ಗುಂಡ್ಲುಪೇಟೆಯಲ್ಲಿದ್ದಾರೆ ಪರಿಸರ ಪ್ರೇಮಿ ತಹಶೀಲ್ದಾರ್!
ಚಾಮರಾಜನಗರ, ಜೂನ್ 13: ಸಾಮಾನ್ಯವಾಗಿ ಸರ್ಕಾರಿ ಅಧಿಕಾರಿಗಳೆಂದರೆ ಅವರಿಗೆ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸುವುದಕ್ಕೆ ಸಮಯ ಸಿಗುವುದಿಲ್ಲ. ಹೀಗಿರುವಾಗ ಸಾಮಾಜಿಕ ಚಟುವಟಿಕೆಯ ಮಾತೆಲ್ಲಿ? ಆದರೆ ಗುಂಡ್ಲುಪೇಟೆ ತಾಲೂಕಿನ ತಹಶೀಲ್ದಾರ್ ಎಂ.ನಂಜುಂಡಯ್ಯ ಈ ವಿಚಾರದಲ್ಲಿ ವಿಭಿನ್ನ. ಪರಿಸರ ಪ್ರೇಮಿಯಾಗಿರುವ ಅವರು ಸದಾ ಒಂದಲ್ಲ ಒಂದು ಕಾರ್ಯದ ಮೂಲಕ ಜನರ ಗಮನ ಸೆಳೆಯುತ್ತಿದ್ದಾರೆ.
Recommended Video
ತಮ್ಮ ಸರ್ಕಾರಿ ಕಚೇರಿ ಸುತ್ತಮುತ್ತಲಿನ ವಾತಾವರಣ ಚೆನ್ನಾಗಿರಬೇಕು, ಪ್ರದೇಶ ಸುಂದರವಾಗಿರಬೇಕು ಎಂಬ ಉದ್ದೇಶದಿಂದ ಇದೀಗ ತಾಲೂಕು ಕಚೇರಿ ಮುಂಭಾಗದಲ್ಲಿ ತಮ್ಮ ಸ್ವಂತ ಹಣದಿಂದ ಸುಂದರ ಉದ್ಯಾನ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಪ್ರತಿನಿತ್ಯವೂ ತಾಲೂಕು ಕಚೇರಿಗೆ ಸಾವಿರಾರು ಜನರ ಕೆಲಸದ ನಿಮಿತ್ತ ಬರುತ್ತಾರೆ. ಇಲ್ಲಿ ನಿರುಪಯೋಗಿಯಾಗಿ ಖಾಲಿ ಬಿದ್ದ ಜಾಗವಿದೆ. ಹಾಗಾಗಿ ಇಲ್ಲಿ ಒಂದು ಉದ್ಯಾನ ಮಾಡಿದರೆ ಕಚೇರಿಗೆ ಬರುವ ಸಾರ್ವಜನಿಕರಿಗೂ ಒಳ್ಳೆಯದಾಗಿರುತ್ತದೆ. ಜೊತೆಗೆ ಸುಂದರ ಉದ್ಯಾನ ನಿರ್ಮಾಣ ಮಾಡುವುದರಿಂದ ಕಚೇರಿಗೂ ಮೆರಗು ಬರುತ್ತದೆ ಎಂಬ ಉದ್ದೇಶದಿಂದ ಉದ್ಯಾನ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಚಾಮರಾಜನಗರ: ಕರ್ತವ್ಯ ಲೋಪದಿಂದಾಗಿ ಸಿಪಿಐ, ಪಿಎಸ್ಐ ಅಮಾನತು
ಅಡ್ಡಾದಿಡ್ಡಿ ವಾಹನ ನಿಲುಗಡೆಗೆ ಬ್ರೇಕ್
ಗುಂಡ್ಲುಪೇಟೆ ತಾಲೂಕು ಕಚೇರಿಗೆ ಆಗಮಿಸುವ ಸಾರ್ವಜನಿಕರು ಕಚೇರಿ ಪಕ್ಕದ ರಸ್ತೆಯಲ್ಲಿ ತಮ್ಮ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿದ್ದು, ಈ ಜಾಗವು ನಿರುಪಯುಕ್ತವಾಗಿತ್ತು. ಈಗ ಅದನ್ನು ಬಂದ್ ಮಾಡಿ ಕಲ್ಲು ಕಂಬ ಹಾಕಿದ್ದಾರೆ. ಇದರಿಂದ ತಾಲೂಕು ಕಚೇರಿಯ ಆವರಣದಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದು ತಪ್ಪಿದೆ. ಮುಂದಿನ ದಿನಗಳಲ್ಲಿ ಇಲ್ಲೊಂದು ಸುಂದರ ಉದ್ಯಾನ ನಿರ್ಮಾಣವಾಗಲಿದ್ದು, ತಾಲೂಕು ಕಚೇರಿಯ ಸುಂದರತೆಯನ್ನು ಇಮ್ಮಡಿಗೊಳಿಸಲಿದೆ.
