ರಸ್ತೆ ಬದಿ ಅರಳಿದ ಸೂರ್ಯಕಾಂತಿ, ಪ್ರವಾಸಿಗರಿಲ್ಲದೆ ರೈತರಿಗೆ ನಿರಾಶೆ
ಚಾಮರಾಜನಗರ, ಜೂನ್ 10: ರೈತರು ಕಷ್ಟಪಟ್ಟು ತಮ್ಮ ಜಮೀನಿನಲ್ಲಿ ಬೆಳೆದ ಸೂರ್ಯಕಾಂತಿ ಇದೀಗ ಹೂ ಬಿಟ್ಟು ನಳನಳಿಸುತ್ತಿದ್ದು, ಹಚ್ಚ ಹಸಿರ ಭೂ ತಾಯಿಯ ಒಡಲಲ್ಲಿ ಬಣ್ಣದ ಚಿತ್ತಾರ ಬರೆದಂತೆ ಕಾಣುವ ಸುಂದರ ನೋಟ ಗುಂಡ್ಲುಪೇಟೆ ತಾಲೂಕಿನ ಹೆದ್ದಾರಿಗಳಲ್ಲಿ ಪ್ರಯಾಣಿಸುವವರಿಗೆ ಲಭ್ಯವಾಗುತ್ತದೆ.
Recommended Video
ಇದು ಸೂರ್ಯಕಾಂತಿ ಗಿಡಗಳು ಹುಲುಸಾಗಿ ಬೆಳೆದು ಹೂ ಬಿಡುವ ಕಾಲವಾಗಿದ್ದರಿಂದ ಗುಂಡ್ಲುಪೇಟೆಯ ಹಂಗಳ, ಬಸವಪುರ, ಕಲ್ಲಿಗೌಡನಹಳ್ಳಿ, ಕಗ್ಗಲಹುಂಡಿ, ಹೀಗೆ ಅನೇಕ ಗ್ರಾಮಗಳು ಸೇರಿದಂತೆ ಎಲ್ಲೆಲ್ಲಿ ಸೂರ್ಯಕಾಂತಿಯನ್ನು ಬೆಳೆಯಲಾಗಿದೆಯೋ ಅಲ್ಲೆಲ್ಲ ಬೃಹತ್ ಆಕಾರದ ಹಳದಿ ಬಣ್ಣದ ಹೂವಿನೊಂದಿಗೆ ಕಂಗೊಳಿಸುವ ಸುಂದರ ದೃಶ್ಯಗಳು ಕಂಡು ಬರತೊಡಗಿದೆ. ಹೂವಿನ ಮನಮೋಹಕ ದೃಶ್ಯ ಕಣ್ತುಂಬಿಕೊಳ್ಳುವಂತಿದೆ. ಪ್ರತಿವರ್ಷವೂ ಇದೇ ಸಮಯದಲ್ಲಿ ರೈತರು ಸೂರ್ಯಕಾಂತಿಯನ್ನು ಬೆಳೆಯುತ್ತಿದ್ದರು. ಅಲ್ಲದೆ ಅವುಗಳನ್ನು ಜತನದಿಂದ ನೋಡಿಕೊಳ್ಳುತ್ತಿದ್ದರು.

ಮುಂಜಾನೆ ಸದಾ ಮಂಜಿನಿಂದ ಕೂಡಿರುತ್ತದೆ
ಯುವ ಜನತೆ ಏನೇ ಕಂಡರೂ ಅದನ್ನು ಮೊಬೈಲ್ನಲ್ಲಿ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು ಜನಪ್ರಿಯವಾದ ನಂತರ ಇತ್ತೀಚೆಗಿನ ವರ್ಷಗಳಲ್ಲಿ ಹೂದೋಟದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳಲು ಜನ ಮುಗಿಬೀಳತೊಡಗಿದ್ದರು. ಸುತ್ತಮುತ್ತಲಿನ ಪ್ರದೇಶ ಹಸಿರಾಗಿದ್ದು, ಮುಂಜಾನೆ ಸದಾ ಮಂಜಿನಿಂದ ಕೂಡಿರುತ್ತದೆ. ಇದೇ ಸಂದರ್ಭದಲ್ಲಿ ಸೂರ್ಯಕಾಂತಿ ಹೂ ಕೂಡ ಅರಳಿ ನಿಲ್ಲುವುದರಿಂದ ನಿಸರ್ಗದ ಸುಂದರ ನೋಟ ಇಮ್ಮಡಿಯಾಗಿರುತ್ತದೆ.

