ಹನೂರು: ನಮ್ಮ ಕಾಣಿಕೆ ದುಡ್ಡಲ್ಲಾದ್ರೂ ಒಳ್ಳೆ ಬಸ್ ಬಿಡಿ, ಮಾದಪ್ಪನ ಭಕ್ತರಿಂದ ಪ್ರಾಧಿಕಾರಕ್ಕೆ ತರಾಟೆ
ಚಾಮರಾಜನಗರ, ಜೂನ್, 25: ಕರ್ನಾಟಕ ರಾಜ್ಯದ ಪ್ರಮುಖ ದೇವಾಲಯ, ರಾಜ್ಯದ ಎರಡನೇ ಶ್ರೀಮಂತ ದೇಗುಲ, ಪ್ರತಿ ವಾರ ಲಕ್ಷಾಂತರ ಭಕ್ತರು ಭೇಟಿ ಕೊಡಲಿರುವ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ತೋರುತ್ತಿದೆ ಬಸ್ಸುಗಳು.
ದೇವಾಲಯ ಅಭಿವೃದ್ಧಿ, ಭಕ್ತರಿಗೆ ಮೂಲಸೌಕರ್ಯ ಕಲ್ಪಿಸಲು ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದೆ. ಆದರೂ ಅಭಿವೃದ್ಧಿ, ಮೂಲ ಸೌಕರ್ಯ ಆಗಿಲ್ಲದಿರುವುದಕ್ಕೆ ಡಕೋಟಾ ಬಸ್ಸುಗಳೇ ಸಾಕ್ಷಿಯಾಗಿದೆ. ಮಲೆಮಹದೇಶ್ಚರ ಬೆಟ್ಟಕ್ಕೆ ಬರುವ ಭಕ್ತರಿಗಾಗಿಯೇ ಬೆಂಗಳೂರು, ಕನಕಪುರ, ಗುಂಡ್ಲುಪೇಟೆ, ಚಾಮರಾಜನಗರ ಸೇರಿದಂತೆ ಪ್ರಾಧಿಕಾರದ ವತಿಯಿಂದ ಈ ಹಿಂದೆ 12 ಬಸ್ಗಳು ಸಂಚಾರ ನಡೆಸಿದ್ದವು.

ಆದರೆ ಇದೀಗ ಕೇವಲ 4 ಬಸ್ಗಳು ಮಾತ್ರ ಈ ಮಾರ್ಗವಾಗಿ ಸಂಚರಿಸುತ್ತಿದೆ. ಆದರೂ ಕೂಡ ಕೆಎಸ್ಆರ್ಸಿ ಬಸ್ಗಳ ನಿರ್ವಹಣೆ ಕೊರತೆಯಿಂದ ಸೊರಗಿ ಪ್ರಾಣಭೀತಿಯಲ್ಲಿ ಭಕ್ತರು ಸಂಚರಿಸುವ ಪರಿಸ್ಥಿತಿ ಎದುರಾಗಿದೆ. ಬೆಂಗಳೂರಿಗೆ ಮೂರು, ಗುಂಡ್ಲುಪೇಟೆಗೆ 1 ಬಸ್ ಸಂಚಾರ ನಡೆಸುತ್ತಿವೆ.
ಆದರೆ ಬಸ್ಗಳ ಟೈರ್ಗಳು ಚಪಾತಿಯಂತಾದರೂ ಪ್ರಾಧಿಕಾರ ಗಮನಹರಿಸಿಲ್ಲ. ಮತ್ತೊಂದೆಡೆ ಬಸ್ಗಳಲ್ಲಿ ಸ್ಟೆಪ್ಸ್ಗಳಿಲ್ಲ, ಜೊತೆಗೆ ಲಗೇಜ್ ಬಾಕ್ಸ್ ಕೂಡ ತೂತಾಗಿದೆ. ಇದರಿಂದ ಭಕ್ತರು ಕೊಡುವ ತರಕಾರಿ ಕ್ಷೇತ್ರದ ಬದಲು ರಸ್ತೆ ಪಾಲಾಗುತ್ತಿರುವ ಆರೋಪ ಕೇಳಿಬಂದಿದೆ.
