ಕೋವಿಡ್ ಮುಕ್ತ ಜಿಲ್ಲೆಯಾಗುವತ್ತ ಚಾಮರಾಜನಗರ ದಾಪುಗಾಲು
ಚಾಮರಾಜನಗರ, ಜೂನ್ 03; ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಮೇ 2ರಂದು ರಾತ್ರಿ ಆಕ್ಸಿಜನ್ ಕೊರತೆಯಿಂದಾಗಿ 24 ಜನ ಸೋಂಕಿತರು ಮೃತಪಟ್ಟ ವಿಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರು, ಆರೋಗ್ಯ ಸಚಿವರು ಎಲ್ಲರೂ ಜಿಲ್ಲೆಗೆ ದೌಡಾಯಿಸಿ ಬಂದರು.
ಆಗ ಆಕ್ಸಿಜನ್ ಕೊರತೆಗೆ ಕಾರಣರಾರು? ಎಂಬ ವಿಷಯದ ಬಗ್ಗೆ ಚರ್ಚೆಯೂ ನಡೆಯಿತು. ನಂತರ ಎಲ್ಲ ಘಟನೆಗಳಂತೆ ದಿನ ಕಳೆದಂತೆ ಈ ದುರಂತವೂ ಜನರ ಮನಸ್ಸಿನಿಂದ ಮರೆಯಾಗುತ್ತದೆ ಎಂಬ ಭಾವನೆ ಎಲ್ಲರಲ್ಲೂ ಇತ್ತು.
ದುರಂತದ ನಂತರ ಹೈಕೋರ್ಟಿನಿಂದ ನಡೆಯುತ್ತಿರುವ ನ್ಯಾಯಾಂಗ ತನಿಖೆಯ ಕಾರಣದಿಂದಲೋ ಅಥವಾ ಆಡಳಿತಯಂತ್ರ ಚುರುಕಾಗಿರುವುದರಿಂದಲೋ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊತ್ತಿರುವ ಜಿಲ್ಲೆ ಇಂದು ನಿಜಕ್ಕೂ ಒಂದಷ್ಟು ಅಭಿವೃದ್ದಿ ಕಾಣುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಇಲ್ಲಿಯೇ ಮೊಕ್ಕಾಂ ಹೂಡಿ ಕೋವಿಡ್ ನಿಯಂತ್ರಣಾ ಕ್ರಮಗಳನ್ನು ಅವಲೋಕಿಸುತಿದ್ದಾರೆ, ಅಧಿಕಾರಿಗಳಿಗೆ ಮಾರ್ಗ ದರ್ಶನ ನೀಡುತ್ತಿದ್ದಾರೆ. ಇದು ಜನತೆಯಲ್ಲೂ ಒಂದಷ್ಟು ಭರವಸೆಯನ್ನು ಹೆಚ್ಚಿಸಿದೆ.

503 ಗ್ರಾಮಗಳು ಕೊರೊನಾ ಮುಕ್ತ
ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್, "ಜಿಲ್ಲೆಯಲ್ಲಿ ಒಟ್ಟು 503 ಗ್ರಾಮಗಳಿದ್ದು, ಈ ಪೈಕಿ 210 ಗ್ರಾಮಗಳು ಕೋವಿಡ್ ಮುಕ್ತ ಗ್ರಾಮಗಳಾಗಿವೆ" ಎಂದು ಹೇಳಿದ್ದಾರೆ. ಹನೂರು ತಾಲ್ಲೂಕಿನ ಪಿ. ಜಿ. ಪಾಳ್ಯ ಗ್ರಾಮದ ಜೀರಿಗದ್ದೆ ಗ್ರಾಮದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮದ ಮುಖಂಡರೊಂದಿಗೆ ಸಭೆ ನಡೆಸಿದರು. ಪಿ. ಜಿ. ಪಾಳ್ಯ ಗ್ರಾಮ ಪಂಚಾಯಿತಿಯಲ್ಲಿ 23 ಗ್ರಾಮಗಳಿದ್ದು, ಇದರಲ್ಲಿ 16 ಗ್ರಾಮಗಳಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗಿಲ್ಲ. ಕೆಲವು ಗ್ರಾಮಗಳಲ್ಲಿ ಕೋವಿಡ್ ನಿಯಮ ಪಾಲಿಸದ ಪರಿಣಾಮ ಸೋಂಕು ಕಂಡು ಬಂದಿದೆ. ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನ ನೀಡಿ ಸೋಂಕು ತಡೆಯಲು ಮುಂದಾಗಬೇಕು ಎಂದು ಸೂಚನೆ ನೀಡಿದರು.

