ಚಾಮರಾಜನಗರದಲ್ಲಿ ಮಳೆ ಅವಾಂತರ: ಇಂದಿರಾ ಕ್ಯಾಂಟೀನ್, ದಿವ್ಯಲಿಂಗೇಶ್ವರ ದೇಗುಲ ಜಲಾವೃತ
ಚಾಮರಾಜನಗರ, ಸೆಪ್ಟೆಂಬರ್, 05: ರಾತ್ರಿ ಸುರಿದ ಭಾರಿ ಮಳೆಗೆ ಚಾಮರಾಜನಗರದ ಜನರ ಸ್ಥಿತಿ ಹೇಳತೀರದಾಗಿದೆ. ಚಾಮರಾಜನಗರ ಜಿಲ್ಲಾಕೇಂದ್ರ, ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ಗೆ ನೀರು ನುಗ್ಗಿದ್ದು, ಕ್ಯಾಂಟೀನ್ಗೆ ಯಾರೂ ಹೋಗಲಾರದ ಪರಿಸ್ಥಿತಿ ನಿರ್ಮಾಣ ಆಗಿದೆ.
ಇನ್ನು ನಗರದ ಸತ್ಯಮಂಗಲಂ ರಸ್ತೆಯಲ್ಲಿರುವ ಕಲ್ಯಾಣ ಮಂಟಪವೊಂದಕ್ಕೆ ನದಿಯಂತೆ ನೀರು ಹರಿದು ಬಂದಿದ್ದು, ಮದುವೆ ಮನೆ ನೀರಿನ ಮನೆಯಾಗಿ ಪರಿವರ್ತನೆ ಆಗಿದೆ. ಅಡುಗೆ ಕೋಣೆಯಲ್ಲಿರುವ ತರಕಾರಿಗಳೆಲ್ಲಾ ನೀರಿನಲ್ಲಿ ತೇಲುತ್ತಿರುವ ದೃಶ್ಯ ಸೆರೆ ಆಗಿದ್ದು, ಮತ್ತೊಂದೆಡೆ ಮೊಣಕಾಲುದ್ದ ನೀರಿನಲ್ಲಿ ಬಾಣಸಿಗರು ಅಸಹಾಯಕರಾಗಿ ನಿಂತಿದ್ದಾರೆ. ಕಲ್ಯಾಣ ಮಂಟಪದಲ್ಲಿ ಅಟ್ಟಗುಳಿಪುರ ಗ್ರಾಮದವರ ಮದುವೆ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ದೇವಾಲಯಕ್ಕೂ ನುಗ್ಗಿದ ಮಳೆ ನೀರು:
ಚಾಮರಾಜನಗರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿರುವ ಐತಿಹಾಸಿಕ ದಿವ್ಯಲಿಂಗೇಶ್ವರ ದೇವಾಲಯಕ್ಕೂ ನೀರು ನುಗ್ಗಿ ಅವಾಂತ ಸೃಷ್ಟಿ ಆಗಿದೆ. ಅಷ್ಟೇ ಅಲ್ಲದೇ ರಾಮಸಮುದ್ರದ ಸಮೀಪ ಇರುವ ಹರಳುಕೋಟೆ ದೇವಾಲಯ ಆವರಣ, ರಸ್ತೆಗೂ ನೀರು ನುಗ್ಗಿ ಭಕ್ತರನ್ನು ಕಂಗಾಲಾಗುವಂತೆ ಮಾಡಿದೆ. ಹನೂರು ತಾಲೂಕಿನ ಲೋಕ್ಕನಹಳ್ಳಿ ಮಾರ್ಗದ ಮಧ್ಯೆ ಸಿಗುವ ತಟ್ಟೆಹಳ್ಳಕ್ಕೆ ಸೇತುವೆ ನಿರ್ಮಿಸಲಾಗುತ್ತಿತ್ತು. ಮತ್ತೊಂದೆಡೆ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದೆ. ಕಾಳನಹುಂಡಿ ಸಂಪರ್ಕಿಸುವ ರಸ್ತೆಯೂ ಕೂಡ ನೀರಿನ ರಭಸಕ್ಕೆ ಕೊಚ್ಚಿಹೋಗಿದೆ. ಇದರಿಂದ 3-4 ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಮನೆ ಗೋಡೆ ಕುಸಿತ:
ಕರ್ನಾಟ- ತಮಿಳುನಾಡು ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ನಿನ್ನೆ ತಡರಾತ್ರಿ ಸುರಿದ ಭಾರಿ ಮಳೆಗೆ ಜನರು ತತ್ತರಿಸಿದ್ದಾರೆ. ಚಾಮರಾಜನಗರದ ತಲೂಕಿನ ದಡದಹಳ್ಳಿ ಗ್ರಾಮದಲ್ಲಿ ಮನೆ ಗೋಡೆ ಕುಸಿದಿದ್ದು, 32 ವರ್ಷದ ಮೂರ್ತಿ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಲಗಿದ್ದ ವೇಳೆ ನಿರಂತರ ಮಳೆ ಆಗಿದ್ದು, ಮನೆಗೋಡೆ ತಲೆಯ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲೇ ಮೂರ್ತಿ ಎಂಬ ಯುವಕ ಮೃತಪಟ್ಟಿದ್ದಾನೆ. ಚಾಮರಾಜನಗರ ಪೂರ್ವ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಶವವನ್ನು ರವಾನಿಸಲಾಗಿದೆ.
