ಬಂಡೀಪುರ ಕಾಡಂಚಿನ ಜನರ ನಿದ್ದೆಗೆಡಿಸಿದ ಹುಲಿ ಸೆರೆಗೆ ಸಮಿತಿ ರಚನೆ
ಚಾಮರಾಜನಗರ, ಮೇ 05: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದ ಕಾಡಂಚಿನ ಗ್ರಾಮದಲ್ಲಿ ಜಾನುವಾರು ಹಾಗೂ ಮೇಕೆಗಳನ್ನು ಬಲಿ ತೆಗೆದುಕೊಳ್ಳುತ್ತಾ ರೈತರಿಗೆ ಭಯ ಹುಟ್ಟಿಸಿರುವ ಹುಲಿಯನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ವಿಫಲವಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
Recommended Video
ಒಂದೆಡೆ ಸಾಕಾನೆಗಳ ಮೂಲಕ ಹುಲಿ ಸಂಚರಿಸಿರಬಹುದಾದ ಗ್ರಾಮಗಳ ಸುತ್ತಮುತ್ತ ಕಾರ್ಯಾಚರಣೆಯನ್ನು ನಡೆಸುತ್ತಿದ್ದರೆ, ಮತ್ತೊಂದೆಡೆ ಬೋನಿಡುವುದರೊಂದಿಗೆ ಹುಲಿಯನ್ನು ಸೆರೆ ಹಿಡಿಯುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಹುಲಿ ಇದುವರೆಗೂ ಯಾರ ಕಣ್ಣಿಗೂ ಬೀಳದ ಕಾರಣ ಮತ್ತು ಯಾವಾಗ ಬೇಕಾದರೂ ದಾಳಿ ಮಾಡುವ ಭಯವಿರುವುದರಿಂದ ಬಂಡೀಪುರ ಹುಲಿ ಯೋಜನೆಯ ಕುಂದಕೆರೆ ವಲಯದ ಕಾಡಂಚಿನ ಕಡಬೂರು, ಚಿರಕನಹಳ್ಳಿ, ಕುಂದಕೆರೆ ಹಾಗೂ ಉಪಕಾರ ಗ್ರಾಮಗಳಲ್ಲಿನ ಜನ ಕಳೆದ ಮೂರು ವಾರಗಳಿಂದ ಭಯದಲ್ಲಿಯೇ ಕಾಲ ಕಳೆಯುವಂತಾಗಿದೆ.
ಬಂಡೀಪುರ ಕಾಡಂಚಿನಲ್ಲಿ ಹುಲಿ ಪತ್ತೆಗೆ ಮುಂದುವರೆದ ಕೂಂಬಿಂಗ್
ಆರು ಸದಸ್ಯರ ಸಮಿತಿ ರಚನೆ
ಇದೆಲ್ಲವನ್ನು ಮನಗಂಡು ಹುಲಿಯನ್ನು ಸೆರೆ ಹಿಡಿಯಲು ಅನುಕೂಲವಾಗುವಂತೆ ಎನ್.ಟಿ.ಸಿ.ಎ. ಮಾರ್ಗಸೂಚಿಯಂತೆ ಆರು ಸದಸ್ಯರ ಸಮಿತಿ ರಚನೆ ಮಾಡಲಾಗಿದೆ. ಸಮಿತಿಯಲ್ಲಿ ಮೈಸೂರು ಸಿ.ಸಿ.ಎಫ್. ಹೀರೆಲಾಲ್ ರಘುರಾಮ್, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವೈದ್ಯಾಧಿಕಾರಿ ಡಾ.ನಾಗರಾಜು, ಮಂಗಲದ ಮಾರಿಕಾಂಬಾ ಚಾರಿಟೆಬಲ್ ಟ್ರಸ್ಟ್ನ ಸುನೀತಾ ವಡ್ಡಗೆರೆ ಗ್ರಾಮ ಪಂಚಾಯಿತಿ ಸದಸ್ಯರಾದ ಚೆನ್ನ ಬಸಪ್ಪ ಹಾಗೂ ಬಂಡೀಪುರ ಸಿ.ಎಫ್. ಬಾಲಚಂದ್ರ. ಟಿ ಸೇರಿದಂತೆ ಆರು ಮಂದಿ ಇದ್ದಾರೆ.
