ಗುಂಡ್ಲುಪೇಟೆ: ಕೆರೆ ಏರಿ ಒಡೆದು ನೀರು ಪೋಲು, ಲಕ್ಷಾಂತರ ರೂ. ನಷ್ಟ
ಗುಂಡ್ಲುಪೇಟೆ, ಮೇ 28: ತಾಲೂಕು ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಗೆ ವಿಜಯಪುರದ ದೊಡ್ಡಕೆರೆಯ ಏರಿ ಒಡೆದು ಹೋಗಿ ಅಪಾರ ಪ್ರಮಾಣದ ನೀರು ಪೋಲಾಗಿದೆ.
ಒಂದೇ ರಾತ್ರಿಯ ಮಳೆಗೆ ದೊಡ್ಡಕೆರೆಯು ಬಹುತೇಕ ತುಂಬಿಕೊಂಡಿತ್ತು. ಹೀಗಾಗಿ ಎಲ್ಲರೂ ಖುಷಿಪಟ್ಟಿದ್ದರು. ಈ ವೇಳೆ ಕೆರೆಯ ಏರಿಯಲ್ಲಿ ಸಣ್ಣದಾಗಿ ನೀರು ಜಿನುಗುತ್ತಿದ್ದ ದೃಶ್ಯ ಕಂಡು ಬಂದಿತ್ತು. ಇದನ್ನು ರೈತರು ಅಧಿಕಾರಿಗಳ ಗಮನಕ್ಕೂ ತಂದಿದ್ದರು.

ನಂತರ ಅಧಿಕಾರಿಗಳು ಟಿಪ್ಪರ್ಗಳಲ್ಲಿ ಕಲ್ಲು ಹಾಗೂ ಮಣ್ಣುಗಳನ್ನು ತಂದು ಏರಿಗೆ ಸುರಿಯುವ ಪ್ರಯತ್ನ ನಡೆಸಿದರು. ಇದರಿಂದ ರಂಧ್ರ ಕಡಿಮೆಯಾಗುವ ಬದಲು ಮತ್ತಷ್ಟು ದೊಡ್ಡದಾಗುತ್ತಾ ಹೋಗಿ ಮಧ್ಯರಾತ್ರಿಯ ವೇಳೆಗೆ ಏರಿಯು ಒಡೆದಿದೆ.
ಹೀಗೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ ಪರಿಣಾಮ ಏರಿ ಒಡೆದು ಕೆರೆಯ ನೀರು ವ್ಯರ್ಥವಾಗಿದೆ. ಅಲ್ಲದೆ ತಗ್ಗು ಪ್ರದೇಶಕ್ಕೆ ನುಗ್ಗಿದ ಪರಿಣಾಮ ನೂರಾರು ಎಕರೆ ಬೆಳೆ ನಾಶವಾಗಿದೆ. ಲಕ್ಷಾಂತರ ರೂಪಾಯಿಗಳ ಬೆಲೆಬಾಳುವ ಇತ್ತೀಚಿಗೆಯಷ್ಟೆ ಬಿತ್ತನೆ ಮಾಡಿದ್ದ ಜೋಳ, ಸೂರ್ಯಕಾಂತಿ ಮುಂತಾದ ಬೆಳೆಗಳು ನಾಶವಾಗಿವೆ. ಈ ನಡುವೆ ಅಕ್ರಂಖಾನ್ ಎಂಬ ರೈತರ ಜಮೀನಿನಲ್ಲಿ ಸಂಗ್ರಹಿಸಿದ್ದ ಅರಿಶಿಣ ಹಾಗೂ ತೆಂಗಿನ ಕಾಯಿಗಳು ನೀರಿನಲ್ಲಿ ಕೊಚ್ಚಿ ಹೋಗಿ ಐದು ಲಕ್ಷರೂಪಾಯಿಗೂ ಹೆಚ್ಚಿನ ನಷ್ಟವಾಗಿದೆ. ಜಮೀನಿನ ಮಣ್ಣೂ ಕೊಚ್ಚಿಕೊಂಡು ಹೋಗಿದೆ. ಜಮೀನುಗಳಲ್ಲಿ ಮನೆ ಕಟ್ಟಿಕೊಂಡವರು ಹಾಗೂ ಜಾನುವಾರು ಸಾಕಿದ್ದವರು ಭಯದಿಂದ ಸುರಕ್ಷಿತ ಪ್ರದೇಶದತ್ತ ತೆರಳಿದ್ದಾರೆ.

ಕೆರೆಯಿಂದ ಹೊರಬಿದ್ದ ನೀರು ಹಳ್ಳಕೊಳ್ಳಗಳ ಮೂಲಕ ಸಾಗಿ ಗುಂಡ್ಲುನದಿ ಸೇರಿದೆ. ಇಲ್ಲಿಂದ ನಲ್ಲೂರು ಅಮಾನಿ ಕೆರೆ ಜಲಾಶಯದತ್ತ ಹರಿದು ಸದ್ಯ ಜಲಾಶಯ ಅರ್ಧದಷ್ಟು ತುಂಬಿಕೊಂಡಿದೆ. ಅಲ್ಲದೆ ಅಣ್ಣೂರು ಕೇರಿ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.
ಇನ್ನು ಕೆರೆ ಅಪಾಯದ ಸ್ಥಿತಿಯಲ್ಲಿರುವ ಕುರಿತು ಸಣ್ಣ ನೀರಾವರಿ ಇಲಾಖೆಯ ಗಮನಕ್ಕೆ ತರಲಾಗಿತ್ತು. ಹೀಗಿದ್ದೂ ಸಕಾಲದಲ್ಲಿ ಕಾರ್ಯಪ್ರವೃತ್ತರಾಗದೆ ನಷ್ಟ ಉಂಟಾಗಿದ್ದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಆರೋಪಿಸಿ, ಸಾರ್ವಜನಿಕರು ಗುಂಡ್ಲುಪೇಟೆ- ಅಣ್ಣೂರುಕೇರಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಕೂಡಾ ನಡೆಸಿದ್ದಾರೆ.

ಜನ ನಿಯಂತ್ರಿಸಲು ಪರದಾಡಿದ ಪೊಲೀಸರು
ಕೆರೆ ಏರಿ ಒಡೆದ ವಿಷಯ ತಿಳಿದ ಸಾರ್ವಜನಿಕರು ಒಡೆದ ಕೆರೆಯ ಏರಿ ಹತ್ತಿ, ರಸ್ತೆಯ ಮೇಲೆ ಹರಿಯುತ್ತಿರುವ ನೀರು ಹಾಗೂ ಕಾಲುವೆಯಲ್ಲಿ ಹರಿಯುತ್ತಿದ್ದ ನೀರನ್ನು ನೋಡಲು ಮುಗಿಬಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹೆಚ್ಚುವರಿ ಪೊಲೀಸ್ ಪಡೆಗಳನ್ನು ಕರೆಸಿಕೊಳ್ಳಬೇಕಾಯಿತು.












Click it and Unblock the Notifications