ಚಾಮರಾಜನಗರ: ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ತೀರ್ಪು ನೀಡಿದ ಕೋರ್ಟ್
ಚಾಮರಾಜನಗರ, ನವೆಂಬರ್ 27: ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿ ಚಾಮರಾಜನಗರ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.
ಚಾಮರಾಜನಗರ ಜಿಲ್ಲಾ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ಸದಾಶಿವ.ಎಸ್.ಸುಲ್ತಾನ್ ಪುರಿ ಅವರು ಜೀವಾವಧಿ ಶಿಕ್ಷೆ ತೀರ್ಪು ನೀಡಿದ್ದಾರೆ.
ಚಾಮರಾಜನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಕೊಲೆ ಆರೋಪಿಯಾಗಿದ್ದ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಆನಂದಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ರತ್ನಮ್ಮಳನ್ನು ಕೊಲೆ ಮಾಡಿದ ಆರೋಪದ ಮೇಲೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ. 10 ಸಾವಿರ ರೂಪಾಯಿ ಸಾಲದ ವಿಚಾರಕ್ಕೆ ಮಾತು ಬೆಳೆದು ಕೊಲೆ ಮಾಡುವ ಹಂತಕ್ಕೆ ಹೋಗಿತ್ತು.
ರತ್ನಮ್ಮಳನ್ನು ಮಚ್ಚಿನಿಂದ ಕೊಚ್ಚಿ ಆರೋಪಿ ಆನಂದ ಕೊಲೆ ಮಾಡಿದ್ದು, ಕೊಲೆ ಮಾಡಿರುವುದು ರುಜುವಾತಾಗಿರುವುದರಿಂದ ಆರೋಪಿಗೆ ಜೀವಿತಾವಧಿ ಶಿಕ್ಷೆ ನೀಡಲಾಗಿದೆ.
ಆರೋಪಿ ಆನಂದಗೆ ಜೀವಾವಧಿ ಶಿಕ್ಷೆ ಮತ್ತು 6,500 ರುಪಾಯಿ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಲೋಲಾಕ್ಷಿ.ಟಿ.ಎಚ್ ಅವರು ವಾದ ಮಂಡಿಸಿದ್ದರು.
ಬೈಕ್ ಕಳ್ಳನ ಬಂಧನ
ನಂಜನಗೂಡು ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಬೈಕ್ ಕಳ್ಳನನ್ನು ಬಂಧಿಸಲಾಗಿದೆ. ಕಳ್ಳನಿಂದ 4.40 ಲಕ್ಷ ಮೌಲ್ಯದ 11 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಬ್ದುಲ್ ಖಲೀಲ್ ಪಾಷಾ(30) ಬಂಧಿತ ಆರೋಪಿಯಾಗಿದ್ದು, ಈತನು ಚಾಮರಾಜನಗರದ ನಿವಾಸಿಯಗಿದ್ದಾನೆ.
ನವೆಂಬರ್ 21 ರಂದು ಎಸ್.ಐ ಚಂದ್ರು ಅವರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಆರೋಪಿ ಸಿಕ್ಕಿಬಿದ್ದಿದ್ದನು. ಕಳವು ಮಾಡಿದ್ದ ವಾಹನ ಸಮೇತ ಸಿಕ್ಕಿಬಿದ್ದು, ವಿಚಾರಣೆಗೆ ಒಳಪಡಿಸಿದಾಗ 11 ಬೈಕ್ ಗಳ ಕಳವು ಪ್ರಕರಣ ಬೆಳಕಿಗೆ ಬಂದಿದೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications