ಶಿವರಾತ್ರಿಯ ಜಾತ್ರೆ, ಬರಿಗಾಲಲ್ಲಿ ಮಹದೇಶ್ವರ ಬೆಟ್ಟ ಏರುವ ಭಕ್ತರು
ಶಿವರಾತ್ರಿ ಎಲ್ಲಿ ವಿಶೇಷವಿಲ್ಲ ಹೇಳಿ! ಎಲ್ಲೆಡೆ ಶಿವನ ಸ್ತೋತ್ರ, ಆರಾಧನೆ. ಅದೇ ರೀತಿ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಮಹದೇಶ್ವರ ಬೆಟ್ಟದಲ್ಲೂ ಜಾತ್ರೆ ವಿಶೇಷ. ಕರ್ನಾಟಕದ ನಾನಾ ಜಿಲ್ಲೆ ಭಕ್ತರು ಬರಿಗಾಲಲ್ಲಿ ಬೆಟ್ಟವೇರುತ್ತಿದ್ದಾರೆ
ಚಾಮರಾಜನಗರ, ಫೆಬ್ರವರಿ 24: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಕೊಳ್ಳೇಗಾಲದ ಮಲೆಮಹದೇಶ್ವರ ಬೆಟ್ಟದಲ್ಲಿ ವಿಶೇಷ ಜಾತ್ರೆ ಅದ್ಧೂರಿಯಾಗಿ ಜರುಗುತ್ತದೆ. ಆದ್ದರಿಂದ ಭಕ್ತರು ಹರಕೆ ಹೊತ್ತು ಕಾಲ್ನಡಿಗೆಯಲ್ಲೇ ಸಾಗಿ ಬರುವುದು ವಿಶೇಷವಾಗಿದೆ.
ಶಿವರಾತ್ರಿ ಹಬ್ಬದ ಅಂಗವಾಗಿ ಶುಕ್ರವಾರ ಅಮಾವಾಸ್ಯೆ ಪೂಜೆ, ವಿಶೇಷ ಸೇವಾ ಕೈಂಕರ್ಯ ಮತ್ತು ಜಾತ್ರೆ ನಡೆಯಲಿದ್ದು, ಭಕ್ತರು ಗುರುವಾರದಿಂದಲೇ ಬರುತ್ತಿದ್ದಾರೆ. ಎಲ್ಲಿ ನೋಡಿದರಲ್ಲಿ ಜನಸಾಗರ ಸೃಷ್ಟಿಯಾಗಿದೆ. ಗ್ರಾಮೀಣ ಭಾಗದಿಂದ ಭಕ್ತರು ಬರಿಗಾಲಲ್ಲಿ ನಡೆದು ಬೆಟ್ಟವೇರಿ ಸನ್ನಿಧಿಯನ್ನು ತಲುಪುತ್ತಿದ್ದಾರೆ.[ಅಭಿಷೇಕ ಪ್ರಿಯನಾದ ಶಿವನನ್ನು ಹೇಗೆ ಪೂಜಿಸಿದರೆ ಶ್ರೇಷ್ಠ?]

ಕನಕಪುರ, ಚನ್ನಪಟ್ಟಣ, ತುಮಕೂರು, ಹಾಸನ, ಮಂಡ್ಯ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಕಾಲ್ನಡಿಗೆಯಲ್ಲೇ ಬೆಟ್ಟ ಹತ್ತಿ ಹರಕೆ ತೀರಿಸುತ್ತಾರೆ. ಕಾಲ್ನಡಿಗೆಯಲ್ಲಿ ಬರುವ ಭಕ್ತರ ದಣಿವಾರಿಸಲು ಮಹದೇಶ್ವರ ಬೆಟ್ಟದ ಮಾರ್ಗದಲ್ಲಿ ನೀರಿನ ಸರಬರಾಜು, ಹಸಿದವರಿಗೆ ಉಪಹಾರ ಹೀಗೆ ಹಲವಾರು ಬಗೆಯ ಸೇವೆಯನ್ನು ಮಾಡಲಾಗಿದೆ.

ಶಿವರಾತ್ರಿ ಪ್ರಯುಕ್ತ ಮಹದೇಶ್ವರನ ಸನ್ನಿಧಿಯಲ್ಲಿ ಐದು ದಿನಗಳ ವಿಶೇಷ ಜಾತ್ರೆ ನಡೆಯಲಿದ್ದು, ಇದರಲ್ಲಿ ಪಾಲ್ಗೊಂಡು ಪುನೀತರಾಗುವ ತವಕ ಭಕ್ತರದ್ದಾಗಿದೆ. ಕಾಲ್ನಡಿಗೆಯಲ್ಲಿ ಬರುವ ಭಕ್ತರು ಹರ ಹರ ಮಹದೇವ ಎಂದು ಜಯ ಘೋಷ ಹಾಕುತ್ತಾ ಬೆಟ್ಟ ಹತ್ತುತ್ತಾರೆ. ಹನೂರು ಸಮೀಪದ ಕೌದಳ್ಳಿ ಬಳಿಯ ಕೆಂಚಯ್ಯನದೊಡ್ಡಿಯಿಂದ ಕಾಲ್ನಡಿಗೆ ಆರಂಭವಾಗುತ್ತಿದೆ.[ಶಿವರಾತ್ರಿ ವಿಶೇಷ: ಕರಾವಳಿ ಎಲ್ಲಡೆ ಶಿವನ ಆರಾಧನೆ]
ಸುಮಾರು 30 ಕಿಲೋ ಮೀಟರ್ ನಷ್ಟು ದೂರದವರೆಗೂ ಭಕ್ತರು ಕಾಣಿಸುತ್ತಿದ್ದಾರೆ. ಎಳೆಮಕ್ಕಳನ್ನು ಕಂಕುಳಲ್ಲಿ ಕೂರಿಸಿಕೊಂಡು, ತಲೆಯ ಮೇಲೆ ಬ್ಯಾಗ್ ಹೊತ್ತು, ಕೈಯಲ್ಲಿ ಕೋಲು ಹಿಡಿದು ನಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.












Click it and Unblock the Notifications