ಚಾಮರಾಜನಗರದ ಚಾಮರಾಜೇಂದ್ರ ಒಡೆಯರ್ ಜನನ ಮಂಟಪಕ್ಕಿಲ್ಲ ಕಾಯಕಲ್ಪ
ಚಾಮರಾಜನಗರ, ಜೂನ್ 16: ಮೈಸೂರು ಮಹಾರಾಜ ಚಾಮರಾಜೇಂದ್ರ ಒಡೆಯರ್ ಜನಿಸಿದ ನೆನಪಿಗೆ ಕೃಷ್ಣರಾಜ ಒಡೆಯರ್ ಕಾಲದಲ್ಲಿ ನಿರ್ಮಾಣವಾದ ಚಾಮರಾಜನಗರದಲ್ಲಿರುವ ಜನನ ಮಂಟಪ ಈಗ ವಿವಾದದ ಕೇಂದ್ರವಾಗುತ್ತಿದೆ. ಜತೆಗೆ ಇದರ ಸುತ್ತಮುತ್ತಲಿನ ಆಸ್ತಿಗಳು ಒತ್ತುವರಿ ಆಗುವುದರೊಂದಿಗೆ ಶಿಥಿಲಾವಸ್ಥೆಯಲ್ಲಿರುವ ಮಂಟಪಕ್ಕೆ ಕಾಯಕಲ್ಪ ನೀಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
Recommended Video
ಚಾಮರಾಜೇಂದ್ರ ಒಡೆಯರ್ ಚಾಮರಾಜನಗರದಲ್ಲಿ 1 ಮಾರ್ಚ್ 1774ರಲ್ಲಿ ಜನಿಸಿದ್ದು, ಅವರ ಜನ್ಮಸ್ಥಳದಲ್ಲಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಜನನ ಮಂಟಪವನ್ನು ನಿರ್ಮಿಸಲಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಜನನ ಮಂಟಪದ ಸುತ್ತಲಿನ ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿತ್ತು.
ಅಕ್ರಮ ಖಾತೆ ಮಾಡಿಕೊಟ್ಟ ಆರೋಪ
ಈ ಸಂಬಂಧ ತನಿಖೆ ನಡೆಸಿ ಜನನ ಮಂಟಪ ಸುತ್ತ ಇರುವ ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಪುರಸಭಾ ಮುಖ್ಯಾಧಿಕಾರಿ ಹಾಗೂ ಪೌರಾಯುಕ್ತರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಬಿ.ಬಿ.ಕಾವೇರಿ ಆದೇಶ ನೀಡಿದ್ದರು. ಆದರೆ ಅಕ್ರಮ ಖಾತೆಯಾಗಿರುವ ಸರ್ಕಾರಿ ಜಾಗವನ್ನು ತೆರವುಗೊಳಿಸಬೇಕು ಎಂದು ಆದೇಶ ನೀಡಿ ಆರು ತಿಂಗಳಾದರೂ ತಹಶೀಲ್ದಾರರಾಗಲೀ, ನಗರಸಭಾ ಆಯುಕ್ತರಾಗಲೀ ಯಾವುದೇ ಕ್ರಮವಹಿಸಿಲ್ಲ ಎಂಬುದು ಈಗ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಆರಂಭವಾಗಿದೆ ಐತಿಹಾಸಿಕ ಮಡಿಕೇರಿ ಕೋಟೆಗೆ ಕಾಯಕಲ್ಪ ನೀಡುವ ಕೆಲಸ
ಅಕ್ರಮ ಖಾತೆ ರದ್ದುಪಡಿಸಲು ಆಗ್ರಹ
ಜತೆಗೆ ಜಿಲ್ಲಾಧಿಕಾರಿಗಳ ಆದೇಶವನ್ನು ಕೂಡಲೇ ಅನುಷ್ಠಾನಗೊಳಿಸಿ ಅಕ್ರಮ ಖಾತೆಗಳನ್ನು ರದ್ದುಪಡಿಸಬೇಕು, ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಿ ಇಲ್ಲಿ ಚಾಮರಾಜನಗರದ ಇತಿಹಾಸ ಸಾರುವ ಸ್ಮಾರಕ ನಿರ್ಮಿಸಬೇಕು ಎಂಬ ಆಗ್ರಹವನ್ನು ಕನ್ನಡಪರ ಸಂಘಟನೆಗಳು ಮಾಡುತ್ತಿವೆ.
ಯಾವುದೇ ಕ್ರಮ ಜರುಗಿಸಿಲ್ಲ ಏಕೆ?
