ಚಾಮರಾಜನಗರ: ಜೋತು ಬಿದ್ದ ವಿದ್ಯುತ್ ತಂತಿ ತಗುಲಿ ರೈತರ ದಾರುಣ ಸಾವು
ಚಾಮರಾಜನಗರ, ಅಕ್ಟೋಬರ್ 24: ಜಮೀನಿಗೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ಜೋತುಕೊಂಡಿದ್ದ ವಿದ್ಯುತ್ ತಂತಿ ತಗುಲಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಮಲ್ಲದೇವನಹಳ್ಳಿ ಬಳಿ ನಡೆದಿದೆ. ಚಾಮರಾಜನಗರ ತಾಲೂಕಿನ ಅಯ್ಯನಪುರ ಗ್ರಾಮದ ನಿವಾಸಿಗಳಾದ ನಾಗೇಂದ್ರ(48) ಹಾಗೂ ಮಲ್ಲೇಶ್(40) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ನಾಗೇಂದ್ರ ಹಾಗೂ ಮಲ್ಲೇಶ್ ಬುಧವಾರ ಮಧ್ಯರಾತ್ರಿ ಬೈಕ್ನಲ್ಲಿ ಅಯ್ಯನಪುರ-ಹಿತ್ತಲಗುಡ್ಡ ರಸ್ತೆಯಲ್ಲಿ ಜಮೀನಿನಿಂದ ಮನೆಗೆ ಬರುತ್ತಿದ್ದರು. ಈ ವೇಳೆ ವಿದ್ಯುತ್ ಕಂಬದ ಕೆಳಭಾಗದಲ್ಲಿ ಜೋತುಕೊಂಡಿದ್ದ ವಿದ್ಯುತ್ ತಂತಿ ತಗುಲಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗುರುವಾರ ಬೆಳಗ್ಗೆ ರೈತರು ಜಮೀನು ಕಡೆಗೆ ತೆರಳಿದ ವೇಳೆ ವಿಚಾರ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಚಾಮರಾಜನಗರ ಪೂರ್ವ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ, ಎಸ್ಪಿ ಭೇಟಿ
ಇಬ್ಬರು ರೈತರು ಮೃತಪಟ್ಟ ಸ್ಥಳಕ್ಕೆ ಜಿಲ್ಲಾಧಿಕಾರಿ ಶಿಲ್ಪಾನಾಗ್, ಎಸ್ಪಿ ಡಾ.ಬಿ.ಟಿ.ಕವಿತಾ, ಸೆಸ್ಕ್ ಸೂಪರಿಡೆಂಟ್ ಇಂಜಿನಿಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎರಡು ಕುಟುಂಬಗಳನ್ನು ಭೇಟಿ ಮಾಡಿದ ಅಧಿಕಾರಿಗಳು ಸಾಂತ್ವನ ಹೇಳಿದರು. ಈ ವೇಳೆ ರೈತ ಮುಖಂಡರು ಹಾಗೂ ಗ್ರಾಮಸ್ಥರು ಮೃತಪಟ್ಟಿರುವ ರೈತರ ಕುಟುಂಬಗಳ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು. ಸೂಕ್ತ ಪರಿಹಾರ ಕೊಡಿಸಬೇಕು. ಘಟನೆಗೆ ಕಾರಣರಾಗಿರುವ ಸೆಸ್ಕ್ ಜೆಇ ಅಮಾನತುಪಡಿಸಬೇಕು ಎಂದು ಆಗ್ರಹಿಸಿದರು.
ಎರಡು ಕುಟುಂಬಗಳ ತಲಾ ಒಬ್ಬರಿಗೆ ಸೆಸ್ಕ್ ಇಲಾಖೆಯಲ್ಲಿ ನೌಕರಿ. ಹಾಗೂ ಇಬ್ಬರ ಸಾವಿಗೆ ಕಾರಣರಾದ ನಿರ್ಲಕ್ಷ್ಯ ತೋರಿದ ಜೆಇಅನ್ನು ಅಮಾನತು ಪಡಿಸಲಾಗುವುದು. ಅಲ್ಲದೇ ಎರಡು ಕುಟುಂಬಗಳಿಗೂ ಸೂಕ್ತ ಪರಿಹಾರ ಕೊಡಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.
ಇದೇ ವೇಳೆ ಎರಡು ಕುಟುಂಬಗಳಿಗೆ ಸೆಸ್ಕ್ ಇಲಾಖೆ ವತಿಯಿಂದ ತಲಾ 5 ಲಕ್ಷ ರೂಪಾಯಿಗಳ ಚೆಕ್ ಅನ್ನು ಅಧಿಕಾರಿಗಳು ವಿತರಣೆ ಮಾಡಿದರು. ಅಲ್ಲದೇ ಪ್ರಕೃತಿ ವಿಕೋಪದಡಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮುಖ್ಯಮಂತ್ರಿ, ಇಂಧನ ಸಚಿವರನ್ನು ಭೇಟಿ ಮಾಡಿ ಹೆಚ್ಚಿನ ಪರಿಹಾರ ಕೊಡಿಸಲು ರೈತ ಮುಖಂಡರು ಹಾಗೂ ಗ್ರಾಮಸ್ಥರು ಆಗ್ರಹಿಸಿದರು. ಇದಕ್ಕೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮಹೇಶ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ರೈತ ಮುಖಂಡರಾದ ಹೊನ್ನೂರು ಪ್ರಕಾಶ್, ಹೆಬ್ಬಸೂರು ಬಸವಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.












Click it and Unblock the Notifications