ಮಲೆ ಮಹದೇಶ್ವರನ ಸನ್ನಿಧಿಯಲ್ಲೇ ನೀರಿಗಾಗಿ ಪರದಾಟ
ಚಾಮರಾಜನಗರ, ಸೆಪ್ಟೆಂಬರ್ 26 : ಜಿಲ್ಲೆಯ ಹನೂರು ತಾಲೂಕು ವ್ಯಾಪ್ತಿಯಲ್ಲಿ ಈ ಬಾರಿ ಉತ್ತಮ ಮಳೆಯಾಗಿ ಕೆರೆಕಟ್ಟೆಗಳು ತುಂಬಿದ್ದರೂ ಮಲೆಮಹದೇಶ್ವರನ ಸನ್ನಿಧಿಯಲ್ಲಿರುವ ಬೆಟ್ಟದ ತಂಬಡಿಗೇರಿಯ ಜನ ಮಾತ್ರ ನೀರಿಗಾಗಿ ಪರಿತಪಿಸುವಂತಾಗಿದೆ.
ಇಲ್ಲಿಗೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸಲಾಗಿದ್ದರೂ ನೀರು ಸರಬರಾಜು ಮಾಡದ ಕಾರಣದಿಂದಾಗಿ ಕಳೆದೊಂದು ತಿಂಗಳಿನಿಂದ ಬೆಟ್ಟದ ತಂಬಡಿಗೇರಿಯ ಜನ ನೀರಿಗಾಗಿ ಪರದಾಡುತ್ತಿದ್ದಾರೆ.
ತಂಬಡಿಗೇರಿಯಲ್ಲಿ ಸುಮಾರು 700 ಕುಟುಂಬಗಳು ನೆಲೆಸಿದ್ದು, ಇಲ್ಲಿಗೆ ಕಾವೇರಿ ನೀರನ್ನು ಸರಬರಾಜು ಮಾಡುವ ಪ್ರಕ್ರಿಯೆ ನಡೆದಿತ್ತು. ಈ ಹಿಂದಿನ ಮಲೆ ಮಹದೇಶ್ವರ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿಯಾಗಿದ್ದ ಡಿ.ಭಾರತಿ ದೇವಸ್ಥಾನದ ಆಡಳಿತ ಮಂಡಳಿಗೆ ಸೂಚನೆ ನೀಡುವ ಮೂಲಕ ನೀರು ಸರಬರಾಜು ಮಾಡಲು ಮುಂದಾಗಿದ್ದರು.
ಅದರಂತೆ ಮಲೆಮಹದೇಶ್ವರಬೆಟ್ಟದ ಪಂಚಾಯಿತಿ ಪೈಪ್ ಲೈನ್ ಅಳವಡಿಸಿ ನೀರು ಸರಬರಾಜು ಮಾಡುವ ಆಸೆ ಹುಟ್ಟಿಸಿತ್ತು. ಪೈಪ್ ಲೈನ್ ಕೆಲಸ ಮುಗಿದಿದ್ದರಿಂದ ನೀರು ಮನೆಗಳಿಗೆ ತಲುಪುತ್ತದೆ ಎಂದು ಜನ ಖುಷಿಪಟ್ಟಿದ್ದರು. ಆದರೆ ಭಾರತಿಯವರು ವರ್ಗಾವಣೆಯಾಗುತ್ತಿದ್ದಂತೆಯೇ ಈ ಕಾಮಗಾರಿ ನೆನೆಗುದಿಗೆ ಬಿದ್ದಿತು.
ಇದೀಗ ಪಂಚಾಯಿತಿಯಿಂದ ಪೈಪ್ ಲೈನ್ ಅಳವಡಿಸಲಾಗಿದ್ದು, ಕಾವೇರಿ ನೀರನ್ನು ತಂಬಡಿಗೇರಿಗೆ ಹರಿಸುವ ಕಾರ್ಯ ಮಾತ್ರ ಕಾರ್ಯರೂಪಕ್ಕೆ ಬಂದಿಲ್ಲ. ಪೈಪ್ ಲೈನ್ ಬಸವರಾಜಪ್ಪ ಹಾಗೂ ಮಲ್ಲೇಶ್ ಎಂಬುವವರು ಸ್ಥಗಿತಗೊಳಿಸಿದ್ದು, ಇದರಿಂದ ನೀರು ಸರಬರಾಜಾಗುತ್ತಿಲ್ಲ ಎಂಬುದು ಇಲ್ಲಿನ ಸ್ಥಳೀಯರ ಆರೋಪ.
ನೀರಿನ ಸಮಸ್ಯೆಯನ್ನು ಮನಗಂಡು ಸ್ಥಳೀಯ ಶಾಸಕರು ನೀರು ಹರಿಸುವಂತೆ ಸೂಚಿಸಿದ್ದರೂ ಪಂಚಾಯಿತಿ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ತೋರಿಸಿಲ್ಲ. ಪರಿಣಾಮ ಇಲ್ಲಿನ ಜನ ನೀರಿಗಾಗಿ ಪರದಾಡುವುದು ತಪ್ಪಿಲ್ಲ. ಇನ್ನಾದರೂ ಈ ಬಗ್ಗೆ ಸಂಬಂಧಿಸಿದವರು ಗಮನಹರಿಸಿ ನೀರು ಒದಗಿಸುತ್ತಾರಾ ಎಂಬುದಾಗಿ ಬೆಟ್ಟದತಂಬಡಿಗೇರಿಯ ಜನ ಕಾಯುತ್ತಿದ್ದಾರೆ.
ರಾಜ್ಯ ಸೇರಿದಂತೆ ದೂರದ ಊರುಗಳಿಂದ ತಮ್ಮ ಕಷ್ಟಗಳನ್ನು ಪರಿಹರಿಸು ಎಂದು ಬೇಡಿಕೊಂಡು ಮಲಮಹದೇಶ್ವರ ಬೆಟ್ಟಕ್ಕೆ ಜನ ಬರುತ್ತಾರೆ. ಆದರೆ ಇಲ್ಲಿಗೆ ಸಮೀಪವೇ ಇರುವ ಜನ ನೀರಿಗಾಗಿ ಬೇಡಿಕೊಳ್ಳಬೇಕಾದ ಪರಿಸ್ಥಿತಿಗೆ ತಂದಿಟ್ಟಿರುವುದು ನಿಜಕ್ಕೂ ಬೇಸರದ ಸಂಗತಿಯೇ...