ಜನರ ಪ್ರಾಣದ ಜೊತೆ ಪ್ರಧಿಕಾರ ಚೆಲ್ಲಾಟ
ಅಮಾವಾಸ್ಯೆ, ವಾರಾಂತ್ಯ ಸೇರಿದಂತೆ ವಿಶೇಷ ದಿನಗಳಲ್ಲಿ ಸೇವೆಗಳಿಂದಲೇ ಪ್ರಾಧಿಕಾರಕ್ಕೆ ಲಕ್ಷಾಂತರ ಆದಾಯ ಬರುತ್ತಿದೆ. ಪ್ರತಿ ತಿಂಗಳು ನಡೆಯುವ ಹುಂಡಿ ಎಣಿಕೆಯಲ್ಲಿ ಸರಾಸರಿ ಒಂದೂವರೆ ಕೋಟಿ ರೂಪಾಯಿಗೂ ಹೆಚ್ಚಿನ ಆದಾಯ ಶ್ರೀಕ್ಷೇತ್ರಕ್ಕೆ ಬರುತ್ತಿದೆ. ಆದರೂ ಭಕ್ತರಿಗೆ ಕನಿಷ್ಠ ಬಸ್ ಸೌಲಭ್ಯ ಕಲ್ಪಿಸಲು ಪ್ರಾಧಿಕಾರ ನಿರ್ಲಕ್ಷ್ಯ ವಹಿಸಿದೆ. ಇರುವ ಬಸ್ ಅನ್ನೂ ನಿರ್ವಹಣೆ ಮಾಡದೇ ಜನರ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿದೆ.
ಮಲೆಮಹದೇಶ್ವರ ಬೆಟ್ಟವನ್ನು ಘಟ್ಟಗಳನ್ನು ಏರಿ ಹೋಗಬೇಕಿದೆ. ಅಲ್ಲದೆ ಕಡಿದಾದ ದಾರಿಯನ್ನೂ ಕೂಡ ಹೊಂದಿದೆ. ವಾಹನಗಳು ಎಷ್ಟೇ ಕಂಡಿಷನ್ನಲ್ಲಿದ್ದರೂ ಮಲೆಗಳನ್ನು ಏರುವುದು ತುಸು ಕಷ್ಟವೇ. ಈ ರೀತಿಯ ಮಾರ್ಗದಲ್ಲಿ ಸವೆದು ಹೋಗಿರುವ ಟೈರ್, ಸ್ಟೆಪ್ನಿಗಳಿಲ್ಲದ ಬಸ್, ಮುರಿದು ಬೀಳುವ ಹಂತದಲ್ಲಿರುವ ಡಕೋಟಾ ಬಸ್ಗಳಲ್ಲಿ ಮಾದಪ್ಪನ ಭಕ್ತರು ಪ್ರಯಾಣ ಮಾಡುತ್ತಿದ್ದಾರೆ. ಇದು ದೀಪದ ಕೆಳಗೆ ಕತ್ತಲು ಎಂಬಂತೆ ಕೋಟಿ ಕೋಟಿ ಆದಾಯ ಬಂದರೂ ಭಕ್ತರಿಗೆ ಸೌಕರ್ಯವೇ ಸೊನ್ನೆ ಎಂಬಂತಾಗಿದೆ.
