ಅವೈಜ್ಞಾನಿಕ ಗಣಿಗಾರಿಕೆಯಿಂದ ಕ್ವಾರಿ ಕುಸಿತ: ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ
ಚಾಮರಾಜನಗರ, ಡಿಸೆಂಬರ್ 26: ಚಾಮರಾಜನಗರದಲ್ಲಿ ಯಾವುದೇ ಭಯವಿಲ್ಲದೇ ಅಕ್ರಮ ಮತ್ತು ಅವೈಜ್ಞಾನಿಕ ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪಕ್ಕೆ ಪುಷ್ಟಿ ನೀಡುವಂತೆ ಚಾಮರಾಜನಗರ ತಾಲೂಕಿನ ಬಿಸಲವಾಡಿ ಗ್ರಾಮದಲ್ಲಿ ಗುಡ್ಡ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.
ಚಾಮರಾಜನಗರ ತಾಲೂಕಿನ ಕಾಗಲವಾಡಿಮೋಳೆ ಗ್ರಾಮದ ಸಿದ್ದರಾಜು, ಕುಮಾರ್ ಹಾಗೂ ಶಿವರಾಜ್ ಎಂಬವರು ಮೃತ ದುರ್ದೈವಿಗಳು. ಅಪಾಯಕಾರಿ ಮಟ್ಟದಲ್ಲಿ, ಅವೈಜ್ಞಾನಿಕವಾಗಿ ಗಣಿಗಾರಿಕೆ ನಡೆಸಿದ ಪರಿಣಾಮವೇ ಈ ಅವಘಡಕ್ಕೆ ಕಾರಣವಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ನಂಜುಂಡಸ್ವಾಮಿ ತಿಳಿಸಿದ್ದಾರೆ.
ವೀಕೆಂಡ್ ಪ್ರವಾಸ: ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುವ ರೆಸಾರ್ಟ್ಗಳು
ಈ ಹಿಂದೆ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಸಮೀಪವೂ ಗುಡ್ಡ ಕುಸಿದು ಮೂವರು ಬಿಹಾರಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಆ ವೇಳೆ, ಎಚ್ಚೆತ್ತಿದ್ದ ಇಲಾಖೆ ಬಳಿಕ ಸುಮ್ಮನಾದ ಪರಿಣಾಮ ಜಿಲ್ಲೆಯಲ್ಲಿ ಮತ್ತೊಂದು ಅವಘಡ ಸಂಭವಿಸಿದೆ.
ಗಣಿ ಇಲಾಖೆಯ ಪ್ರಕಾರ ಕ್ವಾರಿ ನಡೆಸಬೇಕಾದರೆ ಹಂತ-ಹಂತವಾಗಿ ಸ್ಫೋಟ ಮಾಡಬೇಕು, ಜೊತೆಗೆ ಸ್ಫೋಟಕಗಳನ್ನು ಬಳಸಿದ್ದೇ ಆದಲ್ಲಿ ಇಲಾಖೆ ಅನುಮತಿ ಪಡೆದು ನುರಿತ ತಜ್ಞರಿಂದ ಸ್ಫೋಟಿಸಬೇಕೆನ್ನುವುದಾಗಿದೆ. ಆದರೆ, ಹಣ ಹೂಡಿಕೆ ಮಾಡಿ ಕಡಿಮೆ ಅವಧಿಯಲ್ಲೇ ಲಾಭ ಕಾಣಬೇಕೆಂಬ ಅತಿ ಆಸೆಯಿಂದ ಒಂದೇ ಕಡೆಯಲ್ಲಿ ಆಳವಾಗಿ ಗಣಿಗಾರಿಕೆ ಮಾಡಿ ನಿರ್ಲಕ್ಷ್ಯ ಮೆರೆದ ಕಾರಣ ಈ ದುರ್ಘಟನೆಗೆ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ನಂಜುಂಡಸ್ವಾಮಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, "ಅವೈಜ್ಞಾನಿಕ, ಅಸುರಕ್ಷಿತೆಯ ಗಣಿಗಾರಿಕೆಯಿಂದ ಜೀವಹಾನಿಯಾಗಿದ್ದು, ಇದರ ಸಂಪೂರ್ಣ ಜವಾಬ್ದಾರರು ಗುತ್ತಿಗೆದಾರರೇ ಆಗಿದ್ದಾರೆ. ಸಾಕಷ್ಟು ಬಾರಿ ನೋಟಿಸ್ ಕೊಟ್ಟು, ಸುರಕ್ಷಿತ ಗಣಿಗಾರಿಕೆ ನಡೆಸುವುದಾಗಿ ಛಾಪ ಕಾಗದದಲ್ಲಿ ಬರೆಸಿಕೊಂಡಿದ್ದರೂ ಅವೈಜ್ಞಾನಿಕ ಕಾರ್ಯ ಎಸಗಿದ್ದಾರೆಂದು ಅಸಹಾಯಕತೆ ಪ್ರದರ್ಶಿಸಿದ್ದಾರೆ.
ಇನ್ನು ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಅವರು ತಿಳಿಸಿದ್ದಾರೆ. ಆದರೆ, ಸಾಕಷ್ಟು ಬಾರಿ ನೋಟಿಸ್, ಸಭೆಗಳನ್ನು ನಡೆಸಿದರೂ ಯಾವುದಕ್ಕೂ ಗಣಿ ಮಾಲೀಕರು ಕ್ಯಾರೆ ಎನ್ನುತ್ತಿಲ್ಲವೇ ಎಂಬ ಪ್ರಶ್ನೆ ಮೂಡಿದೆ.
ಗಣಿ ದುರಂತದ ಸಂಬಂಧ ಚಾಮರಾಜನಗರ ಮಾಜಿ ಶಾಸಕ ಹಾಗೂ ಚಳವಳಿಗಾರ ವಾಟಾಳ್ ನಾಗರಾಜ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಕೂಡಲೇ ಗಣಿ ಮಾಲೀಕರಾದ ರೇಣುಕಾದೇವಿ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ಕರಿಕಲ್ಲು ಗಣಿಗಾರಿಕೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸುತ್ತಲೇ ಬಂದಿದ್ದೇನೆ ಆದರೆ ಪೊಲೀಸ್ ಇಲಾಖೆ, ಗಣಿ ಇಲಾಖೆ ನಿರ್ಲಕ್ಷ್ಯ ವಹಿಸಿದ್ದಾರೆ. ಕಳೆದ 15 ದಿನಗಳ ಹಿಂದೆ ಬಿಸಲವಾಡಿಯಲ್ಲಿ ಗಣಿಗಾರಿಕೆ ನಿಲ್ಲಿಸುವಂತೆ ಪ್ರತಿಭಟನೆ ಮಾಡಿದ್ದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಒಟ್ಟಿನಲ್ಲಿ ಒಂದೆಡೆ ಗಣಿ ಲೂಟಿ ಮತ್ತೊಂದೆಡೆ ಮಾತು ಕೇಳದ ಗಣಿ ಮಾಲೀಕರು, ನಿರ್ಲಕ್ಷ ವಹಿಸಿರುವ ಅಧಿಕಾರಿಗಳ ನಡುವೆ ಸಾಮಾನ್ಯರು ತತ್ತರಿಸುತ್ತಿದ್ದಾರೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.