ಬೇಸ್ ಕ್ಯಾಂಪ್ ಆರಂಭಿಸಿರುವ ಇಲಾಖೆ
ಕಾರ್ಯಾಚರಣೆ ಆರಂಭಿಸಿದ ನಂತರ ಹುಲಿ ಯಾವುದೇ ಪ್ರಾಣಿಗಳನ್ನು ಬೇಟೆಯಾಡದಿದ್ದರೂ ಅದಕ್ಕೂ ಮೊದಲು ಸುಮಾರು ಆರು ಜಾನುವಾರು ಮತ್ತು ಎರಡು ಮೇಕೆಗಳನ್ನು ಬಲಿ ತೆಗೆದುಕೊಂಡಿರುವುದು ಈ ವ್ಯಾಪ್ತಿಯ ಜನರ ನಿದ್ದೆಗೆಡಿಸಿದೆ. ಹುಲಿ ಸೆರೆಗಾಗಿ ಕಾಡಂಚಿನ ಗ್ರಾಮವಾದ ಚಿರಕನಹಳ್ಳಿ ಸಮೀಪ ಬೇಸ್ ಕ್ಯಾಂಪ್ ಪ್ರಾರಂಭಿಸಿದೆ.
50 ಸಿಬ್ಬಂದಿಯ ನಿಯೋಜನೆ ಮಾಡಿ ಗಸ್ತು
ಬೇಸ್ ಕ್ಯಾಂಪ್ ನಲ್ಲಿ ಅರಣ್ಯ ಇಲಾಖೆ ಸುಮಾರು 50 ಸಿಬ್ಬಂದಿಯ ನಿಯೋಜನೆ ಮಾಡಿ ಗಸ್ತು ನಡೆಸಿದೆ. ಅರಣ್ಯ ಇಲಾಖೆ ನಾಲ್ಕು ಸಾಕಾನೆಗಳ ನೆರವಿನಿಂದ ಹುಲಿಯನ್ನು ಕಾಡಿಗೆ ಅಟ್ಟುವ ಕಾರ್ಯ ಮಾಡಿತ್ತು. ಈ ನಡುವೆ ಗಸ್ತು ಸಿಬ್ಬಂದಿಗೆ ರಾಮಯ್ಯನಕಟ್ಟೆ ಸಮೀಪ ಹುಲಿಯ ಹೆಜ್ಜೆಯ ಗುರುತುಗಳು ಕಂಡು ಬರುವುದರೊಂದಿಗೆ ಆತಂಕ ಇನ್ನಷ್ಟು ಹೆಚ್ಚಾಗುವಂತೆ ಮಾಡಿತ್ತು.
ಇನ್ನಾದರೂ ಹುಲಿ ಸೆರೆ ಸಿಕ್ಕುತ್ತಾ?
ಇನ್ನು ಹುಲಿಯ ಸೆರೆಗೆ ಕಾರ್ಯಾಚರಣೆ ನಡೆಸುತ್ತಿರುವ ತಂಡ ಚಾಮರಾಜನಗರಕ್ಕೆ ಸೇರಿದ ಯರಗನಹಳ್ಳಿ, ಸುವರ್ಣಾನಗರ ಹಾಗೂ ತಮಿಳುನಾಡಿನ ಹಾಸನೂರು ವಿಭಾಗದ ಕಳ್ಳಬೇಟೆ ಶಿಬಿರಕ್ಕೂ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ಈ ಮಧ್ಯೆ ಅರಣ್ಯದಲ್ಲಿ ಇರಿಸಲಾಗಿರುವ ಕ್ಯಾಮರಾದಲ್ಲಿ ಏ.26ರಂದು ಹುಲಿ ಕಾಣಿಸಿಕೊಂಡಿದ್ದರೆ, ಏ.29ರಂದು ಶಂಕರಪ್ಪ ಎಂಬುವರ ಜಮೀನಿನಲ್ಲಿ ಹುಲಿಯ ಹೆಜ್ಜೆಗುರುತು ಕಂಡು ಬಂದಿತ್ತು. ಅದನ್ನು ಹೊರತುಪಡಿಸಿದರೆ ಇಲ್ಲಿವರೆಗೂ ಹುಲಿಯ ಸುಳಿವು ದೊರೆಯದಿರುವುದು ಕಾರ್ಯಾಚರಣೆಗೆ ತೊಡಕಾಗಿದೆ. ಇದೀಗ ಸಮಿತಿ ರಚನೆ ಮಾಡಲಾಗಿದ್ದು, ಈ ಸಮಿತಿ ಹುಲಿ ಸೆರೆಹಿಡಿಯುವ ಸಂಬಂಧ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.