ಉಪಚುನಾವಣೆಯಲ್ಲಿ 'ಲಕ್ಷ್ಮಿ' ಕಟಾಕ್ಷ: ವಿವಾದದಲ್ಲಿ ಕಾಂಗ್ರೆಸ್ ನಾಯಕಿ!
ಗುಂಡ್ಲುಪೇಟೆ ಉಪಚುನಾವಣಾ ಪ್ರಚಾರದ ವೇಳೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಹಣ ಹಂಚಿಕೆ ಮಾಡಿದ ವಿಡಿಯೋ ಈಗ ಎಲ್ಲೆಡೆ ಸುದ್ದಿಯಾಗುತ್ತಿದೆ.
ಚಾಮರಾಜನಗರ, ಏಪ್ರಿಲ್ 6: ಗುಂಡ್ಲುಪೇಟೆ ಉಪಚುನಾವಣಾ ಪ್ರಚಾರದ ವೇಳೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಹಣ ಹಂಚಿಕೆ ಮಾಡಿದ ವಿಡಿಯೋ ಈಗ ಎಲ್ಲೆಡೆ ಸುದ್ದಿಯಾಗುತ್ತಿದೆ.
ಉಪಚುನಾವಣೆ ಪ್ರಚಾರದ ಸಮಯದಲ್ಲಿ ಚಾಮರಾಜನಗರ ಜಿಲ್ಲೆ, ಕಬ್ಬಳ್ಳಿ ಜಿಲ್ಲಾ ಪಂಚಾಯತ್ ಕೇಂದ್ರದ ಹೆಣ್ಣೂರು ಕೇರಿ ಗ್ರಾಮದಲ್ಲಿ ಕಾಂಗ್ರೆಸ್ ನ ಪ್ರಭಾವಿ ನಾಯಕಿಯರಲ್ಲೊಬ್ಬರಾದ ಲಕ್ಷ್ಮಿ ಹೆಬ್ಬಾಳ್ಕರ್ ಹಣ ಹಂಚುತ್ತಿರುವ ವಿಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿದೆ.[ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಪರಿಚಯ]
ಏಪ್ರಿಲ್ 9 ರಂದು ಇಲ್ಲಿ ನಡೆಯಲಿರುವ ಉಪಚುನಾವಣೆಗೆ ಇನ್ನು ಮೂರೇ ದಿನ ಬಾಕಿ ಇರುವಾಗ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಹೀಗೆ ಹಣ ಹಂಚುತ್ತಿರುವ ವಿಡಿಯೋ ಮಾಧ್ಯಮಗಳಿಗೆ ಸಿಕ್ಕಿರುವುದು ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ.
ಲಕ್ಷ್ಮಿ ಅವರ ಕೈಯಲ್ಲಿ ಎರಡು ಸಾವಿರ ನೋಟಿನ ಒಂದು ಕಂತೆಯೇ ಇತ್ತೆಂದು ವಾಹಿನಿಯೊಂದು ವರದಿ ಮಾಡಿದ್ದು, ಈ ಪ್ರಕರಣದ ಸತ್ಯಾಸತ್ಯತೆಯ ಬಗ್ಗೆ ಚುನಾವಣಾ ಆಯೋಗ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.