ಸಾವಿರಾರು ರೂಪಾಯಿಯ ತರಕಾರಿ ಕೊಡುವ ಭಕ್ತರು
ಮಂಡ್ಯ, ರಾಮನಗರ, ಬೆಂಗಳೂರು ಭಾಗದಲ್ಲಿ ಮಲೆಮಹದೇಶ್ವನ ಭಕ್ತರು ಹೆಚ್ಚಿದ್ದು, ತಾವು ಬೆಳೆದ ತರಕಾರಿ, ಧಾನ್ಯಗಳನ್ನು ಶ್ರೀಕ್ಷೇತ್ರದ ಅನ್ನದಾಸೋಹಕ್ಕೆ ಈ ಬಸ್ ಮೂಲಕವೇ ಕಳುಹಿಸುತ್ತಾರೆ. ಆದರೆ, ಲಗೇಜ್ ಬಾಕ್ಸ್ಗಳು ಹಾಳಾಗಿರುವುದರಿಂದ ಭಕ್ತರು ಕೊಡುವ ತರಕಾರಿ, ಧಾನ್ಯ ರಸ್ತೆಯಲ್ಲೇ ಸೋರಿ ಹೋಗಲಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಎಲ್ಲವನ್ನೂ ಟಪಾಲಿಗೆ ಹಾಕಲೂ ಸಾಧ್ಯವಾಗದಿರುವುದರಿಂದ ಭಕ್ತರು ಕೊಡುವ ಕಾಣಿಕೆ ಮಾದಪ್ಪನ ಬೆಟ್ಟವನ್ನೇ ತಲುಪುತ್ತಿಲ್ಲ ಎನ್ನಲಾಗಿದೆ.
ಶಕ್ತಿ ಯೋಜನೆ ಬಂದ ನಂತರವೂ ಪ್ರಾಧಿಕಾರದ ಬಸ್ಗಳಿಗೆ ಪ್ರಯಾಣಿಕರು ಹೆಚ್ಚಾಗಿದ್ದಾರೆ. ಬಸ್ಗಳು ತುಂಬಿ ತುಳುಕಿದರೂ ಪ್ರಾಧಿಕಾರ ಮಾತ್ರ ಜಾಣ ನಿದ್ರೆ ಮಾಡುತ್ತಿದ್ದು, ಈ ಮೂಲಕ ಭಕ್ತರ ಪ್ರಾಣದ ಜೊತೆ ನಿರ್ಲಕ್ಷ್ಯ ತೋರುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿವೆ.
ಭಕ್ತರ ದುಡ್ಡಲ್ಲಿ ಉತ್ತಮ ಬಸ್ ಕೊಡಿ
ಭಕ್ತರು ಕೋಟ್ಯಂತರ ರೂಪಾಯಿ ಕಾಣಿಕೆ ಕೊಡುತ್ತಾರೆ. ಆ ಹಣದಲ್ಲೇ ಉತ್ತಮ ಬಸ್ ಕೊಡಿ, ಇಲ್ಲವೇ ಇರುವ ಬಸ್ ಅನ್ನು ಸರಿಯಾಗಿ ನಿರ್ವಹಣೆ ಮಾಡಿ. ಬಸ್ನ ಟೈರ್ ನೋಡಿದರೇ ಭಯವಾಗಲಿದ್ದು, ಮಾದಪ್ಪನ ಮೇಲೆ ಭಾರ ಹಾಕಿ ಬಸ್ ಹತ್ತುತ್ತಿದ್ದೇವೆ. ಈ ಹಿಂದೆ ಆಗಾಗ್ಗೆ ಕಾಣಿಸುತ್ತಿದ್ದ ಬಸ್ಗಳ ಸಂಖ್ಯೆ 4ಕ್ಕೆ ಬಂದು ನಿಂತಿದೆ ಎಂದು ಮಾದಪ್ಪನ ಭಕ್ತ, ಚಾಮರಾಜನಗರ ನಿವಾಸಿ ಜಯಕುಮಾರ್ ಆಕ್ರೋಶ ಹೊರಹಾಕಿದ್ದಾರೆ.
ಪ್ರಾಧಿಕಾರದ ಅಧ್ಯಕ್ಷರೂ ಮುಖ್ಯಮಂತ್ರಿ ಆಗಿದ್ದು, ಇನ್ನಾದರೂ ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಗಮನಹರಿಸಿ ಉತ್ತಮ ಬಸ್ ವ್ಯವಸ್ಥೆ ಕಲ್ಪಿಸಬೇಕಿದೆ. ಅನಾಹುತ ಆಗುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ ಮಾದಪ್ಪನ ಭಕ್ತ ಜಯಕುಮಾರ್ ಆಗ್ರಹಿಸಿದ್ದಾರೆ.












Click it and Unblock the Notifications