ಈ ಕುರಿತಂತೆ ಮಾತನಾಡಿರುವ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುರೇಶ್ ವಾಜಪೇಯಿ ಅವರು, ಬಿ.ಬಿ.ಕಾವೇರಿ ಅವರು ಜಿಲ್ಲಾಧಿಕಾರಿಯಾಗಿದ್ದ ವೇಳೆ, ಅಂದರೆ 2019ರ ಡಿಸೆಂಬರ್ 30ರಂದು ಕೊಳ್ಳೇಗಾಲ ಉಪವಿಭಾಗಾಧಿಕಾರಿಗಳಿಂದ ವರದಿ ತರಿಸಿಕೊಂಡು ಜನನ ಮಂಟಪ ಹಾಗೂ ಅದರ ಸುತ್ತಲಿನ ಜಾಗ ಸರ್ಕಾರದ ಆಸ್ತಿಯಾಗಿದ್ದು, ಹಲವಾರು ಮಂದಿ ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟು ಕಟ್ಟಡ ನಿರ್ಮಿಸಲು ನಿಯಮಬಾಹಿರವಾಗಿ ಅನುಮತಿ ನೀಡಲಾಗಿದೆ.
ಈ ಹಿನ್ನಲೆಯಲ್ಲಿ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಹಿಂದಿನ ಪುರಸಭಾ ಮುಖ್ಯಾಧಿಕಾರಿ ಹಾಗೂ ಪೌರಾಯುಕ್ತರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಮತ್ತು ಸರ್ಕಾರಿ ಜಾಗವನ್ನು ತೆರವುಗೊಳಿಸುವಂತೆ ಚಾಮರಾಜನಗರ ತಹಶೀಲ್ದಾರರು ಹಾಗೂ ನಗರಸಭಾ ಆಯುಕ್ತರಿಗೆ ಆದೇಶ ನೀಡಿದ್ದರು. ಈ ಆದೇಶ ಹೊರ ಬಂದು ಆರು ತಿಂಗಳಾದರೂ ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲವೆಂದು ಆರೋಪಿಸಿದ್ದಾರೆ
ಇತಿಹಾಸ ಸಾರುವ ಮ್ಯೂಸಿಯಂ ನಿರ್ಮಿಸಿ
ಇನ್ನೊಂದೆಡೆ ಮಾತನಾಡಿರುವ ಜನಾಂದೋಲನ ಹೋರಾಟ ಸಮಿತಿ ಸಂಚಾಲಕ ಸಿದ್ದರಾಜು ಅವರು, ಜನನ ಮಂಟಪದ ಸುತ್ತಲಿನ ಸರ್ಕಾರಿ ಜಾಗವನ್ನು ಅಕ್ರಮ ಖಾತೆ ಮಾಡಿಸಿಕೊಂಡು ಇಲ್ಲಿ ನಿಯಮಬಾಹಿರವಾಗಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಬೇಕು. ಈ ಪ್ರದೇಶದಲ್ಲಿ ಚಾಮರಾಜನಗರ ಇತಿಹಾಸ ಸಾರುವ ಮ್ಯೂಸಿಯಂ ನಿರ್ಮಿಸಬೇಕು. ದಸರಾ ಸಂದರ್ಭದಲ್ಲಿ ಜನನ ಮಂಟಪದಲ್ಲಿ ವಿಶೇಷ ಪೂಜೆ ನಡೆಯುತ್ತಿತ್ತು. ಅಲ್ಲದೆ ಚಾಮರಾಜೇಶ್ವರ ರಥೋತ್ಸವದ ವೇಳೆ ಪ್ರಥಮ ಪೂಜೆ ನಡೆಯುತ್ತಿತ್ತು. ಈಗ ಅದೆಲ್ಲಾ ನಿಂತು ಹೋಗಿದೆ. ಚಾಮರಾಜೇಂದ್ರ ಒಡೆಯರ್ ಹುಟ್ಟಿದ ಕಾರಣದಿಂದಲೇ ಇಲ್ಲಿಗೆ ಚಾಮರಾಜನಗರ ಎಂಬ ಹೆಸರು ಬಂದಿದೆ. ಹಾಗಾಗಿ ಈ ಐತಿಹಾಸಿಕ ಸ್ಥಳವನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮತ್ತೊಂದು ಮಳೆಗಾಲ ಬಂದರೂ ಹೀಗೇ ಇದೆಯಲ್ಲ ಮಡಿಕೇರಿ ಅರಮನೆ
ಜನನ ಮಂಟಪ ಉಳಿವಿಗೆ ನೂತನ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.