ಬಂಡೀಪುರದಲ್ಲಿ ಕುಡಿದು ವಾಹನ ಚಾಲನೆ, ದಂಡ ವಿಧಿಸಿದ ಕೋರ್ಟ್
ಗುಂಡ್ಲುಪೇಟೆ, ಜನವರಿ 31: ಬಂಡೀಪುರ ಅಭಯಾರಣ್ಯದಲ್ಲಿ ಕುಡಿದು ವಾಹನ ಚಾಲನೆ ಮಾಡಿ, ವನ್ಯ ಪ್ರಾಣಿಗಳಿಗೆ ಕೀಟಲೆ ಮಾಡುತ್ತಿದ್ದ ಪುಂಡರ ವಿರುದ್ಧ ಕೇಸು ದಾಖಲಿಸಿ, ದಂಡ ವಿಧಿಸಿದ ಘಟನೆ ನಡೆದಿದೆ. ಸೋಮವಾರ ಸಂಜೆ ಕೇರಳ ಮೂಲದ ವ್ಯಕ್ತಿಗಳು ಕುಡಿದು, ಕಾರಿನಲ್ಲಿ (ಕೆ.ಎಲ್.10-ಎ.ಎಂ. 9711) ಮುದುಮಲೈ ಅರಣ್ಯ ಪ್ರದೇಶದಿಂದ ಬಂಡೀಪುರ ಅರಣ್ಯಕ್ಕೆ ಪ್ರವೇಶಿಸಿದ್ದರು.
ಅಷ್ಟಕ್ಕೆ ಸುಮ್ಮನೆಯಾಗದೆ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ, ಮದ್ಯಪಾನ ಮಾಡಿದ್ದಾರೆ. ಜೊತೆಗೆ ಜಿಂಕೆ, ನವಿಲುಗಳಿಗೆ ಮದ್ಯವನ್ನು ಸುರಿದ್ದಿದ್ದಾರೆ. ಇದನ್ನು ಗಮನಿಸಿದ ಪ್ರವಾಸಿಗರು ಬಂಡೀಪುರದ ಉಪಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ. ಕೂಡಲೇ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಪೇದೆಗಳಾದ ಕಿಶೋರ್ ಮತ್ತು ಜಯರಾಂ ಅವರು ಸವಾರರನ್ನು ಪರಿಶೀಲಿಸಿದಾಗ ಕುಡಿದಿರುವುದು ದೃಢಪಟ್ಟಿದೆ.[ಬಂಡೀಪುರದಲ್ಲಿ ವಾಹನಕ್ಕೆ ಬಲಿಯಾದ ಜಿಂಕೆ!]
ಆ ನಂತರ ವಾಹನ ಮತ್ತು ಸವಾರರನ್ನು ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ. ಪಿಎಸ್ ಐ ಸಂದೀಪ್ ಕುಮಾರ್, ಭಾರತೀಯ ಮೋಟಾರು ಕಾಯ್ದೆಯಡಿ ದೂರು ದಾಖಲಿಸಿಕೊಂಡು ವಾಹನ ಸವಾರರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಬಂಧಿತರಿಗೆ 3900 ರುಪಾಯಿ ದಂಡ ವಿಧಿಸಿದೆ.