ಅಪಘಾತಗಳಿಗೆ ಆಹ್ವಾನ ನೀಡುತ್ತಿದೆ ಗುಂಡ್ಲುಪೇಟೆ ರಸ್ತೆ
ಚಾಮರಾಜನಗರ, ನವೆಂಬರ್.17:ಗುಂಡ್ಲುಪೇಟೆ ತಾಲೂಕಿನಲ್ಲಿ ಕಲ್ಲು ಗಣಿಗಾರಿಕೆಗಳು ನಾಯಿಕೊಡೆಗಳಂತೆ ಹರಡಿಕೊಂಡಿದ್ದು, ಇಲ್ಲಿನ ರಸ್ತೆಗಳಲ್ಲಿ ಭಾರೀ ಭಾರ ಹೊತ್ತ ಲಾರಿ, ಟಿಪ್ಪರ್, ಟ್ರ್ಯಾಕ್ಟರ್ ಗಳು ಆಗಾಗ್ಗೆ ಸಂಚರಿಸುತ್ತಿರುವ ಕಾರಣ ರಸ್ತೆಗಳು ಹದಗೆಟ್ಟಿದ್ದು, ಅಪಘಾತಗಳಿಗೆ ಆಹ್ವಾನ ನೀಡುತ್ತಿವೆ.
ಈಗಾಗಲೇ ತಾಲೂಕಿನಾದ್ಯಂತ ಹಲವು ಅವಘಡಗಳು ಸಂಭವಿಸಿದ್ದು, ಕೆಲವರು ಗಾಯಗೊಂಡಿದ್ದರೆ, ಮತ್ತೆ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲೂ ಹಳ್ಳಿಗಳಲ್ಲಿಯೇ ಕಲ್ಲುಗಣಿಗಾರಿಕೆ ಹೆಚ್ಚಾಗಿ ನಡೆಯುತ್ತಿದ್ದು, ಈ ರಸ್ತೆಗಳಲ್ಲಿ ಲಾರಿಗಳು ಸಂಚಾರ ಮಾಡುವುದರಿಂದ ರಸ್ತೆಗಳು ಹೊಂಡಮಯವಾಗುತ್ತಿರುವುದಲ್ಲದೆ, ಧೂಳುಮಯವಾಗುತ್ತಿದೆ.
ಗ್ರಾಮಗಳಲ್ಲಿ ಟಿಪ್ಪರ್ ಮತ್ತು ಲಾರಿಗಳಿಂದಾಗುತ್ತಿರುವ ತೊಂದರೆ ಬಗ್ಗೆ ಸಂಬಂಧಿಸಿದವರ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಜತೆಗೆ ಲಾರಿಗಳು ರಾತ್ರಿ ವೇಳೆಯಲ್ಲೇ ಸಂಚಾರ ಮಾಡುವುದರಿಂದ ಅವುಗಳನ್ನು ತಡೆದು ಪ್ರತಿಭಟನೆ ನಡೆಸಲು ನಿರ್ಧರಿಸಿ ಅದರಂತೆ ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಗ್ರಾಮಸ್ಥರು ರಾತ್ರಿ ವೇಳೆ ಎರಡು ಲಾರಿಗಳನ್ನು ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

30 ಟನ್ ಗೂ ಅಧಿಕಭಾರ ಹೊತ್ತ ಲಾರಿಗಳ ಸಂಚಾರದಿಂದ ಗ್ರಾಮಗಳ ಮೂಲಕ ಹಾದು ಹೋದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಬುಧವಾರ ಮಧ್ಯಾಹ್ನ ಬೈಕಿನಿಂದ ಕೆಳಗೆ ಬಿದ್ದು ಮಗುವೊಂದು ತೀವ್ರ ಗಾಯವಾಗಿ ಆಸ್ಪತ್ರೆಗೆ ಸೇರಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ರಾತ್ರಿ ತನಕ ಕಾದು ಕುಳಿತು ಲಾರಿಗಳು ಬರುವ ವೇಳೆ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಪ್ರಾದೇಶಿಕ ಸಾರಿಗೆ ಆಯುಕ್ತ ಪ್ರಭುಸ್ವಾಮಿ ಎಂಬುವರಿಗೆ ಮಾಹಿತಿ ನೀಡಿ ತಾವು ಲಾರಿಗಳನ್ನು ತಡೆಹಿಡಿದಿದ್ದು ಅವುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸುವಂತೆ ಮನವಿ ಮಾಡಿದ ಗ್ರಾಮಸ್ಥರ ಮಾತಿಗೆ ಸೊಪ್ಪು ಹಾಕದೆ ತಮ್ಮಲ್ಲಿ ಸಮರ್ಪಕ ಸಿಬ್ಬಂದಿಯಿಲ್ಲ.
ಆದ್ದರಿಂದ ನೀವೇ ವೇಬ್ರಿಜ್ ಗೆ ಕೊಂಡೊಯ್ದು ತೂಕ ಮಾಡಿಸಿ ಪೊಲೀಸರಿಗೆ ದೂರು ನೀಡಿ ಎಂದು ಪುಕ್ಕಟೆ ಸಲಹೆ ನೀಡಿ ಜಾರಿಕೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಜಿ.ಸದಾನಂದಸ್ವಾಮಿ ನೇತೃತ್ವದಲ್ಲಿ ಪೊಲೀಸ್ ಹಾಗೂ ಆರ್ ಟಿಒ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ರಸ್ತೆ ತಡೆ ನಡೆಸಿದ್ದಾರೆ.
ಬಳಿಕ ತಡವಾಗಿ ಸ್ಥಳಕ್ಕೆ ಆಗಮಿಸಿದ ಕಬ್ಬಹಳ್ಳಿ ಉಪ ಠಾಣೆಯ ಪೊಲೀಸರು ಲಾರಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ದಂಡ ವಿಧಿಸುವ ಭರವಸೆ ನೀಡಿದ್ದರಿಂದ ಗ್ರಾಮಸ್ಥರು ಪ್ರತಿಭಟನೆ ಕೈ ಬಿಟ್ಟಿದ್ದಾರೆ.












Click it and Unblock the Notifications