Bandipur: ಬಂಡೀಪುರ ಕಾಡಿಗೆ ಬೆಂಕಿ, ಹೊತ್ತಿ ಉರಿದ ಹುಲ್ಲಿನ ಮೆದೆಗಳು, ಆದ ನಷ್ಟ ಎಷ್ಟು?
ಕಾಡು ಹಾಗೂ ಹುಲ್ಲಿನ ಮೆದೆಗಳು ಹೊತ್ತಿ ಉರಿದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ನಡೆದಿದೆ.
ಚಾಮರಾಜನಗರ, ಮಾರ್ಚ್, 05: ಕಾಡು ಹಾಗೂ ಹುಲ್ಲಿನ ಮೆದೆಗಳು ಹೊತ್ತಿ ಉರಿದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ನಡೆದಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದ ಗೌರಿಕಲ್ಲು ಬೆಟ್ಟ ಎಂಬಲ್ಲಿ ಬೆಂಕಿ ಕಾಣಿಸಿಕೊಂಡು ಅಂದಾಜು 25-30 ಹೆಕ್ಟೇರ್ನಷ್ಟು ಕಾಡು ಸುಟ್ಟು ಕರಕಲಾಗಿದೆ.
ಬೆಂಕಿ ನಂದಿಸಲು ಹರಸಾಹಸ
ದೊಡ್ಡ ಪ್ರಮಾಣದಲ್ಲಿ ಅರಣ್ಯ ಧಗಧಗಿಸಿದ್ದು, ಬೆಂಕಿ ವ್ಯಾಪಿಸುತ್ತಿದ್ದಂತೆ ಅಂದಾಜು 70-80 ಅರಣ್ಯ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿ ನಂದಿಸಿದ್ದಾರೆ. ದಿನೇ ದಿನೇ ಜಿಲ್ಲೆಯಲ್ಲಿ ವಾತಾವರಣ ಬಿಸಿ ಏರುತ್ತಿದ್ದು, ಈ ನಡುವೆ ಕಿಡಿಗೇಡಿಗಳ ಕೃತ್ಯದಿಂದ ಕಾಡು ಸುಟ್ಟು ಕರಕಲಾಗುತ್ತದೆ. ಕಳೆದ 3 ವರ್ಷಗಳಿಂದ ನಿರಂತರ ಮಳೆ, ಕೊರೊನಾ ಅಟ್ಟಹಾಸ ಇದ್ದಂತಹ ಸಂದರ್ಭದಲ್ಲಿ ಕಾಡಿಗೆ ಬೆಂಕಿ ಬಿದ್ದಿರಲಿಲ್ಲ. ಇದೀಗ ಪರಿಸ್ಥಿತಿ ಬದಲಾಗಿದ್ದು, ಕಾಡಿಗೆ ಬೇಸಿಗೆ ಕಂಟಕ ಆರಂಭವಾಗಿದೆ.

ಹುಲ್ಲಿನ ಮೆದೆಗಳು ಭಸ್ಮ
ಅಗ್ನಿ ಅವಘಡ ಸಂಭವಿಸಿ ಹುಲ್ಲಿನ ಮೆದೆಗಳು ಸುಟ್ಟು ಕರಕಲಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹೊಣಕನಪುರ ಗ್ರಾಮದಲ್ಲಿ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಹೊಣಕನಪುರ ಗ್ರಾಮದಲ್ಲಿ ಬೇರೆ ಬೇರೆ ರೈತರು ಒಂದೇ ಜಾಗದಲ್ಲಿ 9 ಮೆದೆಗಳನ್ನು ಹಾಕಿದ್ದರು. ಇದೀಗ ಒಂದು ಮೆದೆಗೆ ಹತ್ತಿದ ಬೆಂಕಿ ಎಲ್ಲದಕ್ಕೂ ವ್ಯಾಪಿಸಿ ಭಾರಿ ನಷ್ಟ ಉಂಟಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಇನ್ನು ಈ ಘಟನೆ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.
ಮತ್ತೊಂದು ಪ್ರಕರಣ ಶನಿವಾರ ರಾತ್ರಿ ನಡೆದಿದ್ದು, ಹೊರೆಯಾಲ ಗ್ರಾಮದ ಮೊಣಕಾರಯ್ಯ ಎಂಬವವರು ಹಾಕಿದ್ದ ಹುಲ್ಲಿನ ಮೆದೆಗೆ ಬೆಂಕಿ ಬಿದ್ದು ಅದು ಸುಟ್ಟು ಕರಕಲಾಗಿದೆ. ಬೇಸಿಗೆ ಕಾಲದಲ್ಲಿ ಜಾನುವಾರುಗಳಿಗೆ ಆಹಾರವಾಗಬೇಕಿದ್ದ ಮೇವು ಇದೀಗ ಬೂದಿಯಾಗಿದೆ.
ಹುಲಿ ಸಾವು ಸ್ವಾಭಾವಿಕವಲ್ಲ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯ ವ್ಯಾಪ್ತಿಯ ಕೆಬ್ಬೇಪುರ ಗ್ರಾಮದ ಮಲ್ಲಯ್ಯನಕಟ್ಟೆ ಕೆರೆಯಲ್ಲಿ ಫೆಬ್ರವರಿ 7ರಂದು ಪತ್ತೆಯಾಗಿದ್ದ ಗಂಡು ಹುಲಿಯ ಕಳೇಬರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಸಾವಿಗೆ ಕಾರಣ ಪತ್ತೆಹಚ್ಚಿದ್ದು ಈ ಸಂಬಂಧ ವ್ಯಕ್ತಿಯೊಬ್ಬನನ್ನು ಯಶಸ್ವಿಯಾಗಿದ್ದಾರೆ. ಹುಲಿ ಕಳೇಬರ ಪತ್ತೆಯಾದ ಬೆನ್ನಲ್ಲೇ ಸಾವು ಸ್ವಾಭಾವಿಕವಲ್ಲ ಎಂಬುದು ಪತ್ತೆಯಾಗಿತ್ತು.

ಹೀಗಾಗಿ ಅಧಿಕಾರಿಗಳು ಹುಲಿ ಸಾವಿನ ಕುರಿತಂತೆ ತನಿಖೆಯನ್ನು ಆರಂಭಿಸಿದ್ದರು. ಇದೀಗ ಹುಲಿ ಸಾವಿಗೆ ಜಮೀನಿಗೆ ಅಕ್ರಮವಾಗಿ ಹರಿಸಿದ್ದ ವಿದ್ಯುತ್ ಕಾರಣ ಎಂಬುದು ದೃಢಪಟ್ಟಿದೆ. ಜೊತೆಗೆ ಹುಲಿ ಸಾವಿನ ಹಿಂದೆ ಆರು ಜನರ ಕೈವಾಡವಿದ್ದು, ಈ ಪೈಕಿ ಒಬ್ಬ ಸಿಕ್ಕಿದ್ದು, ಉಳಿದವರ ಪತ್ತೆಗೆ ಬಲೆ ಬೀಸಲಾಗಿದೆ.












Click it and Unblock the Notifications