ಗುಂಡ್ಲುಪೇಟೆ: ಬಡಿದಾಡಿಕೊಂಡ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್, ಪೊಲೀಸ್ ಕಾನ್ಸ್ಟೇಬಲ್-ಕಾರಣ ಏನು?
ಚಾಮರಾಜನಗರ, ಮೇ, 31: ಟಿಕೆಟ್ ವಿಚಾರಕ್ಕೆ ಜಗಳವಾಗಿ ಸಾರ್ವಜನಿಕವಾಗಿ ಪೊಲೀಸ್ ಕಾನ್ಸ್ಟೇಬಲ್ ಹಾಗೂ ಬಸ್ ಕಂಡಕ್ಟರ್ ಹೊಡೆದಾಡಿಕೊಂಡ ಘಟನೆ ಗುಂಡ್ಲುಪೇಟೆ ಬಸ್ ನಿಲ್ದಾಣದಲ್ಲಿ ನಡೆದಿದೆ. ಹಾಗಾದರೆ ಈ ಸಂಘರ್ಷ ನಡೆಯಲು ಕಾರಣವಾದ್ರೂ ಏನು? ಇಲ್ಲಿದೆ ನೋಡಿ ಮಾಹಿತಿ.
ಗುಂಡ್ಲುಪೇಟೆ ಡಿಪೋದ ಕಂಡಕ್ಟರ್ ಲೋಕೇಶ್ ಹಾಗೂ ಮೈಸೂರು ಸಶಸ್ತ್ರ ಮೀಸಲು ಪಡೆ ಕಾನ್ಸ್ಟೇಬಲ್ ಕೊಟ್ರೇಶ್ ಹೊಡೆದಾಡಿಕೊಂಡಿದ್ದು, ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ಕೊಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಗಲಾಟೆ ನಡೆದಿದ್ದು ಯಾಕೆ?: ಕೊಟ್ರೇಶ್ ಕುಟುಂಬ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿ ಬಳಿಕ, ಬೆಟ್ಟದಿಂದ ಗುಂಡ್ಲುಪೇಟೆಗೆ ವಾಪಾಸ್ ಆಗುವ ವೇಳೆ ಕೊಟ್ರೇಶ್ ಅವರ ಚಿಕ್ಕಮ್ಮ ಮುಂದೆ ಕುಳಿತಿದ್ದರೇ ಕೊಟ್ರೇಶ್ ಹಿಂದೆ ಕುಳಿತಿದ್ದರು.
ಕೊಟ್ರೇಶ್ ಅವರ ಟಿಕೆಟ್ ಅನ್ನು ಚಿಕ್ಕಮ್ಮ ತೆಗೆದುಕೊಂಡಿದ್ದರು. ಇದು ತಿಳಿಯದೇ ಕೊಟ್ರೇಶ್ ಕೂಡ ಟಿಕೆಟ್ ಪಡೆದುಕೊಂಡಿದ್ದಾರೆ. ಬಸ್ನಿಂದ ಇಳಿದ ಬಳಿಕ ಎರಡು ಬಾರಿ ಟಿಕೆಟ್ ಪಡೆದ ವಿಚಾರಕ್ಕೆ ಕಂಡಕ್ಟರ್ ಲೋಕೇಶ್ ಹಾಗೂ ಕಾನ್ಸ್ಟೇಬಲ್ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ, ವಿಕೋಪಕ್ಕೆ ತಿರುಗಿ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕಾನ್ಸ್ಟೇಬಲ್ ಸಿವಿಲ್ ಡ್ರೆಸ್ನಲ್ಲಿದ್ದ ಕಾರಣ ಸಾರಿಗೆ ಸಂಸ್ಥೆಯ ಇತರೆ ಚಾಲಕರು, ಕಂಡಕ್ಟರ್ಗಳು ಕೂಡ ಕೊಟ್ರೇಶ್ಗೆ ಹೊಡೆದಿರುವುದು ಈ ವೀಡಿಯೋದಲ್ಲಿ ಸೆರೆಯಾಗಿದೆ. ಘಟನೆ ಬಳಿಕ ಗುಂಡ್ಲುಪೇಟೆ ಠಾಣೆಯಲ್ಲಿ ಇಬ್ಬರೂ ದೂರು-ಪ್ರತಿದೂರು ಕೊಟ್ಟಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರೆಬೇಕಿದೆ.












Click it and Unblock the Notifications