ಬೂದಿಪಡಗ ಸೇತುವೆ ಮುಳುಗಡೆಯಾಗಿ ಸೇತುವೆ ಮೇಲೆ 3 ಅಡಿ ನೀರು ನೀರು ಹರಿಯುತ್ತಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸೇತುವೆ ಮುಳುಗಡೆ ಆಗಿರುವುದರಿಂದ ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಜೊತೆಗೆ ಸೇತುವೆ ಮೇಲೆ ವಿದ್ಯುತ್ ಕಂಬ ಕೂಡ ಬಿದ್ದಿದ್ದು, ಜನರು ಸೇತುವೆ ಬಳಿ ಹೋಗಲು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಗ್ರಾಮದ ಕಿತ್ತೂರು ಚೆನ್ನಮ್ಮ, ಆಶ್ರಮ ಶಾಲೆಗಳ ಶಿಕ್ಷಕರು, ಕೂಲಿ ಕಾರ್ಮಿಕರು ಸೇತುವೆ ದಾಟಲಾಗದೇ ಪರದಾಡುತ್ತಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಬೇಗೂರು ಠಾಣೆ ಕೆರೆಯಂತಾಗಿದ್ದು, ಪೊಲೀಸ್ ಜೀಪ್ಗಳು ಸಂಪೂರ್ಣ ಜಲಾವೃತವಾಗಿವೆ. ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.

ಜನರ ಜೀವನವನ್ನು ಕಸಿದುಕೊಂಡ ಮಳೆರಾಯ:
ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಗ್ರಾಮ ಜಲಾವೃತವಾಗಿದ್ದು, ಜನರ ಪಾಡು ಹೇಳತೀರಾಗಿದೆ. ಇಡೀ ಗ್ರಾಮದ ಮುಖ್ಯ ರಸ್ತೆಗಳೆಲ್ಲಾ ಜಲಮಯವಾಗಿದ್ದು, ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಜನರು ರಾತ್ರಿ ಮಳೆಯಲ್ಲೇ ನೆನೆದು ಕುಳಿತುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಚಾಮರಾಜನಗರ ತಾಲೂಕಿನ ಹರದನಹಳ್ಳಿ ಕೆರೆ ತುಂಬಿ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ದೊಡ್ಡಮೋಳೆ, ಕೃಷಿ ವಿಜ್ಞಾನ ಕೇಂದ್ರ, ಚಂದುಕಟ್ಟೆ ಮೋಳೆ ಗ್ರಾಮಕ್ಕೆ ನೀರು ನುಗ್ಗಿದೆ. ರಸ್ತೆ ಮೇಲೆ ಕೆರೆಯಂತೆ ನೀರು ಹರಿಯುತ್ತಿರುವುದರಿಂದ ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ. ಹನೂರು ತಾಲೂಕಿನ ಹುಬ್ಬೆಹುಣಸೆ ಜಲಾಶಯ ತುಂಬಿದ್ದು, ತಟ್ಟೆಹಳ್ಳ ಎಂಬುದರ ಮೂಲಕ ನೀರು ಹರಿದು ಹೋಗುತ್ತಿದೆ. ಅಲ್ಲಿನ ಜನರಿಗೆ ಹಳ್ಳ ದಾಟದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡಿದ್ದಾರೆ. ಹೀಗೆ ಜಿಲ್ಲೆಯಲ್ಲಿ ಮಳೆರಾಯ ಆರ್ಭಟಿಸಿ ಜನರ ನೆಮ್ಮದಿಯನ್ನು ಕಸಿದಿದ್ದಾನೆ.












Click it and Unblock the Notifications