ಚಾಮರಾಜನಗರ; 14 ಸರ್ಕಾರಿ ನೌಕರರಿಗೆ ಶೋಕಾಸ್ ನೋಟೀಸ್
ಚಾಮರಾಜನಗರ, ಮಾರ್ಚ್ 26; ಚಾಮರಾಜನಗರ ಜಿಲ್ಲಾಡಳಿತವು 14 ಸರ್ಕಾರಿ ನೌಕರರಿಗೆ ಶೋಕಾಸ್ ನೋಟಿಸ್ ನೀಡಿದೆ. ಲಾಕ್ ಡೌನ್ ಸಮಯದಲ್ಲಿಯೂ ಪ್ರತಿದಿನ ಮೈಸೂರಿನಿಂದ ಪ್ರಯಾಣಿಸುತ್ತಿರುವುದಕ್ಕೆ ನೋಟಿಸ್ ನೀಡಲಾಗಿದೆ. 24 ಗಂಟೆಯೊಳಗೆ ಉತ್ತರ ನೀಡುವಂತೆಯೂ ಸೂಚನೆ ಕೊಡಲಾಗಿದೆ.
ಜಿಲ್ಲಾಧಿಕಾರಿ ಎಂ. ಆರ್. ರವಿ 14 ಅಧಿಕಾರಿಗಳಿಗೆ ನೋಟಿಸ್ ನೀಡಿದ್ದು, ಉತ್ತರವನ್ನು 24 ಗಂಟೆಗಳ ಒಳಗೆ ನೀಡದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ನೋಟಿಸ್ ಪಡೆದ ಎಲ್ಲಾ ಸಿಬ್ಬಂದಿಗಳು ಮೈಸೂರಿನಲ್ಲಿ ಮನೆ ಹೊಂದಿದ್ದಾರೆ.
ಕೋವಿಡ್ ಪರಿಸ್ಥಿತಿ ಹಿನ್ನೆಲೆಯಲ್ಲಿ ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಸಿಬ್ಬಂದಿಗಳು ಆಯಾ ಪೋಸ್ಟಿಂಗ್ ಸ್ಥಳದಲ್ಲೇ ವಾಸ್ತವ್ಯ ಇರಬೇಕೆಂದು ಸರ್ಕಾರ ಸೂಚಿಸಿದೆ. ಆದರೆ, 14 ನೌಕರರು ಮೈಸೂರಿನಲ್ಲಿ ಮನೆ ಹೊಂದಿದ್ದು ಬನಹಳ್ಳಿ ಚೆಕ್ ಪೋಸ್ಟ್ ಮೂಲಕ ಚಾಮರಾಜನಗರಕ್ಕೆ ಪ್ರತಿದಿನ ಪ್ರಯಾಣಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಈಗ ಚಾಮರಾಜನಗರ ಹಸಿರು ವಲಯದಲ್ಲಿದ್ದು ಕರ್ನಾಟಕದ ಬೆರಳೆಣಿಕೆಯಷ್ಟು ಜಿಲ್ಲೆಗಳಲ್ಲಿ ಒಂದಾಗಿರುವುದರಿಂದ ನೌಕರರು ಕೇಂದ್ರ ಸ್ಥಾನ ತೊರೆದಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ.
ನಂಜನಗೂಡಿನಲ್ಲಿ ಫಾರ್ಮಾ ಕಂಪನಿಯಲ್ಲಿ ಏಕಾಏಕಿ ಉಂಟಾದ ವೈರಸ್ ಸೋಂಕು ಹೆಚ್ಚಳದ ಕಾರಣ ಪಕ್ಕದ ಮೈಸೂರು ಜಿಲ್ಲೆ ಕೆಂಪು ವಲಯದಲ್ಲಿದೆ. ಆದರೆ ಮೈಸೂರಿಗೆ ನಿತ್ಯ ತೆರಳುವ ನೌಕರರು ತಮ್ಮನ್ನು ವೈರಸ್ಗೆ ಒಡ್ಡಿಕೊಳ್ಳುವ ಅಪಾಯವನ್ನು ಮಾತ್ರವಲ್ಲದೆ ಇತರರನ್ನು ಅಪಾಯಕ್ಕೆ ದೂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಾಮರಾಜನಗರದಲ್ಲಿ ನೇಮಕಗೊಂಡಿರುವ ಅನೇಕ ಸರ್ಕಾರಿ ಅಧಿಕಾರಿಗಳು ಮೈಸೂರಿಗೆ ಪ್ರಯಾಣಿಸುವುದು ಸಾಮಾನ್ಯವಾಗಿದೆ. ಆದರೆ ಇಡೀ ದೇಶವನ್ನೇ ಬಾಧಿಸುತ್ತಿರುವ ಕೊರೋನ ಸೋಂಕನ್ನು ಹತೋಟಿಗೆ ತರಲು ಸರ್ಕಾರ ಹಲವು ಕ್ರಮ ಕೈಗೊಂಡಿದೆ. ಎಲ್ಲಾ ಅಧಿಕಾರಿಗಳು ತುರ್ತು ಸಂದರ್ಭದಲ್ಲಿ ಲಭ್ಯರಿರಬೇಕೆಂದು ನೇಮಕಾತಿ ಸ್ಥಳಗಳಲ್ಲೇ ಇರುವಂತೆ ಮತ್ತು ಮೇಲಧಿಕಾರಿಗಳ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ತೊರೆಯದಂತೆ ನಿರ್ದೇಶನವೇ ಇದೆ.












Click it and Unblock the Notifications