ಗುಂಡ್ಲುಪೇಟೆಯಲ್ಲಿ ಎತ್ತುಗಳಿಗೆ ನೀರು ಕೊಡಿಸಲು ಹೋದವನು ನೀರು ಪಾಲು
ಚಾಮರಾಜನಗರ, ನವೆಂಬರ್ 6: ಕೆರೆಯಲ್ಲಿ ಎತ್ತುಗಳಿಗೆ ನೀರು ಕುಡಿಸುವ ವೇಳೆ ಯುವಕನೊಬ್ಬ ಆಕಸ್ಮಿಕವಾಗಿ ಮುಳುಗಿ ಸಾವಿಗೀಡಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮಂಚಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಮಹದೇವಸ್ವಾಮಿ ಎಂಬುವರ ಪುತ್ರ ಮೋಹನ್(19) ನೀರಿನಲ್ಲಿ ಮುಳುಗಿದ ಸಾವನ್ನಪ್ಪಿದ ದುರ್ದೈವಿ.

ಸೋಮವಾರ ಬೆಳಿಗ್ಗೆ 9ರ ಸಮಯದಲ್ಲಿ ಗ್ರಾಮದ ಹುಲಿಕೆರೆಯಲ್ಲಿ ತಮ್ಮ ಎತ್ತುಗಳಿಗೆ ನೀರು ಕುಡಿಸಲು ಮೋಹನ್ ತೆರಳಿದ್ದು, ನೀರು ಕುಡಿಸಲು ಎತ್ತುಗಳ ಹಗ್ಗವನ್ನು ಎಳೆಯಲು ಪ್ರಯತ್ನಿಸಿದಾಗ ಕಾಲುಜಾರಿ ನೀರಿಗೆ ಬಿದ್ದಿದ್ದಾನೆ.
ಈ ಸಂದರ್ಭ ನೀರಿನಿಂದ ಮೇಲೇಳಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿದ್ದಾನೆ. ಈ ಸಂದರ್ಭ ಕಾಪಾಡುವಂತೆ ಕೂಗಿಕೊಂಡಿದ್ದು, ತಕ್ಷಣ ಅಕ್ಕಪಕ್ಕದಲ್ಲಿದ್ದ ಜನ ಕೆರೆಯ ಬಳಿಗೆ ಬರುವ ಸಮಯಕ್ಕೆ ಮೋಹನ್ ನೀರು ಪಾಲಾಗಿದ್ದಾನೆ.

ಕೂಡಲೇ ಮಾಹಿತಿ ನೀಡಿದ ಮೇರೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಕೆರೆಯಲ್ಲಿ ಹುಡುಕಾಟ ನಡೆಸಿ ಶವವನ್ನು ಹೊರತೆಗೆದಿದ್ದಾರೆ. ನಂತರ ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರ ವಶಕ್ಕೆ ನೀಡಲಾಯಿತು.
ಸ್ಥಳಕ್ಕೆ ಬೇಗೂರು ಠಾಣೆಯ ಎಎಸ್ಐ ದೊರೆರಾಜು, ಸಿಬ್ಬಂದಿ ಎ.ಮಹೇಶ್ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications