ಕಿಚ್ಚುಗುತ್ತಿ ಮಾರಮ್ಮ ದೇಗುಲದ ಎದುರು ತಮಿಳುನಾಡಿನ ಭಕ್ತೆ ಕಣ್ಣೀರಿಟ್ಟಿದ್ದೇಕೆ?
ಚಾಮರಾಜನಗರ, ಜನವರಿ 06: ಪ್ರತಿ ಮಂಗಳವಾರ, ಶುಕ್ರವಾರ ಅಮಾವಾಸ್ಯೆಯಂದು ಭಕ್ತರು ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚ್ಚುಗುತ್ತಿ ಮಾರಮ್ಮ ದೇವಾಲಯಕ್ಕೆ ಆಗಮಿಸಿ ತಮ್ಮ ನೋವನ್ನು ದೇವಿಯ ಮುಂದೆ ತೋಡಿಕೊಳ್ಳುತ್ತಿದ್ದರು. ಹರಕೆ ಮಾಡಿಕೊಂಡು ಅದು ನೆರವೇರಿದ ಬಳಿಕ ತೀರಿಸಿ ಹೋಗುತ್ತಿದ್ದರು.
ಆದರೆ ಪ್ರಸಾದಕ್ಕೆ ವಿಷ ಹಾಕಿ ಹಂತಕರು 17 ಮಂದಿಯ ಜೀವವನ್ನು ಬಲಿ ಪಡೆದು ನೂರಾರು ಮಂದಿಯನ್ನು ಆಸ್ಪತ್ರೆಗೆ ಸೇರುವಂತೆ ಮಾಡಿದ್ದರು. ಈ ಘಟನೆ ಇಡೀ ರಾಜ್ಯ ಮಾತ್ರವಲ್ಲದೆ, ದೇಶದ ಗಮನಸೆಳೆದಿತ್ತು. ಇದಾದ ನಡೆದ ಬಳಿಕ ಭಕ್ತರ ಸಂಖ್ಯೆಯೂ ಕಡಿಮೆಯಾಗಿತ್ತು.
ವಿಷಪ್ರಸಾದ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕುವಂತೆ ಪ್ರತಿಭಟನೆ
ಈ ನಡುವೆ ಶನಿವಾರ(ಜ.5) ಎಳ್ಳಮವಾಸ್ಯೆಯಿದ್ದ ಕಾರಣ ಭಕ್ತರು ಎಂದಿನಂತೆ ದೇವಾಲಯಕ್ಕೆ ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿದ್ದು, ಇಂತಹ ಭಕ್ತರ ಪೈಕಿ ತಮಿಳುನಾಡಿನಿಂದ ಆಗಮಿಸಿದ ಭಕ್ತೆಯೊಬ್ಬರು ದೇವಿಯ ದೇಗುಲದ ದೇವಿಯ ಮುಂದೆ ನಿಂತು ಕಣ್ಣೀರಿಡುತ್ತಾ ಸಾವಿರಾರು ಭಕ್ತರಿಗೆ ಆಶ್ರಯ ನೀಡುತ್ತಿದ್ದ ನಿನ್ನ ದೇವಾಲಯದ ಪ್ರಸಾದಲ್ಲಿ ವಿಷ ಬೆರಸಿದ ಆರೋಪಿಗಳಿಗೆ ಸುಮ್ಮನೆ ಬಿಡಬೇಡ ಅವರಿಗೆ ತಕ್ಕ ಶಾಸ್ತಿ ಮಾಡು ಎಂದು ಕಣ್ಣೀರಿಡುತ್ತಾ ಹಿಡಿ ಶಾಪ ಹಾಕಿದ್ದು ಕಂಡು ಬಂತು. ಅಲ್ಲದೆ ನೆರೆದವರ ಕಣ್ಣಲ್ಲಿ ನೀರು ಬರುವಂತೆ ಮಾಡಿತು.