ಹಾಡಿಗಳಿಗೆ ಸಚಿವ ಸುರೇಶ್ ಕುಮಾರ್ ಭೇಟಿ
ಜಿಲ್ಲೆಯಲ್ಲಿರುವ ಹಾಡಿಗಳಲ್ಲಿ ವಾಸಿಸುವ ಆದಿವಾಸಿ ಸೋಲಿಗ ಜನಾಂಗದವರು ಕೋವಿಡ್ ನಿರೋಧಕ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ. ಸ್ವತಃ ಹಾಡಿಗಳಿಗೆ ಭೇಟಿ ನೀಡುತ್ತಿರುವ ಸಚಿವರು ಹನೂರು ತಾಲ್ಲೂಕಿನ ವಿವಿಧ ಗಿರಿಜನರ ಹಾಡಿಗಳು ಹಾಗೂ ಗ್ರಾಮಗಳಿಗೆ ಭೇಟಿ ನೀಡಿ ಜನರ ಅಹವಾಲುಗಳನ್ನು ಆಲಿಸಿದರು. ಕೋವಿಡ್ ನಿಯಂತ್ರಣ ಸಂಬಂಧ ಪರಿಶೀಲಿಸಿದರು. ಹಲವು ಗ್ರಾಮಗಳಲ್ಲಿ ಸಭೆ ನಡೆಸಿದರು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಗಿರಿಜನರಿಗೆ ನೀಡಲಾಗುತ್ತಿರುವ ಪೌಷ್ಟಿಕ ಆಹಾರದ ಬಗ್ಗೆ ಖುದ್ದು ಪರಿಶೀಲಿಸಿದರು. ಹಾಡಿಗಳಲ್ಲಿ ಗಿರಿಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದರಿಂದ, ಅವರಿಗಾಗಿ ಪ್ರತ್ಯೇಕ ಲಸಿಕೆ ನೀಡುವ ವಿಶೇಷ ಆಂದೋಲನ ಕೈಗೊಳ್ಳಬೇಕು ಎಂದು ಸೂಚಿಸಿದರು.

ಪಿಎಚ್ಸಿಗಳಿಗೆ ವೈದ್ಯರ ನೇಮಕ
ಆರೋಗ್ಯ ಇಲಾಖೆ ಜಿಲ್ಲೆಯ ವಿವಿಧ ತಾಲ್ಲೂಕುಗಳ 25 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯರನ್ನು ನಿಯುಕ್ತಿ ಮಾಡಿ ಆದೇಶ ಹೊರಡಿಸಿದೆ. ಜಿಲ್ಲೆಗೆ 25 ಮಂದಿಯನ್ನು ನಿಯುಕ್ತಿಗೊಳಿಸಲಾಗಿದೆ. ಹಲವು ತಿಂಗಳುಗಳಿಂದ ವೈದ್ಯರು ಇಲ್ಲದೇ ಇದ್ದ ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ತೀರಾ ಗ್ರಾಮೀಣ ಪ್ರದೇಶಗಳ ಆಸ್ಪತ್ರೆಗಳಿಗೆ ವೈದ್ಯರ ನೇಮಕವಾಗಿದೆ. ಆರೋಗ್ಯ ಇಲಾಖೆಯ ಈ ನಿರ್ಧಾರದಿಂದಾಗಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಸೇವೆ ಇನ್ನಷ್ಟು ಸುಧಾರಿಸುವ ನಿರೀಕ್ಷೆಯನ್ನು ಹುಟ್ಟುಹಾಕಿದೆ. ವೈದ್ಯರ ಕೊರತೆಯಿಂದ ಬಳಲಿದ್ದ ಜಿಲ್ಲಾ ಆರೋಗ್ಯ ಇಲಾಖೆಗೂ ಇದರಿಂದ ಒಂದಷ್ಟು ಬಲ ಬಂದಿದೆ. ಜಿಲ್ಲೆಯಲ್ಲಿ 60 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಈ ಪೈಕಿ ಏಳು ಕೇಂದ್ರಗಳಲ್ಲಿ ವೈದ್ಯರೇ ಇರಲಿಲ್ಲ. ಉಳಿದ ಕೇಂದ್ರಗಳಲ್ಲಿ ಎಂಬಿಬಿಎಸ್ ವೈದ್ಯರು ಇಲ್ಲದ ಕಡೆಗಳಲ್ಲಿ ಆಯುಷ್ ವೈದ್ಯರನ್ನು ನೇಮಿಸಲಾಗಿತ್ತು.
Recommended Video

ಆಕ್ಸಿಜನ್ ದುರಂತ
ಜಿಲ್ಲಾ ಆಸ್ಪತ್ರೆ ಆಕ್ಸಿಜನ್ ದುರಂತದ ಬಳಿಕ ಚಾಮರಾಜನಗರ ಜಿಲ್ಲೆ ಬಗ್ಗೆ ಸರ್ಕಾರ ವಿಶೇಷ ಆಸಕ್ತಿವಹಿಸಿದೆ. ಜಿಲ್ಲೆಯಲ್ಲಿ ಆರೋಗ್ಯ ಸೇವೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ. ಸಿ. ರವಿ ಮಾತನಾಡಿದ್ದು, ‘7 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಿಟ್ಟು ಉಳಿದ ಎಲ್ಲ ಕಡೆಗಳಲ್ಲಿ ವೈದ್ಯರು ಇದ್ದರು. ಎಂಬಿಬಿಎಸ್ ವೈದ್ಯರು ಇಲ್ಲದ ಕಡೆಗಳಲ್ಲಿ ಆಯುಷ್ ವೈದ್ಯರು ಇದ್ದರು. ಇನ್ನೂ ಕೆಲವು ಕಡೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದರು. ಗುತ್ತಿಗೆ ಆಧಾರದಲ್ಲಿರುವ ಕೆಲವು ವೈದ್ಯರ ಸೇವೆ ಈಗ ಕಾಯಂ ಆಗಿದೆ" ಎಂದು ಹೇಳಿದರು.












Click it and Unblock the Notifications