ಆಸ್ತಿ ವಿವರ : ಸಚಿವ ಮಹದೇವ ಪ್ರಸಾದ್ ಗೆ ಸಮನ್ಸ್
ಗುಂಡ್ಲುಪೇಟೆ, ಅಕ್ಟೋಬರ್ 07: ಆಸ್ತಿ ವಿವರಗಳ ಪ್ರಮಾಣಪತ್ರದಲ್ಲಿ ಸಮರ್ಪಕ ಮಾಹಿತಿ ನೀಡದ ಹಿನ್ನಲೆಯಲ್ಲಿ ಪಟ್ಟಣದ ನ್ಯಾಯಾಲಯವು ಸಹಕಾರ ಸಚಿವ ಎಚ್.ಎಸ್.ಮಹದೇವಪ್ರಸಾದ್ ಅವರಿಗೆ ಡಿ.21ರೊಳಗೆ ಸಮನ್ಸ್ ಜಾರಿಗೊಗೊಳಿಸುವಂತೆ 2ನೇ ಬಾರಿಗೆ ಆದೇಶ ನೀಡಿದೆ.
ವಿಧಾನ ಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ಅವರು ಚುನಾವಣಾ ಆಯೋಗಕ್ಕೆ ನೀಡಿದ್ದ ಆಸ್ತಿ ವಿವರಗಳ ಪ್ರಮಾಣಪತ್ರದಲ್ಲಿ ಅರೇಪುರ ಗ್ರಾಮದಲ್ಲಿ ಸ.ನಂ.165ರಲ್ಲಿ 3.22 ಎಕರೆ ಜಮೀನನ್ನು ಹೊಂದಿರುವುದನ್ನು ಘೋಷಣೆ ಮಾಡಿರಲಿಲ್ಲ.
ಇದು ಪ್ರಜಾಪ್ರತಿನಿಧಿ ಕಾಯ್ದೆಯ ಉಲ್ಲಂಘನೆಯಾಗಿದ್ದು, ಸಚಿವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಎಲ್.ಸುರೇಶ್ 23 ನವೆಂಬರ್ 2013ರಂದು ಪಟ್ಟಣದ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಅಂದಿನ ನ್ಯಾಯಾಧೀಶ ಡಿ.ಕಮಲಾಕ್ಷ ಅವರು ದೂರುದಾರ ಎಲ್.ಸುರೇಶ್ ಅವರನ್ನು ವಿಚಾರಣೆ ನಡೆಸಿದ ನಂತರ ಆರೋಪ ಮೇಲ್ನೋಟಕ್ಕೆ ಸತ್ಯವೆಂದು ಕಂಡುಬಂದ ಹಿನ್ನೆಲೆಯಲ್ಲಿ 12 ಜೂನ್ 2014ರಂದು ಸಚಿವ ಎಚ್.ಎಸ್.ಮಹದೇವಪ್ರಸಾದ್ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆದೇಶ ನೀಡಿ ಸಮನ್ಸ್ ಜಾರಿಗೊಳಿಸಿತ್ತು.
ಆದರೆ, ಇದನ್ನು ಪೊಲೀಸರು ಜಾರಿಗೊಳಿಸಲು ವಿಫಲರಾಗಿದ್ದರು. ಇದರ ವಿರುದ್ದ ಸಚಿವರು ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ ದೂರುದಾರು ತಡೆಯಾಜ್ಞೆ ತೆರವುಗೊಳಿಸಿತು. ಈ ಹಿನ್ನೆಲೆಯಲ್ಲಿ ಈ ವಿಚಾರಣೆಯ ದಿನಾಂಕವನ್ನು ಡಿ.21ಕ್ಕೆ ನಿಗದಿಗೊಳಿಸಿ ನ್ಯಾಯಾಧೀಶ ಜೆ.ಯೋಗೇಶ್ 2 ನೇ ಬಾರಿಗೆ ಸಮನ್ಸ್ ಜಾರಿಗೊಳಿಸಿ ಆದೇಶ ನೀಡಿದ್ದಾರೆ.