ಬಂಡೀಪುರದ ಮಾರಿಗುಡಿ ಜಾತ್ರೆ: ಗ್ರಾಮಸ್ಥರು ಅರಣ್ಯಾಧಿಕಾರಿಗಳ ಜಗ್ಗಾಟ
ಬಂಡೀಪುರ ಅರಣ್ಯದಲ್ಲಿರುವ ಐನೂರು ಮಾರಿಗುಡಿಯಲ್ಲಿ ಪ್ರತಿ ವರ್ಷವೂ ಜಾತ್ರೆ ನಡೆಯುತ್ತಿದ್ದು, ಈ ದಟ್ಟಾರಣ್ಯದಲ್ಲಿ ಜಾತ್ರೆ ನಡೆಸಬೇಕಾದರೆ ಅರಣ್ಯ ಇಲಾಖೆ ಅನುಮತಿ ಪಡೆಯುವುದು ಅನಿವಾರ್ಯ.
ಅರಣ್ಯ ಇಲಾಖೆ ಸಹ ಒಂದಷ್ಟು ನಿರ್ಬಂಧಗಳನ್ನು ವಿಧಿಸಿದ್ದು, ಅದಕ್ಕೆ ತಕ್ಕಂತೆ ಜಾತ್ರೆಯನ್ನು ನಡೆಸಬೇಕಾಗುತ್ತದೆ. ಪ್ರತಿ ವರ್ಷವೂ ಜಾತ್ರೆ ಸಮಯದಲ್ಲಿ ಅರಣ್ಯ ಇಲಾಖೆ ಮತ್ತು ಗ್ರಾಮಸ್ಥರ ನಡುವೆ ಜಟಾಪಟಿ ಇದ್ದೇ ಇರುತ್ತದೆ. ಇವೆಲ್ಲವನ್ನೂ ತಡೆದು ಶಾಂತಯುತವಾಗಿ ಜಾತ್ರೆ ನಡೆಸಲು ಮಾಡುವ ಪ್ರಯತ್ನಗಳೆಲ್ಲವೂ ಕೊನೆಯ ಹಂತದಲ್ಲಿ ಕೈಗೂಡುವುದು ಮಾಮೂಲಿಯಾಗಿದೆ.
ವಿಶ್ವ ವನ್ಯಜೀವಿ ದಿನ: ಕಣ್ಮನಸೆಳೆವ ವನ್ಯಪ್ರಪಂಚದ 10 ಚಿತ್ರಗಳು
ಹೀಗಾಗಿ ಜಾತ್ರೆಗೆ ಇನ್ನೂ ಒಂದು ತಿಂಗಳು ಇರುವಂತೆಯೇ ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿಯಲ್ಲಿ ಅರಣ್ಯ, ಕಂದಾಯ, ಪೊಲೀಸರು ಹಾಗೂ ಗ್ರಾಮಸ್ಥರ ಸಭೆ ನಡೆಸಲಾಯಿತು. ದೇವಾಲಯವು ಹುಲಿ ಯೋಜನೆಯ ಮೂಲೆಹೊಳೆ ವಲಯದ ದಟ್ಟಾರಣ್ಯದೊಳಗಿದ್ದು, ಜುಲೈ 18ರಂದು ಜಾತ್ರೆ ನಡೆಯುತ್ತಿದೆ. ಜಾತ್ರೆಗೆ ತಾಲೂಕಿನ 18ಕ್ಕೂ ಹೆಚ್ಚಿನ ಗ್ರಾಮಗಳ ಭಕ್ತರು ತೆರಳಿ ಪೂಜೆ ಸಲ್ಲಿಸುವುದು ಹಿಂದಿನಿಂದಲೂ ನಡೆದು ಬಂದಿದೆ.
ಕಳೆದ ವರ್ಷ ಹೆಚ್ಚಿನ ವಾಹನಗಳು ಹಾಗೂ ಜನರನ್ನು ನಿಯಂತ್ರಿಸಲು ಮುಂದಾದ ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳನ್ನು ಲೆಕ್ಕಿಸದ ಭಕ್ತರು ಮದ್ದೂರು ವಲಯದ ಚೆಕ್ ಪೋಸ್ಟ್ ಗೇಟ್ ಮುರಿದು ದೇವಸ್ಥಾನಕ್ಕೆ ತೆರಳಿದ್ದರು. ಈ ಬಾರಿ ಆ ರೀತಿಯಾಗದಂತೆ, ಶಾಂತಯುತವಾಗಿ ಜಾತ್ರೆಯನ್ನು ನಡೆಸುವ ಸಂಬಂಧ ತಹಸೀಲ್ದಾರ್ ಚಂದ್ರಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಆದರೆ ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿದೆ.