ಮತ್ತೊಮ್ಮೆ ನೆನಪಿಸಿತು
ಅಮವಾಸ್ಯೆಯಾಗಿದ್ದರಿಂದ ಹೆಚ್ಚಿನ ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು. ಹೀಗಾಗಿ ವಿಶೇಷ ಪೂಜೆಯನ್ನು ಮಾಡಲಾಗುತ್ತಿತ್ತು, ಆದ್ರೆ ಕಳೆದ ತಿಂಗಳು ನಡೆದ ದುರಂತದ ಬಳಿಕ ದೇವಾಲಯದ ಬಳಿ ಭಕ್ತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿತ್ತಾದರೂ ಕಳೆದ ಅಮಾವಾಸ್ಯೆಯಂದು ನಡೆದ ದುರ್ಘಟನೆ ಈ ಬಾರಿಯ ಅಮಾವಾಸ್ಯೆಯಂದು ದೇವಾಲಯಕ್ಕೆ ತೆರಳಿದ ಭಕ್ತರನ್ನು ಮತ್ತೊಮ್ಮೆ ನೆನಪಿಸುವಂತೆ ಮಾಡಿತ್ತು.
ನಿಜಕ್ಕೂ ಮನಮಿಡಿಯುವಂತಿತ್ತು
ಕಳೆದೊಂದು ತಿಂಗಳಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಎಲ್ಲದಕ್ಕೂ ಕಿಚ್ಚುಗುತ್ತಿ ಮಾರಮ್ಮ ದೇವಿ ಮೂಕ ಸಾಕ್ಷಿಯಾಗಿ ನಿಂತಿದ್ದು, ಬರುವ ಭಕ್ತರೆಲ್ಲರೂ ಹಳೆಯ ಘಟನೆಗಳ ಬಗ್ಗೆಯೇ ಮಾತನಾಡುತ್ತಿದ್ದಾರೆ. ಇಂತಹ ಸಂದರ್ಭ ದೂರದ ತಮಿಳುನಾಡಿನಿಂದ ಆಗಮಿಸಿದ ಭಕ್ತೆಯೊಬ್ಬರು ಗರ್ಭಗುಡಿಯ ಹಾಕಿದ ಬಾಗಿಲ ಸಂದಿಯಿಂದಲೇ ದೇವರನ್ನು ಕಂಡು ನೊಂದು ದೇವರ ಮುಂದೆ ಕಣ್ಣೀರಿಟ್ಟಿದ್ದು ನಿಜಕ್ಕೂ ಮನಮಿಡಿಯುವಂತಿತ್ತು.
ವಿಷಪ್ರಸಾದ ಆರೋಪಿ ಅಂಬಿಕಾ ಚಾಮರಾಜನಗರದಲ್ಲಿ ಉಳಿಯೋದು ಡೌಟು?
ಕಠಿಣ ಶಿಕ್ಷೆ ಆಗಬೇಕು
ಇನ್ನು ಕೆಲವು ಭಕ್ತರು ಅಮಾಯಕರ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ಆಗಬೇಕು, ಮರಣದಂಡನೆಯಾಗಬೇಕು ಎಂದು ಮಾತನಾಡಿಕೊಳ್ಳುತ್ತಿದ್ದದ್ದು ಕಂಡು ಬಂತು. ಈ ನಡುವೆ ಮುಜರಾಯಿ ಸಚಿವ ಪರಮೇಶ್ವರ ನಾಯಕ್ ಅವರು ಸ್ಥಳಕ್ಕೆ ಭೇಟಿ ನೀಡಿ ನೊಂದವರಿಗೆ ಸಾಂತ್ವನ ಹೇಳಿದ್ದಾರೆ.
ಪ್ರಸಾದಕ್ಕೆ ವಿಷ ಬೆರೆಸಿದ ಆರೋಪಿಗಳನ್ನು ಪೊಲೀಸರು ಹಿಡಿದ ರೋಚಕ ಕತೆ
ಸರ್ಕಾರಿ ಆದೇಶ
ಈ ಸಂದರ್ಭ ಮಾತನಾಡಿದ ಪರಮೇಶ್ವರ ನಾಯಕ್ ಅವರು ಕಿಚ್ಚುಗುತ್ತಿ ಮಾರಮ್ಮ ದೇವಾಲಯ ಮುಜರಾಯಿ ವ್ಯಾಪ್ತಿಗೆ ತರಲು ಸದ್ಯದಲ್ಲೇ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.