ಒಂದು ಪಕ್ಷವನ್ನು ಸೋಲಿಸುವ ಶಕ್ತಿ ರೈತರಿಗಿದೆ; ಕುರುಬೂರು ಶಾಂತಕುಮಾರ್
ಚಾಮರಾಜನಗರ, ಅಕ್ಟೋಬರ್, 02: ಕಬ್ಬಿನ ದರ ನಿಗದಿ ಮಾಡದೇ, ರೈತಸಂಘದ ಜೊತೆ ಚರ್ಚಿಸುವ ವ್ಯವಧಾನವೂ ಈ ಸರ್ಕಾರಕ್ಕಿಲ್ಲ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಚಾಮರಾಜನಗರದಲ್ಲಿ ಆಕ್ರೋಶ ಹೊರಹಾಕಿದರು.
ನಗರದಲ್ಲಿ ಮಾತನಾಡಿದ ಅವರು, ರೈತರ ಹೋರಾಟವನ್ನು ಪೊಲೀಸರ ಮೂಲಕ ಸರ್ಕಾರ ಹತ್ತಿಕ್ಕಿದೆ. ಅಕ್ಟೋಬರ್ 5ರೊಳಗೆ ಸಮಸ್ಯೆ ಬಗೆಹರಿಸುತ್ತೇವೆ ಎಂದು ಸೋಮಣ್ಣ ಹೇಳಿದ್ದಾರೆ. ಸಮಸ್ಯೆ ಈಡೇರದಿದ್ದರೆ ಮುಂದಿನ ಹೋರಾಟಕ್ಕೆ ರೂಪುರೇಷೆ ನಡೆಸುತ್ತೇವೆ ಎಂದು ಎಚ್ವರಿಸಿದ್ದಾರೆ.
ಬಂಡೀಪುರ ಕಾಡಲ್ಲಿ ಕಾನೂನು ಉಲ್ಲಂಘನೆ ಆರೋಪ; ರಾಹುಲ್ ಗಾಂಧಿ, ಸಿದ್ದು ವಿರುದ್ಧ ಬಿಜೆಪಿ ದೂರು
ಬಿಜೆಪಿ ಸರ್ಕಾರ ಇರುವ ಉತ್ತರ ಪ್ರದೇಶದಲ್ಲಿ ಒಂದು ಟನ್ ಕಬ್ಬಿಗೆ 3,500 ರೂಪಾಯಿ ಕೊಡುತ್ತಿದ್ದಾರೆ. ಗುಜರಾತ್ನಲ್ಲಿ 4,400 ರೂಪಾಯಿ ಇದೆ. ಅದೇ ರೀತಿ ಕರ್ನಾಟಕದಲ್ಲೂ 3,500 ರೂಪಾಯಿ ಕೊಡಿ ಎಂದು ಕೇಳಿದರೆ ರೈತಪರ ಸರ್ಕಾರ ಎಂದುಕೊಳ್ಳುವ ಇವರು ಪೊಲೀಸರ ಮೂಲಕ ದಬ್ಬಾಳಿಕೆ ನಡೆಸುತ್ತಾರೆ. ಇದೇ ರೀತಿ ಮುಂದುವರೆದರೇ ಪೊಲೀಸರ ವಿರುದ್ಧ ಬಾರುಕೋಲು, ಸಗಣಿ, ಪೊರಕೆ ಚಳವಳಿ ಮಾಡುತ್ತೇವೆ ಎಂದು ಎಚ್ಚರಿಸಿದರು.
ಒಂದು ಪಕ್ಷವನ್ನು ಸೋಲಿಸುವ ಶಕ್ತಿ ರೈತರಿಗಿದೆ; ರಾಜ್ಯದಲ್ಲಿ 30 ಲಕ್ಷಕ್ಕೂ ಹೆಚ್ಚು ಜನ ಕಬ್ಬು ಬೆಳೆಗಾರರಿದ್ದಾರೆ. 40 ಲಕ್ಷ ಪಂಪ್ ಸೆಟ್ ಬಳಸುವ ಕೃಷಿಕರಿದ್ದಾರೆ, ನಮಗೆ ಒಂದು ಪಕ್ಷವನ್ನು ಅಧಿಕಾರಕ್ಕೆ ತರಲು ಶಕ್ತಿ ಇಲ್ಲದಿದ್ದರೂ, ಒಂದು ಪಕ್ಷವನ್ನು ಸೋಲಿಸುವ ಶಕ್ತಿ ಅಂತೂ ರೈತರಿಗೆ ಇದೆ ಎಂದು ಗುಡುಗಿದ್ದಾರೆ.
ಇದೇ ವೇಳೆ ಕೆಲವರು ರಿಯಲ್ ಎಸ್ಟೇಟ್ ಮಾಲೀಕರು, ಉದ್ಯಮಿಗಳು ಹಸಿರು ಶಾಲು ಹಾಕೊಕೊಂಡು ರೈತರಿಗೆ ಮೋಸ ಮಾಡುತ್ತಿದ್ದಾರೆ. ಇಂಥವರ ಬಗ್ಗೆ ಎಚ್ವರ ಇರಲಿ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಈಗಾಗಲೇ ಬೆಳೆದ ಕಬ್ಬಿಗೆ ಸೂಕ್ತ ಬೆಲೆ ನೀಡುವಂತೆ ರೈತರು ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದರು. ಇದೀಗ ಕುರುಬೂರು ಶಾಂತ ಕುಮಾರ್ ಅವರು ಮಾತನಾಡಿದ್ದು, ಕಬ್ಬು ಬೆಳೆಗೆ ಸೂಕ್ತ ಬೆಲೆ ನಿಗದಿ ಮಾಡದಿದ್ದರೆ ಸರ್ಕಾರ, ಮತ್ತು ಪೊಲೀಸರ ದಬ್ಬಾಳಿಕೆ ವಿರುದ್ಧ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.