ಜಡ್ಡುಗಟ್ಟಿದ ವ್ಯವಸ್ಥೆಗೆ ಚುರುಕು ಮುಟ್ಟಿಸುತ್ತಾ ಆರೋಗ್ಯ ಸಚಿವರ ಆಸ್ಪತ್ರೆ ವಾಸ್ತವ್ಯ?
ಚಾಮರಾಜನಗರ, ಸೆಪ್ಟೆಂಬರ್ 25: ಆರೋಗ್ಯ ಸಚಿವರಾಗಿರುವ ಶ್ರೀರಾಮುಲು ಇದೀಗ ಸರ್ಕಾರಿ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿ ರೋಗಿಗಳ ನಡುವೆಯಿದ್ದು ಜಡ್ಡುಗಟ್ಟಿದ ಆರೋಗ್ಯ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಕೆಲಸಕ್ಕೆ ಮುಂದಾಗಿ ತಮ್ಮ ಪ್ರಯೋಗವನ್ನು ಚಾಮರಾಜನಗರದಿಂದ ಆರಂಭಿಸಿದ್ದಾರೆ.
ಅತ್ತ ಶಿಕ್ಷಣ ಸಚಿವರಾದ ಸುರೇಶ್ಕುಮಾರ್ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಿ ಶಾಲೆಗಳ ಸಮಸ್ಯೆಗಳನ್ನು ಅರಿಯುತ್ತಿದ್ದರೆ, ಅವರ ಹಾದಿ ಹಿಡಿದ ಶ್ರೀರಾಮುಲು ಸರ್ಕಾರಿ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿ ಎಲ್ಲರ ಗಮನಸೆಳೆದಿದ್ದಾರೆ. ಆರೋಗ್ಯ ಸಚಿವರಾದ ಬಳಿಕ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿ ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿದರಲ್ಲದೆ, ಆಸ್ಪತ್ರೆಗೆ ಆಗಮಿಸಿದ್ದ ರೋಗಿಗಳಿಂದಲೂ ಮಾಹಿತಿ ಪಡೆದುಕೊಂಡರು.
ಸಚಿವ ಬಿ. ಶ್ರೀರಾಮುಲು ಮಾನವೀಯತೆಗೆ ಜನರ ಶ್ಲಾಘನೆ
ಇದೇ ವೇಳೆ ಯಳಂದೂರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭ ಸಾರ್ವಜನಿಕರು ಮತ್ತು ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳು ನೀಡಿದ ದೂರನ್ನು ಸ್ವೀಕರಿಸಿ ಅಲ್ಲಿನ ವೈದ್ಯರ ಕಾರ್ಯವೈಫಲ್ಯವನ್ನು ಗಮನಿಸಿ ತಕ್ಷಣವೇ ಸೇವೆಯಿಂದ ಅಮಾನತು ಮಾಡುವಂತೆ ಆರೋಗ್ಯ ಇಲಾಖೆಯ ಆಯುಕ್ತರಿಗೆ ಆದೇಶ ನೀಡಿದರು. ಆಸ್ಪತ್ರೆಯಲ್ಲಿನ ಸ್ವಚ್ಛತಾ ಕಾರ್ಯ ನಿರ್ವಹಣೆ ಮಾಡುವ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡು, ಆಸ್ಪತ್ರೆಯನ್ನು ಶುಚಿಯಾಗಿಡುವಂತೆ ಸೂಚನೆ ನೀಡಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ಜನರಿಗೆ ಸೌಲಭ್ಯ ದೊರಕುತ್ತಿರುವ ಬಗ್ಗೆ ಹಾಗೂ ರೋಗಿಗಳಲ್ಲಿ ಆಸ್ಪತ್ರೆ ಬಗ್ಗೆ ನಂಬಿಕೆಯ ಮೂಡಲು ಸರ್ಕಾರಿ ಆಸ್ಪತ್ರೆಯಲ್ಲಿ ವಾಸ್ತವ್ಯ ಮಾಡುತ್ತಿರುವುದಾಗಿ ತಿಳಿಸಿದರು. "ಆರೋಗ್ಯ ಇಲಾಖೆ ಮತ್ತು ಸರ್ಕಾರಿ ಆಸ್ಪತ್ರೆಗಳ ಸುಧಾರಣೆ ಮಾಡುವ ಸಲುವಾಗಿ ಈ ಹಿಂದೆ ಆರೋಗ್ಯ ಸಚಿವನಾಗಿದ್ದಾಗಲೂ ಸುಧಾರಣೆಗೆ ಕ್ರಮ ವಹಿಸಿದ್ದೆ. ಈಗ ಮತ್ತೆ ಆರೋಗ್ಯ ಸಚಿವನಾಗಿದ್ದೇನೆ. ಈ ಹಿನ್ನಲೆಯಲ್ಲಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಸುಧಾರಣೆಗೆ ಹೆಚ್ಚಿನ ಗಮನ ಹರಿಸಿದ್ದೇನೆ" ಎಂದು ಹೇಳಿದರು.
ಒಟ್ಟಾರೆ ಶ್ರೀರಾಮುಲು ಅವರ ಆಸ್ಪತ್ರೆ ವಾಸ್ತವ್ಯ ಪ್ರಚಾರಕ್ಕೆ ಸೀಮಿತವಾಗುತ್ತದೆಯೋ ಅಥವಾ ಆರೋಗ್ಯ ಇಲಾಖೆಯ ಅಭಿವೃದ್ಧಿಗೆ ಸಹಾಯವಾಗುತ್ತದೆಯಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.