ಸುಂದರ ಹೂವಿನೊಂದಿಗೆ ಸೆಲ್ಫಿ
ಇಂತಹ ಸುಂದರ ದೃಶ್ಯಗಳನ್ನು ಮೊಬೈಲ್ಗಳನ್ನು ಸೆರೆ ಹಿಡಿಯಲು ವಾಹನಗಳಲ್ಲಿ ಸಾಗುವ ಜನ ಸೇರಿದಂತೆ ಪ್ರವಾಸಿಗರು ಸೂರ್ಯಕಾಂತಿ ಬೆಳೆದ ಜಮೀನಿನತ್ತ ಲಗ್ಗೆಯಿಡುವ ಭರದಲ್ಲಿ ಕೆಲವರು ಜಾಗ್ರತೆ ವಹಿಸದೆ ಗಿಡಗಳ ನಡುವೆ ಸೆಲ್ಫಿ ಹಾಗೂ ಫೋಟೋಗಳನ್ನು ತೆಗೆದುಕೊಳ್ಳುವ ವೇಳೆಯಲ್ಲಿ ಗಿಡಗಳಿಗೆ ಹಾನಿಯನ್ನುಂಟು ಮಾಡುತ್ತಿದ್ದರು. ಯಾರ ಅನುಮತಿ ಪಡೆಯದೆ ರಸ್ತೆಯಲ್ಲಿ ಸಾಗುವ ಪ್ರವಾಸಿಗರು ತಮ್ಮ ವಾಹನಗಳನ್ನು ನಿಲ್ಲಿಸಿ ಫೋಟೋಗಳನ್ನು ತೆಗೆಯಲಾರಂಭಿಸಿದರು.

ಫೋಟೋ ತೆಗೆಯಲು ಶುಲ್ಕ
ಇದೆಲ್ಲವನ್ನು ಗಮನಿಸಿದ ರೈತನೊಬ್ಬ ಕೆಲ ವರ್ಷಗಳ ಹಿಂದೆ ತಮ್ಮ ಸೂರ್ಯಕಾಂತಿ ತೋಟದಲ್ಲಿ ಸೆಲ್ಫಿ ಇನ್ನಿತರ ಫೋಟೋಗಳನ್ನು ತೆಗೆಯಲು ಹತ್ತು ರುಪಾಯಿಯ ಶುಲ್ಕ ವಿಧಿಸಿದ. ಅದನ್ನು ನೋಡಿ ಇತರೆ ರೈತರು ಅದನ್ನೇ ಮುಂದುವರೆಸಿದರು. ಇದರಿಂದ ಕೆಲವು ರೈತರಿಗೆ ಒಂದಷ್ಟು ಆದಾಯವೂ ಬಂದಿತು. ಆದರೆ ಈ ಬಾರಿ ಅದ್ಯಾವುದೂ ನಡೆಯುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಕಾರಣ ಕೊರೊನಾ ವೈರಸ್ ಹಿನ್ನಲೆಯಲ್ಲಿ ಪ್ರವಾಸಿಗರು ಇತ್ತ ಸುಳಿಯುತ್ತಿಲ್ಲ.

ಹೊರಗಿನಿಂದ ಬಾರದ ಪ್ರವಾಸಿಗರು
ಮೊದಲಾದರೆ ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವುದರಿಂದ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದರು. ಜತೆಗೆ ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಎರಡೂ ರಾಜ್ಯಗಳ ಪ್ರವಾಸಿಗರು ಹೆಚ್ಚಾಗಿ ರಾಜ್ಯಕ್ಕೆ ಬರುತ್ತಿದ್ದರು. ಹೀಗೆ ಬಂದವರು ಇಲ್ಲಿನ ಹೆದ್ದಾರಿಗಳ ಬದಿಯಲ್ಲಿ ಅರಳಿ ನಿಂತ ಸೂರ್ಯಕಾಂತಿ ತೋಟದತ್ತ ತೆರಳುತ್ತಿದ್ದರು. ಆದರೆ ಈ ಬಾರಿ ಹೂವು ಅರಳಿ ನಿಂತರೂ ಪ್ರವಾಸಿಗರು ಬರದೆ ರೈತರಿಗೆ ನಿರಾಶೆಯಾಗಿದೆ.

ಪ್ರವಾಸಿಗರ ನಿರೀಕ್ಷೆಯಲ್ಲಿ ರೈತರು
ಈಗ ಸೂರ್ಯಕಾಂತಿ ಹೂ ಅರಳಿದೆ. ಇನ್ನು ಕೆಲವೇ ದಿನಗಳಲ್ಲಿ ಅದು ಕೊಯ್ಲಿಗೆ ಬರುತ್ತದೆ. ಅಷ್ಟರೊಳಗೆ ಪ್ರವಾಸಿಗರು ಬಂದರೆ ರೈತರಿಗೆ ಆದಾಯ ಬರಲಿದೆ. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳು ಕಡಿಮೆಯಾಗಿ ಬದುಕು ಸಹಜ ಸ್ಥಿತಿಗೆ ಮರಳುತ್ತಿದ್ದಂತೆಯೇ, ಮತ್ತೆ ರೈತರು ಸೂರ್ಯಕಾಂತಿ ಬಯಲಲ್ಲಿ ಚೆಂಡು ಹೂ ಬೆಳೆಯಲಿದ್ದು, ಈ ವೇಳೆ ಪ್ರವಾಸಿಗರು ಇತ್ತ ಸುಳಿಯಬಹುದು ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ.












Click it and Unblock the Notifications