ಬಂಡೀಪುರದಲ್ಲಿ ಸಫಾರಿ ವಾಹನ ತಡೆದ ಕಾಡಾನೆ ಮರಿ
ಚಾಮರಾಜನಗರ, ಆಗಸ್ಟ್ 1: ಪ್ರಸಿದ್ಧ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರಿದ್ದ ಜಂಗಲ್ ಲಾಡ್ಜ್ ಸಫಾರಿ ವಾಹನದ ಮೇಲೆ ಕಾಡಾನೆ ಮರಿಯೊಂದು ಬುಧವಾರ ದಾಳಿ ನಡೆಸಿದೆ. ವಾಹನದ ಗಾಜನ್ನು ಮರಿಯಾನೆ ಪುಡಿ ಮಾಡಿದೆ.
ತಾಯಿ ಮತ್ತು ಮರಿಯಾನೆ ಒಟ್ಟಿಗೆ ಮೇಯುತ್ತಿದ್ದ ವೇಳೆ ಸಫಾರಿ ವಾಹನವನ್ನು ಕಂಡು ಆಕ್ರೋಶದಿಂದ ನುಗ್ಗಿದ ಕಾಡಾನೆ ಕೆಲಕಾಲ ಅಲ್ಲೇ ನಿಂತು ಗೀಳಿಟ್ಟಿದೆ. ಇದರಿಂದ ವಾಹನದೊಳಗಿದ್ದ ಪ್ರವಾಸಿಗರು ಬೆಚ್ಚಿ ಬಿದ್ದಿದ್ದಾರೆ.
ತಕ್ಷಣ ವಾಹನ ಚಾಲಕ ವಾಹನವನ್ನು ಹಿಂದಕ್ಕೆ ತೆಗೆದುಕೊಂಡು ಅನಾಹುತವನ್ನು ತಪ್ಪಿಸಿದ್ದಾರೆ. ಬಳಿಕ ಆನೆ ಸ್ವಲ್ಪ ಸಮಯ ಸಫಾರಿ ದಾರಿಯಲ್ಲಿಯೇ ನಿಂತು ತೆರಳಿದೆ.

ಸಾಲೂರು ಮಠದ ಸ್ವಾಮೀಜಿ ವಾಹನವನ್ನು ತಡೆದ ಕಾಡಾನೆ: ಮಲೆ ಮಹದೇಶ್ವರ ಬೆಟ್ಟದ ರಸ್ತೆ ಮಧ್ಯೆ ಬಂದು ನಿಂತ ಕಾಡಾನೆಯೊಂದು ಸಾಲೂರು ಸ್ವಾಮೀಜಿಗಳ ಕಾರನ್ನು ತಡೆದು ಸುಮಾರು ಅರ್ಧ ಗಂಟೆ ಸತಾಯಿಸಿದೆ. ಸಾಲೂರು ಮಠದ ಗುರುಸ್ವಾಮಿ ಶ್ರೀಗಳು ಮಂಗಳವಾರ ಬೆಳಗ್ಗೆ ಕಾರಿನಲ್ಲಿ ದೇವಸ್ಥಾನಕ್ಕೆ ತೆರಳುತ್ತಿದ್ದರು. ಈ ವೇಳೆ ರಸ್ತೆ ಅಡ್ಡ ಬಂದ ಕಾಡಾನೆ ಕಾರು ಹೋಗಲು ದಾರಿ ಬಿಡದೆ ಆಕ್ರೋಶದಿಂದ ವರ್ತಿಸಿದೆ. ಆನೆ ಅಡ್ಡ ಬರುತ್ತಿರುವುದನ್ನು ನೋಡಿದ ಚಾಲಕ ಸ್ವಾಮೀಜಿಗಳಿದ್ದ ಕಾರನ್ನು ನಿಲ್ಲಿಸಿದ್ದಾನೆ, ಜೊತೆಗೆ ಆನೆ ವಾಪಸ್ ಹೋಗುವವರೆಗೂ ಕಾರಿನ ಎಂಜಿನ್ ಚಾಲನೆಯಲ್ಲಿಟ್ಟು ಕಾಯುತ್ತಿದ್ದರು. ಬಳಿಕ ಆನೆ ನಿಧಾನವಾಗಿ ಚಲಿಸಿದೆ.












Click it and Unblock the Notifications