ಚಾಮರಾಜನಗರ; ಬಾಲ ಕಳೆದುಕೊಂಡು ನೋವು ತಾಳಲಾರದೇ ನೀರಲ್ಲೇ ನಿಂತ ಆನೆ
ಚಾಮರಾಜನಗರ, ನವೆಂಬರ್ 05: ಕಾದಾಟದಲ್ಲಿ ಆನೆಯೊಂದು ಬಾಲ ಕಳೆದುಕೊಂಡು ನೋವು ತಾಳಲಾರದೇ ಒದ್ದಾಡುತ್ತಾ ನೀರಿನಲ್ಲಿ ನಿಂತಿದ್ದ ಸಂಗತಿ ಕಾವೇರಿ ವನ್ಯಜೀವಿಧಾಮದ ಸಂಗಮ ವಲಯದಲ್ಲಿ ಬೆಳಕಿಗೆ ಬಂದಿದೆ.
ಬಾಲ ಕಳೆದುಕೊಂಡಿರುವ ಸಲಗದ ಮೇಲೆ ಅರಣ್ಯ ಇಲಾಖೆ ಈಗ ನಿಗಾ ಇಟ್ಟಿದೆ. ಬಾಲ ಕಳೆದುಕೊಂಡು ಗಾಯಗೊಂಡಿರುವ ಸಲಗ ನೋವು ತಾಳಲಾರದೇ ಹಾಗೂ ನೊಣಗಳ ಕಾಟದಿಂದ ರಕ್ಷಿಸಿಕೊಳ್ಳಲು ನೀರಿನಲ್ಲಿ ನಿಂತಿರುವುದು ಅರಣ್ಯ ಇಲಾಖೆ ಸಿಬ್ಬಂದಿ ಗಮನಕ್ಕೆ ಬಂದಿದೆ.
ಇದೀಗ ಗಾಯಗೊಂಡಿರುವ ಆನೆಗೆ ಚಿಕಿತ್ಸೆ ನೀಡಲಾಗುತ್ತಿದೆ. "ಸಲಗಕ್ಕೆ ಚಿಕಿತ್ಸೆ ಕೊಡಿಸಲು ಮತ್ತಿಗೂಡ ಅರಣ್ಯದಿಂದ ಅಭಿಮನ್ಯು ಹಾಗೂ ಕೃಷ್ಣ ಎಂಬ ಎರಡು ಕುಮ್ಕಿ ಆನೆ ಹಾಗೂ ಬನ್ನೇರುಘಟ್ಟದಿಂದ ವೈದ್ಯ ಡಾ. ಉಮಾಶಂಕರ್ ಅವರನ್ನು ಕರೆಸಲಾಗಿದೆ. ಎರಡು ದಿನಗಳ ಕಾಲ ಆನೆಯ ಮೇಲೆ ನಿಗಾ ವಹಿಸಲಾಗುವುದು. ಗಾಯ ಮಾಸದಿದ್ದರೆ ಸಾಕಾನೆಗಳ ಸಹಾಯ ಪಡೆದು ಚಿಕಿತ್ಸೆ ನೀಡಲಾಗುವುದು. ಸದ್ಯ ಅದು ನೀರಿನಿಂದ ಮೇಲೆ ಓಡಾಡಿಕೊಂಡಿದೆ" ಎಂದು ಸಿಸಿಎಫ್ ಮನೋಜ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಇದೇ ಜೂನ್ ತಿಂಗಳಿನಲ್ಲಿ ಕೇರಳದಲ್ಲಿ ಗರ್ಭಿಣಿ ಆನೆಯೊಂದು ಪಟಾಕಿ ತುಂಬಿದ್ದ ಅನಾನಸ್ ತಿಂದು ಸ್ಫೋಟಗೊಂಡು ಆ ನೋವು ತಾಳಲಾರದೇ ನೀರಿನಲ್ಲಿಯೇ ನಿಂತಿದ್ದ ಸಂಗತಿ ಇಡೀ ದೇಶದ ಗಮನ ಸೆಳೆದಿತ್ತು. ಕೊನೆಗೂ ಬದುಕಲಾಗದೇ ಆ ಆನೆ ಮೃತಪಟ್ಟಿದ್ದು, ಘಟನೆಗೆ ಕಾರಣರಾದವರ ಕ್ರಮಕ್ಕೆ ಎಲ್ಲೆಡೆಯಿಂದಲೂ ಒತ್ತಾಯ ಕೇಳಿಬಂದಿತ್ತು. ಈ ಸಂಬಂಧ ಮೂವರನ್ನು ಬಂಧಿಸಲಾಗಿತ್ತು.
ಇದೀಗ ಈ ಆನೆಯ ಚಿಕಿತ್ಸೆಗೆ ಅರಣ್ಯ ಇಲಾಖೆ ಒತ್ತು ನೀಡಿದೆ. ಆನೆಯ ಆರೋಗ್ಯ ಸುಧಾರಿಸುತ್ತಿರುವುದಾಗಿ ತಿಳಿಸಿದೆ.












Click it and Unblock the Notifications