಸ್ತ್ರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ್ದೇ ಆದಲ್ಲಿ ಘಟಕದ ಅಧಿಕಾರಿ ಹಾಗೂ ಆ ಸಿಬ್ಬಂದಿ ಮೇಲೆ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದರು. ಈಗ ನಿಯಮಗಳನ್ನು ಪೊಲೀಸ್ ಇಲಾಖೆಯಲ್ಲೇ ಕೆಲವರು ಉಲ್ಲಂಘಿಸುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಸಿಬ್ಬಂದಿಗಳೆ ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುತ್ತಿದ್ದ ಚಿತ್ರಗಳೂ ಲಭ್ಯವಾಗಿವೆ.
ಬಹುತೇಕರಂತೂ ದಂಡದಿಂದ ಮುಕ್ತವಾಗಲು ಹೆಲ್ಮೆಟ್ ಪಡೆದು ತಲೆಗೆ ಧರಿಸದೇ ವಾಹನದ ಹಿಂದೆ ಸಿಲುಕಿಸಿ ಸಂಚರಿಸುತ್ತಿರುತ್ತಾರೆ.












Click it and Unblock the Notifications