ಮಲೆ ಮಾದಪ್ಪನ ಬೆಟ್ಟದ ತಪ್ಪಲಿನಲ್ಲಿ ಪುಂಡಾನೆ ಸೆರೆಗೆ ಸಜ್ಜಾದ ಅರ್ಜುನ & ಟೀಂ
ಚಾಮರಾಜನಗರ, ಆಗಸ್ಟ್, 18: ನಿತ್ಯ ಕೃಷಿ ಭೂಮಿಗೆ ದಾಂಗುಡಿ ಇಟ್ಟು ಬೆಳೆನಾಶ ಸೇರಿದಂತೆ ಕೃಷಿ ಪರಿಕರಗಳನ್ನು ನಾಶ ಮಾಡುತ್ತಿದ್ದ ಪುಂಡಾನೆ ಸೆರೆಗೆ ಇಂದು ಕಾರ್ಯಾಚರಣೆ ಆರಂಭವಾಗಿದ್ದು, ಅರ್ಜುನ ಅಂಡ್ ಟೀಂ ಆಪರೇಷನ್ ಶುರು ಮಾಡಿವೆ.
ಹನೂರು ತಾಲೂಕಿನ ಪೊನ್ನಾಚಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಉಪಟಳ ಮುಂದುವರೆದಿದ್ದು, ಪುಂಡಾನೆಯನ್ನು ಸೆರೆ ಹಿಡಿಯಬೇಕೆಂದು ಜನರ ತೀವ್ರ ಒತ್ತಡಕ್ಕೆ ಮಣಿದ ಅರಣ್ಯ ಇಲಾಖೆ ಇಂದಿನಿಂದ ಆನೆ ಸೆರೆ ಕಾರ್ಯಾಚರಣೆ ಆರಂಭ ಮಾಡಿದೆ. ನಾಗರಹೊಳೆ ಅಭಯಾರಣ್ಯದಿಂದ ಅರ್ಜುನ ನಾಯಕತ್ವದಲ್ಲಿ ಬಲರಾಮ, ಕರ್ಣ, ಅಶ್ವತ್ಥಾಮ ಸೇರಿದಂತೆ 6 ಆನೆಗಳು ಬಂದಿಳಿದಿದ್ದು ಮಲೆಮಹದೇಶ್ವರ ವನ್ಯಧಾಮದ ಪೊನ್ನಾಚಿ ಅರಣ್ಯ ಪ್ರದೇಶದಲ್ಲಿ ಅನೆ ಸೆರೆ ಕಾರ್ಯಾಚರಣೆ ಆರಂಭವಾಗಿದೆ.

3 ದಿನಗಳ ಕಾಲ ಈ ಆಪರೇಷನ್ ನಡೆಯಲಿದ್ದು ಆನೆ ಸೆರೆ ಸಿಕ್ಕದಿದ್ದರೇ ಮತ್ತೇ ಕಾರ್ಯಾಚರಣೆ ಮುಂದುವರೆಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದಲೂ ಪುಂಡಾನೆಯೊಂದು ಕಾಡಂಚಿನ ಜನರಿಗೆ ವ್ಯಾಪಕ ತೊಂದರೆ ಕೊಡುತ್ತಿತ್ತು. ಜಮೀನಿನಲ್ಲಿರುವ ಫಸಲು ತಿಂದು ಹಾಳು ಮಾಡುವುದರ ಜೊತೆಗೆ ಮನೆಗಳ ಬಳಿ ಬಂದು ಗೇಟ್, ಗೋಡೆ ಹಾಗೂ ತೆಂಗಿನ ಮರ ನಾಶಗೊಳಿಸುವ ಮೂಲಕ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಈಗ ಈ ಪುಂಡಾನೆ ಸೆರೆಗೆ ಕಾರ್ಯಾಚರಣೆ ಆರಂಭವಾಗಿದೆ.
ಚಿರತೆ ದಾಳಿಯಿಂದ ಬಾಲಕಿ ಬಲಿ
ಇತ್ತೀಚೆಗಷ್ಟೇ ಚಾಮರಾಜನಗರ ಜಿಲ್ಲೆಯಲ್ಲಿ ಚಿರತೆ ದಾಳಿಯಿಂದ ಬಾಲಕಿಯೊಬ್ಬಳು ಬಲಿಯಾಗಿದ್ದಳು. ಈ ಘಟನೆ ಮಾಸುವ ಮುನ್ನವೇ ಚಿರತೆ ಮತ್ತೊಬ್ಬ ಬಾಲಕನ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು.
ಮಲ್ಲಿಗೆಹಳ್ಳಿ ಗ್ರಾಮದ ಹರ್ಷಿತ್ (09) ದಾಳಿಗೊಳಗಾದ ಬಾಲಕ. ಗ್ರಾಮದ ಪ್ರಾಥಮಿಕ ಶಾಲೆ ಮುಂಭಾಗದಿಂದ ಮನೆಗೆ ತೆರಳುವಾಗ ಅವಿತು ಕುಳಿತಿದ್ದ ಚಿರತೆ ದಾಳಿ ಮಾಡಿದ್ದು, ಇದನ್ನು ಕಂಡ ಜನರು ಚೀರಾಟಿ ಕೂಗಾಡಿದ್ದರು. ಜನರ ಕಿರುಚಾಟಕ್ಕೆ ಬೆದರಿದ ಚಿರತೆ ಬಾಲಕನ್ನು ಬಿಟ್ಟು ಗದ್ದೆಗಳತ್ತ ಓಡಿಹೋಗಿತ್ತು ಎಂದು ತಿಳಿದುಬಂದಿತ್ತು.
ಇನ್ನು ಹರ್ಷಿತ್ನ ಮುಖ, ಗಂಟಲು, ಕಾಲು, ಹೊಟ್ಟೆಯ ಭಾಗಕ್ಕೆ ಚಿರತೆ ಗೀರಿ ಕಚ್ಚಿ ಗಾಯಗೊಳಿಸಿದೆ. ಬಳಿಕ ಯಳಂದೂರು ಆಸ್ಪತ್ರೆಯಲ್ಲಿ ಬಾಲಕನಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನೆ ಮಾಡಲಾಗಿತ್ತು.












Click it and Unblock the Notifications