ಭಾರೀ ಮಳೆಗೆ ನೆಲಕಚ್ಚಿದ ಬಾಳೆ: ಲಕ್ಷಾಂತರ ರುಪಾಯಿ ನಷ್ಟ
ಚಾಮರಾಜನಗರ, ಆಗಸ್ಟ್ 07: ಕಳೆದ ಸೋಮವಾರದಿಂದ ಸುರಿಯುತ್ತಿರುವ ಭಾರೀ ಮಳೆಯು ರೈತರ ಬದುಕನ್ನು ಸಂಕಷ್ಟಕ್ಕೆ ನೂಕಿದೆ. ಪ್ರವಾಹದಿಂದ ಅನೇಕ ಜನರ ಬದುಕು ಅಸ್ತವ್ಯಸ್ತಗೊಂಡಿದ್ದರೆ, ಮತ್ತೊಂದು ಕಡೆ ರೈತರು ಬೆಳೆದ ಬೆಳೆಗಳು ಕೂಡಾ ನಾಶವಾಗುತ್ತಿವೆ.
Recommended Video
ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಹೂಗ್ಯಂ ಗ್ರಾಮ ಪಂಚಾಯತಿ ವ್ಯಾಪ್ತಿಯ ನೆಲ್ಲೂರು ಗ್ರಾಮದಲ್ಲಿ ಗುರುವಾರ ಗಾಳಿ ಸಹಿತ ಜೋರು ಮಳೆ ಆಗಿದ್ದರಿಂದ ಜಮೀನೊಂದರಲ್ಲಿ ಕೊಯ್ಲಿಗೆ ಸಿದ್ದವಾಗಿದ್ದ ಬಾಳೆ ತೋಟ ಸಂಪೂರ್ಣ ನೆಲಕಚ್ಚಿದೆ.
ನೆಲ್ಲೂರು ಗ್ರಾಮದ ಮುನಿಸ್ವಾಮಿ ಎಂಬುವವರು ಲಕ್ಷಾಂತರ ರೂ. ಖರ್ಚು ಮಾಡಿ 1.80 ಎಕರೆಯಲ್ಲಿ ಬಾಳೆ ಫಸಲನ್ನು ಬೆಳೆದಿದ್ದರು. ಆದರೆ ಭೀಕರ ಗಾಳಿ ಮಳೆಯಿಂದ ಮುನಿಸ್ವಾಮಿ ಅವರ 700 ಕ್ಕೂ ಹೆಚ್ಚು ಬಾಳೆ ಗಿಡಗಳು ನೆಲಕ್ಕುರುಳಿವೆ.

ಇದರಿಂದ ಒಂದೂವರೆ ಲಕ್ಷ ರುಪಾಯಿಗಳಿಗೂ ಹೆಚ್ಚು ಹಣ ನಷ್ಟವಾಗಿದೆ ಎಂದು ಮುನಿಸ್ವಾಮಿ ಅಳಲನ್ನು ತೋಡಿಕೊಂಡರು. ಇದಲ್ಲದೆ ಇದೇ ಗ್ರಾಮದ ಯಲ್ಲಪ್ಪ ಅವರು 2 ಎಕರೆ ಹಾಗೂ ಮಾರ ಎಂಬುವವರು ಸಹ 2 ಎಕರೆಯಲ್ಲಿ ಬೆಳೆದಿದ್ದ ಬಾಳೆ ಫಸಲು ಗೊನೆ ಬಿಟ್ಟು ಕಟಾವಿನ ಹಂತಕ್ಕೆ ಬಂದಿದ್ದವು.
ಸುಮಾರು 700 ಕ್ಕೂ ಹೆಚ್ಚು ಬಾಳೆ ಗಿಡ, ಯಲ್ಲಪ್ಪ ಅವರಿಗೆ ಸೇರಿದ 300 ಹಾಗೂ ಮಾರ ಎಂಬುವವರ ಜಮೀನಿನಲ್ಲಿ 400 ಕ್ಕೂ ಹೆಚ್ಚು ಬಾಳೆ ಗಿಡಗಳು ನೆಲಕ್ಕುರುಳಿವೆ. ಕೊಯ್ಲಿಗೆ ಸಿದ್ದವಾಗಿದ್ದ ಬಾಳೆ ಫಸಲು ನೆಲಕಚ್ಚಿರುವುದಕ್ಕೆ ರೈತರು ಕಣ್ಣೀರಿಡುತ್ತಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಬೇಕು, ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ರೈತರು ಒತ್ತಾಯಿಸಿದ್ದಾರೆ.












Click it and Unblock the Notifications