ಸಿದ್ದರಾಮಯ್ಯ ಆಪ್ತರ ವಿರುದ್ಧ ಶ್ರೀನಿವಾಸ ಪ್ರಸಾದ್ ವಾಗ್ದಾಳಿ
ಗುಂಡ್ಲುಪೇಟೆ, ಅಕ್ಟೋಬರ್, 28: ಇವತ್ತು ಸಿಎಂ ಸಿದ್ದರಾಮಯ್ಯ ಅವರ ಎಡ, ಬಲ ಇರುವ ಇಬ್ಬರು ಸಚಿವರು ಒಂದು ಕಾಲದಲ್ಲಿ ಅವರನ್ನೇ ಸೋಲಿಸಲು ಮುಂದಾಗಿದ್ದರು. ಆ ಸಮಯದಲ್ಲಿ ರಾಜಕೀಯ ಪುನರ್ಜನ್ಮ ನೀಡಿದ್ದು ನಾನು ಎಂದು ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.
ಅಭಿಮಾನಿಗಳನ್ನು ಭೇಟಿ ಮಾಡಲು ಆಗಮಿಸಿದ ಸಂದರ್ಭ ಮಾತನಾಡಿದ ಅವರು ಸಚಿವರಾದ ಹೆಚ್.ಎಸ್.ಮಹದೇವಪ್ರಸಾದ್ ಮತ್ತು ಡಾ. ಹೆಚ್.ಸಿ. ಮಹದೇವಪ್ಪ ಅವರ ವಿರುದ್ಧ ಹರಿಹಾಯ್ದರು.
ಗುಂಡ್ಲುಪೇಟೆ ಕ್ಷೇತ್ರದಿಂದ 5 ಬಾರಿ ಶಾಸಕರಾಗಿರುವ ಹೆಚ್.ಎಸ್. ಮಹದೇವಪ್ರಸಾದ್ ತಮ್ಮ ಬಗ್ಗೆ ಲಘುವಾಗಿ ಮಾತನಾಡಿರುವುದು ಸರಿಯಲ್ಲ, ಮಹದೇವ ಪ್ರಸಾದ್ ಏನೆಂಬುದು ಇಡೀ ರಾಜ್ಯಕ್ಕೆ ತಿಳಿದಿದೆ.
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಸಿದ್ದರಾಮಯ್ಯರವರನ್ನು ರಾಜಕೀಯವಾಗಿ ಮುಗಿಸಲು , ಇದೇ ಮಹದೇವಪ್ರಸಾದ್ ದೇವೇಗೌಡರ ಸೂಚನೆಯಂತೆ ಸಂಚು ರೂಪಿಸಿದ್ದು ಇಡೀ ಜಗತ್ತಿಗೆ ಗೊತ್ತಿದೆ.
ಆದ್ರೆ ಇಂದು ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದು ಮುಖ್ಯಮಂತ್ರಿಗಳ ಬಲ ಮತ್ತು ಎಡ ಭಾಗದಲ್ಲಿ ಕಾಣಿಸಿಕೊಳ್ಳುವ ಮೂಲಕ ತಾನು ಮುಖ್ಯಮಂತ್ರಿಗೆ ನಿಷ್ಠನಂತೆ ಫೋಜ್ ಕೊಡುತ್ತಿದ್ದಾರೆ ಎಂದು ಲೇವಡಿಯಾಡಿದರು.
ಅಂದು ತಮ್ಮ ಮನೆಗೆ ಸೋನಿಯಾ ಗಾಂಧಿಯವರು ಆಸ್ಕರ್ ಫರ್ನಾಂಡಿಸ್ ಅವರನ್ನು ಕಳುಹಿಸಿ ಸಿದ್ದರಾಮಯ್ಯರವರನ್ನು ಗೆಲ್ಲಿಸುವಂತೆ ಸೂಚನೆ ನೀಡಿದ್ದರಿಂದ ನಾನು ಶಕ್ತಿ ಮೀರಿ ಅವರ ಗೆಲುವಿಗೆ ಶ್ರಮಿಸಿ ಆಮೂಲಕ ರಾಜಕೀಯವಾಗಿ ಪುನರ್ಜನ್ಮ ನೀಡಿದೆ .
ಇದು ಸಿದ್ದರಾಮಯ್ಯರವರಿಗೆ ಚೆನ್ನಾಗಿ ಗೊತ್ತಿದೆ. ಇವತ್ತು ನನ್ನ ಬಗ್ಗೆ ಲಘುವಾಗಿ ಮಾತನಾಡುವವರು ಒಂದು ಕಾಲದಲ್ಲಿ ಏನಾಗಿದ್ದರು ಎಂಬುದನ್ನು ಜನ ನೋಡಿದ್ದಾರೆ.
ಮುಂದೆ ಎಲ್ಲದಕ್ಕೂ ಉತ್ತರಿಸುವ ಕಾಲ ಬರಲಿದೆ ಆಗ ಯಾರು ಏನು ಎಂಬುದನ್ನು ಜನ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.