ಹೂ ಗಿಡಗಳನ್ನು ನೆಟ್ಟು ತಮ್ಮ ಪರಿಸರ ಪ್ರೇಮ
ಕಳೆದ ಒಂದೂವರೆ ವರ್ಷದ ಹಿಂದೆ ತಾಲೂಕಿನ ತಹಶೀಲ್ದಾರ್ ಆಗಿ ಎಂ.ನಂಜುಂಡಯ್ಯ ಅವರು ನಿಯೋಜನೆಗೊಂಡಿದ್ದು, ಅಲ್ಲಿಂದ ಇಲ್ಲಿವರೆಗೆ ಯಾವುದಾದರೂ ಒಂದು ರೀತಿಯ ಕೆಲಸದಿಂದ ಎಲ್ಲರಿಗೂ ಇಷ್ಟವಾಗಿದ್ದಾರೆ. ಮೊದಲಿಗೆ ತಮ್ಮ ನಿವಾಸದ ಸುತ್ತಲೂ ನೆರಳು ನೀಡುವ ಸಸಿಗಳು ಹಾಗೂ ಹೂ ಗಿಡಗಳನ್ನು ನೆಟ್ಟು ತಮ್ಮ ಪರಿಸರ ಪ್ರೇಮವನ್ನು ಮೆರೆದರು.
ಪರಿಸರ ಪ್ರೇಮಕ್ಕೆ ಹಿಡಿದ ಕೈ ಕನ್ನಡಿ
ತಹಶೀಲ್ದಾರ್ ಎಂ.ನಂಜುಂಡಯ್ಯ ಅವರು ಪರಿಸರ ಪ್ರೇಮಿಯಾಗಿದ್ದು, ತಾವು ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಎಚ್.ಡಿ.ಕೋಟೆ ಹಾಗೂ ನಾಗಮಂಗಲದಲ್ಲಿಯೂ ಉದ್ಯಾನ ನಿರ್ಮಿಸಿರುವುದು ಇವರ ಪರಿಸರ ಪ್ರೇಮಕ್ಕೆ ಹಿಡಿದ ಕೈ ಕನ್ನಡಿಯಾಗಿದೆ. ಇದೀಗ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಸಮೀಪದ ನರ್ಸರಿಯಿಂದ ಸ್ವತಃ ಹಣ ನೀಡಿ ವಿವಿಧ ರೀತಿಯ ಹೂ ಗಿಡಗಳನ್ನು ಕಚೇರಿಯ ಎದುರು ತಾವೇ ಗುದ್ದಲಿ ಹಿಡಿದು ಗಿಡಗಳು ನೆಡುವ ಮೂಲಕ ಉದ್ಯಾನ ನಿರ್ಮಾಣಕ್ಕೆ ಚಾಲನೆ ನೀಡಿರುವುದು ವಿಶೇಷವಾಗಿದೆ.
ನೌಕರರಿಗೆ ರಿಲ್ಯಾಕ್ಸ್ ಸಾಧ್ಯ
ಇನ್ನು ಸದಾ ಒತ್ತಡದಲ್ಲಿಯೇ ಕಾರ್ಯನಿರ್ವಹಿಸುವ ನೌಕರರು ಸಹ ಸ್ವಲ್ಪ ಹೊತ್ತು ಉದ್ಯಾನದಲ್ಲಿ ಸುತ್ತಾಡಿದರೆ ಒತ್ತಡದಿಂದ ಹಗುರವಾಗುತ್ತಾರೆ. ಜತೆಗೆ ಒಂದೊಳ್ಳೆಯ ಪರಿಸರವೂ ನಿರ್ಮಾಣ ಮಾಡಿದಂತಾಗುತ್ತದೆ ಎಂಬ ಉದ್ದೇಶದಿಂದ ಇವರು ತಾವು ಕಾರ್ಯ ನಿರ್ವಹಿಸಿದ ಸ್ಥಳಗಳಲ್ಲೆಲ್ಲ ಉದ್ಯಾನ ನಿರ್ಮಾಣ ಮಾಡುತ್ತಾ ಬಂದಿದ್ದಾರೆ.