'ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ, ಜೆಡಿಎಸ್ ಸೇರುವ ಮಾತೇ ಇಲ್ಲ'
ಚಾಮರಾಜನಗರ, ಸೆಪ್ಟೆಂಬರ್.14: ರಾಜ್ಯ ರಾಜಕೀಯ ಮೇಲಿಂದ ಮೇಲೆ ಸಂಚಲವನ್ನುಂಟು ಮಾಡುತ್ತಿದ್ದು, ಚಿಕ್ಕ ವಿಚಾರವೂ ದೊಡ್ಡ ಸುದ್ದಿಯಾಗಿ ಬಿಂಬಿತವಾಗುತ್ತಿದೆ.
ಬೆಳಗಾವಿಯ ಜಾರಕಿಹೊಳಿ ಸಹೋದರರು ಮೈತ್ರಿ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದು ಅವರನ್ನು ಬಿಜೆಪಿ ಕಡೆಗೆ ಸೆಳೆಯುವ ಯತ್ನಗಳು ನಡೆಯುತ್ತಿವೆ ಎಂಬ ಸುದ್ದಿಗಳು ಕೇಳಿ ಬರುತ್ತಿದ್ದು, ಒಂದಲ್ಲ ಒಂದು ಬೆಳವಣಿಗೆಗಳು ನಡೆಯುತ್ತಲೇ ಇದ್ದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಿದ್ದೆಗೆಡಿಸುವಂತೆ ಮಾಡಿದೆ.
ಜಾರಕಿಹೊಳಿ ಸಹೋದರರು ಬಿಜೆಪಿ ಸೇರಿದರೆ ಆಗುವ 5 ಲಾಭಗಳು!
ರಾಜಕೀಯ ಮೂಲಗಳ ಪ್ರಕಾರ ಅತೃಪ್ತರು ಇರುವುದು ಕಾಂಗ್ರೆಸ್ ನಲ್ಲಿ ಮಾತ್ರ. ಹೀಗಾಗಿ ಬಿಜೆಪಿ ಅವರನ್ನಷ್ಟೆ ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿದೆ ಎನ್ನಲಾಗುತ್ತಿದೆ. ಆದರೆ ಈ ನಡುವೆ ಜೆಡಿಎಸ್ ನ ಸಾ.ರಾ.ಮಹೇಶ್ ಮತ್ತು ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಮುಂದಾದರೆ ಅದಕ್ಕೆ ತಕ್ಕ ಉತ್ತರ ನೀಡುವುದಾಗಿ ಹೇಳುವ ಮೂಲಕ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದರು.
ಅಷ್ಟಕ್ಕೆ ಸುಮ್ಮನಾಗದೆ ಬಿಜೆಪಿಯ ಕೆಲವು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಬಾಂಬ್ ಸಿಡಿಸಿದ್ದರು. ಯಾವಾಗ ಈ ಮಾತು ಜೆಡಿಎಸ್ ಕಡೆಯಿಂದ ತೇಲಿ ಬಂತೋ? ಬಿಜೆಪಿಯಲ್ಲಿ ಗೊಂದಲ ಸೃಷ್ಠಿಯಾಗಿತ್ತು. ಇಷ್ಟಕ್ಕೂ ಜೆಡಿಎಸ್ ನಾಯಕರೊಂದಿಗೆ ಸಂಪರ್ಕದಲ್ಲಿರುವ ಬಿಜೆಪಿ ಆ ಶಾಸಕರು ಯಾರಿರಬಹುದು ಎಂಬ ಅನುಮಾನಗಳು ಸದ್ದಿಲ್ಲದೆ ಎದ್ದು ಕುಳಿತಿದ್ದವು.
ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನ?, ಕಾಂಗ್ರೆಸ್ ಹೊಸ ತಂತ್ರ
ತಮಗೆ ಅನುಮಾನ ಬಂದ ಶಾಸಕರತ್ತ ಬೊಟ್ಟು ಮಾಡಿ ತೋರಿಸತೊಡಗಿದ್ದರು. ಇದಕ್ಕೆ ಬಲಿಯಾಗಿದ್ದು ಗುಂಡ್ಲುಪೇಟೆ ಬಿಜೆಪಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್. ಅದಾಗಲೇ ಜೆಡಿಎಸ್ ಮುಖಂಡರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಬಿಜೆಪಿ ಶಾಸಕ ಸಿ.ಎಸ್. ನಿರಂಜನ್ಕುಮಾರ್ರವರಿಗೆ ಗಾಳ ಹಾಕಿ ಈಗಾಗಲೇ ಜೆ.ಡಿ.ಎಸ್. ಮುಖಂಡರು ಸಂಪರ್ಕಿಸಿದ್ದಾರೆ ಎನ್ನುವ ವದಂತಿಯನ್ನು ಹರಿಬಿಟ್ಟಿದ್ದರು.
ಇದು ವದಂತಿಯೂ ನೈಜವೋ ಗೊತ್ತಿಲ್ಲದ ಜನ ತಮಗೆ ತೋಚಿದಂತೆ ಮಾತನಾಡತೊಡಗಿದ್ದರು. ಇದೀಗ ಸ್ವತಃ ಬಿಜೆಪಿ ಶಾಸಕ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ಹರಡಿರುವ ಸುದ್ದಿಯನ್ನು ತಳ್ಳಿಹಾಕಿದ್ದು, ತಾನು ಎಂದೆಂದಿಗೂ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನೇ ಎಂಬ ಸ್ಪಷ್ಟನೆ ನೀಡಿದ್ದಾರೆ.
ನನ್ನ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರ ಪಟ್ಟಿಯೇ ಬೇರೆ: ಎಚ್ಡಿಕೆ ಹೊಸ ಬಾಂಬ್
ತಾನೆಂದೂ ಬಿಜೆಪಿಯನ್ನು ತೊರೆಯುವುದಿಲ್ಲ. ನನಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರೇ ನಾಯಕರು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ್ಷಾ ಮಾರ್ಗದರ್ಶನದಲ್ಲಿ ಪಕ್ಷದಲ್ಲಿರುತ್ತೇನೆ. ಜೆಡಿಎಸ್ ಗೆ ಸೇರ್ಪಡೆಯಾಗುವ ಮಾತೇ ಇಲ್ಲ. ಈಗ ಹರಡಿರುವ ವದಂತಿಗೆ ಕಾರ್ಯಕರ್ತರು ಕಿವಿಗೊಡದಂತೆ ಹೇಳಿದ್ದಾರೆ.