ಮಳೆ ಬಂದರೆ ಕೆರೆಯಾಗುವ ಗುಂಡ್ಲುಪೇಟೆ ಬಸ್ ನಿಲ್ದಾಣ!
ಚಾಮರಾಜನಗರ, ಜುಲೈ 6: ಅವೈಜ್ಞಾನಿಕ ಕಾಮಗಾರಿಗಳು ಕೆಲವೊಮ್ಮೆ ಎಂತಹ ಸಮಸ್ಯೆನ್ನು ತಂದೊಡ್ಡುತ್ತದೆ ಎಂಬುದಕ್ಕೆ ಗುಂಡ್ಲುಪೇಟೆ ಬಸ್ ನಿಲ್ದಾಣ ನಿದರ್ಶನವಾಗಿದೆ.
ಪ್ರತಿಸಲ ಮಳೆ ಬಂದಾಗ ಬಸ್ ನಿಲ್ದಾಣ ಕೊಳಚೆ ನೀರಿನಿಂದ ಜಲಾವೃತವಾಗುತ್ತದೆ ಈ ವೇಳೆ ಪರದಾಡುವ ಸ್ಥಿತಿ ಇಲ್ಲಿಗೆ ಬಸ್ಗಾಗಿ ಬರುವ ಪ್ರಯಾಣಿಕರದ್ದಾಗಿದೆ. ಇದಕ್ಕೆ ಪಟ್ಟಣದ ಮೂಲಕ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಕಾಮಗಾರಿ ನಡೆಸುವಾಗ ಸಮರ್ಪಕ ಚರಂಡಿ ನಿರ್ಮಿಸದೆ ಮಾಡಿರುವ ಎಡವಟ್ಟೇ ಕಾರಣವಾಗಿದೆ ಎಂದರೆ ತಪ್ಪಾಗಲಾರದು.
ಬಸ್ ನಿಲ್ದಾಣವು ತಗ್ಗು ಪ್ರದೇಶದಲ್ಲಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವಾಗ ಸಮರ್ಪಕವಾದ ಚರಂಡಿ ವ್ಯವಸ್ಥೆ ಮಾಡಿ ಅದರಲ್ಲಿ ನೀರು ಹರಿದು ಹೋಗುವಂತೆ ನೋಡಿಕೊಳ್ಳಬೇಕಾಗಿತ್ತು. ಆದರೆ ಅದ್ಯಾವುದು ಆಗದ ಕಾರಣದಿಂದಾಗಿ ನಗರದಲ್ಲಿ ಮಳೆ ಬಂದು ನೀರು ಹರಿದರೆ ಆ ನೀರೆಲ್ಲ ಬಂದು ಬಸ್ ನಿಲ್ದಾಣದಲ್ಲಿ ಸಂಗ್ರಹಗೊಳ್ಳುತ್ತದೆ.

ಇನ್ನು ಪಟ್ಟಣದ ಶ್ವೇತಾದ್ರಿಗಿರಿ ಬಡಾವಣೆಯ ಚರಂಡಿ ನೀರು ಕೂಡ ಹೆದ್ದಾರಿ ಬದಿಗಳಲ್ಲಿ ಅಳವಡಿಸಿರುವ ಪೈಪ್ ಲೈನಿಗೆ ಹರಿದುಬರುತ್ತಿದ್ದು, ಅದು ಮೋರಿಗೆ ಸೇರಲು ಸಾಧ್ಯವಾಗದೆ ಬಸ್ ನಿಲ್ದಾಣದೊಳಗೆ ನುಗ್ಗುತ್ತಿದೆ. ಇದಲ್ಲದೆ ಸಮೀಪದ ಮಡಹಳ್ಳಿ ರಸ್ತೆಯಲ್ಲಿದ್ದ ಸಣ್ಣ ಸೇತುವೆಯನ್ನು ತೆರವುಗೊಳಿಸಿದ್ದರಿಂದ ಕ್ರೀಡಾಂಗಣ ಹಾಗೂ ಮಡಹಳ್ಳಿ ರಸ್ತೆಯಿಂದಲೂ ಹರಿದು ಬರುವ ನೀರಿಗೂ ನಿಲ್ದಾಣವೇ ಆಸರೆಯಾಗಿದ್ದು, ಇದರಿಂದ ಮಳೆ ಬಂದಾಗ ಬಸ್ ನಿಲ್ದಾಣ ಕೆರೆಯಾಗಿ ಮಾರ್ಪಡುತ್ತಿದೆ.
ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವೆಯಾಗಿದ್ದ ಡಾ.ಗೀತಾಮಹದೇವಪ್ರಸಾದ್ ಹೆದ್ದಾರಿ, ಸಾರಿಗೆ, ಲೋಕೋಪಯೋಗಿ ಹಾಗೂ ಪುರಸಭೆ ಅಧಿಕಾರಿಗಳ ಸಭೆ ನಡೆಸಿ ಮಳೆನೀರು ನಿಲ್ದಾಣದೊಳಗೆ ಪ್ರವೇಶಿಸದಂತೆ ಹೊಸದಾಗಿ ಪೈಪ್ಲೈನ್ ಅಳವಡಿಸುವಂತೆ ಸೂಚನೆ ನೀಡಿದ್ದರಾದರೂ ಅದ್ಯಾವುದೂ ಪ್ರಗತಿ ಕಾಣಲಿಲ್ಲ.

ಇದೀಗ ಶಾಸಕರಾಗಿರುವ ನಿರಂಜನಕುಮಾರ್ ಅವರು ಪರಿಸ್ಥಿತಿಯನ್ನು ಅವಲೋಕಿಸಿದ್ದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಆದಷ್ಟು ಬೇಗ ಇದಕ್ಕೊಂದು ಪರಿಹಾರ ಕಂಡು ಹಿಡಿಯದೆ ಹೋದರೆ ಮಳೆ ಬಂದಾಗಲೆಲ್ಲ ಪುರಸಭೆಯ ಕಾರ್ಮಿಕರು ನೀರನ್ನು ಹೊರಹಾಕಲು ಪರದಾಡುವುದು ತಪ್ಪಿದಲ್ಲ.












Click it and Unblock the Notifications