ಬಣ್ಣಾರಿ-ದಿಂಭಂ ಘಾಟ್ನಲ್ಲಿ ರಾತ್ರಿ ವಾಹನ ಸಂಚಾರ ನಿರ್ಬಂಧ
ಚಾಮರಾಜನಗರ, ಫೆಬ್ರವರಿ 12 : ಬಣ್ಣಾರಿ-ದಿಂಭಂ ಘಾಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 948 ಹಾದು ಹೋಗುತ್ತದೆ.
ರಸ್ತೆ ಸುರಕ್ಷತಾ ಸಮಿತಿಯ ತೀರ್ಮಾನದಂತೆ ಸಂಜೆ 6 ರಿಂದ ಬೆಳಗ್ಗೆ 6 ಗಂಟೆಯ ತನಕ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ನಿಷೇಧ ವಿಧಿಸಲಾಗಿದೆ. ಕಾಡುಪ್ರಾಣಿಗಳ ಹಿತದೃಷ್ಠಿಯಿಂದ ಈರೋಡ್ ಜಿಲ್ಲಾಧಿಕಾರಿ ಈ ಕ್ರಮ ಕೈಗೊಂಡಿದ್ದಾರೆ.
ವಾಹನಗಳ ವೇಗದ ಮಿತಿಯನ್ನು ಗಂಟೆಗೆ 30 ಕಿ.ಮೀ.ಗೆ ನಿಗದಿ ಪಡಿಸಲಾಗಿದೆ. ಘಾಟ್ನಲ್ಲಿನ 27 ಹೇರ್ ಪಿನ್ ತಿರುವಿನಲ್ಲಿ 12ಕ್ಕಿಂತ ಹೆಚ್ಚು ಚಕ್ರಗಳನ್ನು ಹೊಂದಿರುವ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಬಣ್ಣಾರಿ ಮತ್ತು ಹಾಸನೂರು ಚೆಕ್ಪೋಸ್ಟ್ಗಳಲ್ಲಿ ವಾಹನಗಳ ತೂಕವನ್ನು ಪರಿಶೀಲಿಸಿದ ನಂತರ ವಾಹನ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ನೀಡಿದೆ. ಕರ್ನಾಟಕದ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಂತೆ ಈ ರಸ್ತೆ ಇದೆ.
ಈ ಪ್ರದೇಶದಲ್ಲಿ ಹಾದು ಹೋಗುವ ವಾಹನಗಳಿಗೆ ಪ್ರವೇಶ ಶುಲ್ಕವನ್ನು ಸಹ ನಿಗದಿ ಮಾಡಲಾಗಿದೆ. ಸರ್ಕಾರಿ, ತುರ್ತು ವಾಹನಗಳಿಗೆ ಪ್ರವೇಶ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದ ಚೆಕ್ಪೋಸ್ಟ್ನಲ್ಲಿ ಶುಲ್ಕ ಪಾವತಿ ಮಾಡಬೇಕು.
ಶುಲ್ಕದ ವಿವರ : 4 ಚಕ್ರದ ವಾಹನ 20, ವ್ಯಾನ್ 30, ಲಘು ಮತ್ತು ಭಾರಿ ವಾಣಿಜ್ಯ 4 ಚಕ್ರಗಳ ವಾಹನ, ಚಿಕ್ಕಲಾರಿ 20, 6 ಚಕ್ರದ ವಾಹನಕ್ಕೆ 50, 8 ಚಕ್ರದ ವಾಹನಗಳಿಗೆ 60, 10 ಚಕ್ರದ ವಾಹನಗಳಿಗೆ 80, 12 ಚಕ್ರದ ವಾಹನಗಳಿಗೆ 100 ರೂ. ಶುಲ್ಕ ನಿಗದಿ ಮಾಡಲಾಗಿದೆ.












Click it and Unblock the Notifications