ಗ್ರಾಮಸ್ಥರು ಮಾತನಾಡಿ, ಶತಮಾನಗಳಿಂದಲೂ ದೇವಸ್ಥಾನದಲ್ಲಿ ಹಿಂದಿನ ದಿನವೇ ಉಳಿದು ನಸುಕಿನಲ್ಲಿ ಪೂಜೆ ಸಲ್ಲಿಸುವ ಪರಂಪರೆ ನಡೆದುಬಂದಿದೆ. ಆದ್ದರಿಂದ ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ಈ ಬಾರಿಯೂ ಜಾತ್ರೆ ನಡೆಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಅಂಬಾಡಿ ಮಾಧವ್, ಪರಿಸರಸೂಕ್ಷ್ಮ ಪ್ರದೇಶದಲ್ಲಿರುವ ದೇವಸ್ಥಾನದಲ್ಲಿ ಪೂಜೆ ನಡೆಸಲು ಅರಣ್ಯ ಇಲಾಖೆಯು ಯಾವುದೇ ಅಡ್ಡಿ ಮಾಡುವುದಿಲ್ಲ. ಆದರೆ ಹಿಂದಿನಂತೆ 30-40 ಟ್ರ್ಯಾಕ್ಟರ್, ಆಟೋ ಹಾಗೂ ಬೈಕ್ ತೆರಳಿದರೆ ಇದ್ದಕ್ಕಿದ್ದಂತೆಯೇ ಸಾವಿರಾರು ಜನರು ಹಾಗೂ ವಾಹನಗಳನ್ನು ಕಂಡು ವನ್ಯಜೀವಿಗಳು ಗಾಬರಿಗೊಳ್ಳುತ್ತವೆ ಎಂದರು.
ಊರೊಳಗೆ ಚಿರತೆ ಬಂದರೆ...ಸಂಜಯ್ ಗುಬ್ಬಿ ಏನಂತಾರೆ?
ಮುಂಜಾನೆ ದೇವಸ್ಥಾನಕ್ಕೆ ತೆರಳಿ ಸಂಜೆ ವೇಳೆಗೆ ಹಿಂದಿರುಗಿದರೆ ಮಾತ್ರ ಸೀಮಿತ ಜನರನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗುವುದು. ಆದರೆ ಕೊಂಡ ಹಾಕುವುದು, ಚಂಡೆ, ವಾದ್ಯಗಳ ಬಳಕೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಆದರೆ, ಇದಕ್ಕೆ ಒಪ್ಪದ ಗ್ರಾಮಸ್ಥರು, ಇದು ಇಂದು ನಿನ್ನೆಯ ಜಾತ್ರೆಯಲ್ಲ. ಹಿಂದಿನಿಂದಲೂ ನಡೆಸಿಕೊಂಡು ಬಂದಿದ್ದು, ಗ್ರಾಮಸ್ಥರು ಹಾಗೂ ಹರಕೆ ಹೊತ್ತ ಭಕ್ತರು ಹೋಗಲು ಅವಕಾಶ ಕೊಡಬೇಕು. ಕಾಡು ಪ್ರಾಣಿಗಳ ರಕ್ಷಣೆ ಕುರಿತು ಮಾತನಾಡುವ ಅಧಿಕಾರಿಗಳು ಕಾಡುಹಂದಿ ಸೇರಿದಂತೆ ಯಾವುದೇ ವನ್ಯಜೀವಿಯೂ ಗ್ರಾಮಗಳತ್ತ ಬಾರದಂತೆ ಮಾಡಿ. ಆಗ ನಾವು ಕೂಡ ಕಾಡಿನೊಳಗೆ ಹೋಗುವುದನ್ನು ಕೈಬಿಡುತ್ತೇವೆ ಎಂದು ಸವಾಲ್ ಎಸೆದರು.
ಯಾವುದೇ ರೀತಿಯಲ್ಲಿ ಒಮ್ಮತ ಮೂಡದ ಕಾರಣ ಡಿಸಿ ಮತ್ತು ಎಸ್ಪಿ ಅವರ ನೇತೃತ್ವದಲ್ಲಿ 18 ಗ್ರಾಮಗಳ ಪ್ರಮುಖರ ಸಭೆಯನ್ನು ಮತ್ತೊಮ್ಮೆ ನಡೆಸಲು ತೀರ್ಮಾನಿಸಿ, ಸಭೆಯನ್ನು ಮುಕ್ತಾಯಗೊಳಿಸಲಾಗಿದೆ.