ದಲಿತರ ಶಾಪದಿಂದಲೇ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರು- ಕೆ.ಎಸ್ ಈಶ್ವರಪ್ಪ
ಕಾಶಿಯಲ್ಲಿ ಹಾಗೂ ಮಥುರದಲ್ಲಿ ದೇಗುಲ ಒಡೆದು ಮಸೀದಿ ಕಟ್ಟಿದ್ದಾರೆ, ಅವೆರಡು ಮಸೀದಿಯನ್ನು ಧ್ವಂಸ ಮಾಡಿ ಮಂದಿರ ಕಟ್ಟುತ್ತೇವೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಚಾಮರಾಜನಗರ, ಮಾರ್ಚ್2: 2024ಕ್ಕೆ ಮತ್ತೆ ನರೇಂದ್ರ ಮೋದಿ ಸರ್ಕಾರ ಬರಲಿದೆ. ಕಾಶಿ, ಮಥುರದಲ್ಲಿರುವ ಮಸೀದಿ ಧ್ವಂಸ ಮಾಡುತ್ತೇವೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಗುಂಡ್ಲುಪೇಟೆಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ರಥ ಯಾತ್ರೆಯಲ್ಲಿ ಮಾತನಾಡಿದ ಅವರು, ಕಾಶಿಯಲ್ಲಿ ಹಾಗೂ ಮಥುರದಲ್ಲಿ ದೇಗುಲ ಒಡೆದು ಮಸೀದಿ ಕಟ್ಟಿದ್ದಾರೆ, ಅವೆರಡು ಮಸೀದಿಯನ್ನು ಧ್ವಂಸ ಮಾಡಿ ಮಂದಿರ ಕಟ್ಟುತ್ತೇವೆ ಎನ್ನುವ ಮೂಲಕ ಶ್ರೀರಾಮ ಮಂದಿರದ ಬಳಿಕ ಮತ್ತೆ ಮಂದಿರದ ಅಸ್ತ್ರವನ್ನು ಈಶ್ವರಪ್ಪ ಪ್ರಯೋಗ ಮಾಡಿದ್ದಾರೆ.

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತಿದೆ, ಉದ್ಘಾಟನೆಯಾದ ಬಳಿಕ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹೋಗಿ ಬರಲಿ, ಅವರ ಪಾಪವಾದರೂ ಕಡಿಮೆಯಾಗಲಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ ಕೆ.ಎಸ್ ಈಶ್ವರಪ್ಪ, ತಮ್ಮ ಪದವಿಗೆ ಆಕಾಂಕ್ಷಿ ಎಂದು ಪರಮೇಶ್ವರ್ ಅವರನ್ನು ಸಿದ್ದರಾಮಯ್ಯ ಸೋಲಿಸಿದರು. ಮೈಸೂರಿನ ಚಾಮುಂಡೇಶ್ವರಿಯಲ್ಲಿ ಪರಮೇಶ್ವರ್ ಶಿಷ್ಯರು, ಅಭಿಮಾನಿಗಳು ಬಂದು ಸಿದ್ದರಾಮಯ್ಯರನ್ನು ಸೋಲಿಸಿದರು, ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಚಾಮುಂಡೇಶ್ವರಿ ಮೇಲೆ ಆಣೆ ಮಾಡಿ ಹೇಳಲಿ ಅವರು ಹೇಳಿದ ಹಾಗೆ ಕೇಳುತ್ತೇನೆ ಎಂದು ಕಾಂಗ್ರೆಸ್ ನಾಯಕರಿಗೆ ಆಣೆ-ಪ್ರಮಾಣದ ಸವಾಲೆಸೆದರು.
ದಲಿತರ ಶಾಪದಿಂದಲೇ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರು, ಸಿದ್ದರಾಮಯ್ಯಗೆ ಇನ್ನೂ ಕ್ಷೇತ್ರವೇ ಗೊತ್ತಾಗಿಲ್ಲ. ಅವರು ಕೋಲಾರಕ್ಕೆ ಹೋದರೆ ಬ್ರಹ್ಮ ಬಂದರು ಗೆಲ್ಲುವುದಿಲ್ಲ. ಕೋಲಾರದಲ್ಲಿ ಎಲ್ಲ ಸಮುದಾಯದವರು ಸಿದ್ದರಾಮಯ್ಯ ಅವರನ್ನು ಸೋಲಿಸಲು ಕಾಯುತ್ತಿದ್ದಾರೆ. ಕಾಂಗ್ರೆಸ್ ನವರು ಜಾತಿವಾದಿಗಳು, ನಾವು ರಾಷ್ಟ್ರೀಯ ವಾದಿಗಳು. ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಇವರಿಬ್ಬರು ಜಿನ್ನಾ ಸಂತತಿಯವರು ಎಂದು ಟೀಕಿಸಿದರು.
ಮಾತು ಮುಂದುವರಿಸಿದ ಅವರು, ಒಬ್ಬರ ಕಾಲು ಒಬ್ಬರು ಎಳೆಯುವುದೇ ಕಾಂಗ್ರೆಸ್ ಕೆಲಸವಾಗಿದೆ. ಚುನಾವಣೆಯಾಗದೆ. ಅವರೇ ಸಿಎಂ ಎಂದು ಘೋಷಣೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಬಾರಿ ಬಿಜೆಪಿ ರಾಜ್ಯದಲ್ಲಿ 150 ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ. ಬಿಜೆಪಿಯಲ್ಲಿ ಅಮಿತ್ ಷಾ, ವಿಶ್ವನಾಯಕ ಪ್ರಧಾನಿ ನರೇಂದ್ರ ಮೋದಿ ಇದ್ದಾರೆ ಅದಕ್ಕಾಗಿ ಅವರನ್ನು ನಾವು ರಾಜ್ಯಕ್ಕೆ ಕರೆದುಕೊಂಡು ಬಂದಿದ್ದೇವೆ. ನೀವು ನಿಮ್ಮ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರನ್ನು ರಾಜ್ಯಕ್ಕೆ ಕರೆದುಕೊಂಡು ಬನ್ನಿ, ರಾಗಾ, ಸೋನಿಯಾ ಹೋದ ಕಡೆಯಲೆಲ್ಲಾ ಅವರ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಇನ್ನು ನನಗೆ ಭರವಸೆ ಇದೆ ಈ ಬಾರಿ ಚಾಮರಾಜನಗರದ 4 ಕ್ಷೇತ್ರಗಳಲ್ಲಿ ಕಮಲ ಅರಳಲಿದೆ, ಈ ಬಾರಿ ನಿರಂಜನ ಕುಮಾರ್ 30 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications