ದೇಗುಲದ ಪ್ರಸಾದ ತಯಾರಿಸಿದ ಅಡುಗೆಯವನಿಗೆ ಮೊದಲೇ ಅನುಮಾನ ಬಂದಿತ್ತು!
Recommended Video

ಚಾಮರಾಜನಗರ, ಡಿಸೆಂಬರ್ 15: ಚಾಮರಾಜನಗರ ಜಿಲ್ಲೆಯ ಹನೂರಿನ ಸುಳವಾಡಿಯ 'ವಿಷ ಪ್ರಸಾದ' ಸೇವನೆಯ ಪ್ರಕರಣ ಇಡೀ ರಾಜ್ಯವನ್ನೂ ದುಃಖದಲ್ಲಿ ಮುಳುಗಿಸಿದೆ.
ಪ್ರಸಾದ ತಯಾರಿಸಿದ ನಂತರ, ಅದನ್ನು ಭಕ್ತರಿಗೆ ಹಂಚುವ ಮುನ್ನ ಅಡುಗೆಯವರಾದ ಪುಟ್ಟಸ್ವಾಮಿ ಎಂಬುವವರು ಒಮ್ಮೆ ಪ್ರಸಾದವನ್ನು ತಿಂದಿದ್ದರು. ಆಗಲೇ ಅವರಿಗೆ ಪ್ರಸಾದ ಎಂದಿನಂತಿಲ್ಲ ಎಂಬ ಅನುಮಾನ ಬಂದಿತ್ತು. ಪ್ರಸಾದದಲ್ಲಿ ವಿಲಕ್ಷಣ ವಾಸನೆಯೂ ಗೋಚರಿಸಿತ್ತು. ಆದರೆ ಪ್ರಸಾದ ತಿಂದ ಕೆಲ ಹೊತ್ತಾದರೂ ಅವರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಲಿಲ್ಲ. ಆದ್ದರಿಂದ ಅವರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ.
ಆದರೆ ದುರಂತ ಎಂದರೆ, ಪ್ರಸಾದ ಸೇವಿಸಿದ ಪುಟ್ಟಸ್ವಾಮಿ ಅವರ 12 ವರ್ಷ ವಯಸ್ಸಿನ ಮಗಳು ನಳಿನಿ ಮೃತರಾಗಿದ್ದಾಳೆ. ನಳಿನಿ ಸ್ಥಳೀಯ ಶಾಲೆಯಲ್ಲಿ 6 ನೇ ತರಗತಿ ಓದುತ್ತಿದ್ದಳು.

ಅಡುಗೆಯವನಿಗೆ ಅನುಮಾನ ಬಂದಿತ್ತು!
ಪುಟ್ಟಸ್ವಾಮಿಯವರಿಗೆ ಪ್ರಸಾದ ಎಂದಿನಂತಿಲ್ಲ ಎಂಬುದು ಅರಿವಿಗೆ ಬಂದರೂ, ಅದನ್ನು ತಾವು ಸೇವಿಸಿದ ಮೇಲೂ ಏನೂ ಆಗದಿರುವುದನ್ನು ಕಂಡು ಎಲ್ಲೋ ತಮಗೆ ಭ್ರಮೆ ಇರಬೇಕೆಂದುಕೊಂದು ಸುಮ್ಮನಾಗಿದ್ದರು. ಬಹುಶಃ ಅವರು ಪ್ರಸಾದವನ್ನು ಸ್ವಲ್ಪವೇ ತಿಂದಿದ್ದರಿಂದ ಅವರ ಆರೋಗ್ಯದ ಮೇಲೆ ಅದು ತಕ್ಷಣವೇ ಹೆಚ್ಚು ಪರಿಣಾಮ ಬೀರಿರದಿರಲಿಕ್ಕೆ ಸಾಕು. ಪುಟ್ಟಸ್ವಾಮಿ ಅವರೊಂದಿಗೆ ಇತರರೂ ಕೆಲವರು ಪ್ರಸಾದವನ್ನು ತಿಂದಿದ್ದರು. ಆದರೆ ಯಾರಿಗೂ ಏನೂ ಆಗಿರಲಿಲ್ಲ.

ಅಪ್ಪ ಕೈಯಾರೆ ತಯಾರಿಸಿದ ಪ್ರಸಾದ ತಿಂದು ಮಗಳ ಸಾವು!
ಅಪ್ಪ ತನ್ನ ಕೈಯಾರೆ ತಯಾರಿಸಿದ ಪ್ರಸಾದ ತಿಂದು ಸ್ವತಃ ಮಗಳೇ ಮೃತಳಾಗಿರುವುದು ದುರಂತ ಎನ್ನಿಸಿದೆ. 'ಛೆ ನಾನು ಅನುಮಾನ ಬರುತ್ತಿದ್ದಂತೆಯೇ ಇದನ್ನು ಯಾರಿಗೂ ತಿನ್ನುವುದಕ್ಕೆ ಕೊಡಬಾರದಿತ್ತು' ಎಂದು ತಾವು ಮಾಡದ ತಪ್ಪಿಗೆ ಪರಿತಪಿಸುತ್ತಿದ್ದಾರೆ ಪುಟ್ಟಸ್ವಾಮಿ. ಆದರೆ ಮಗಳು ಮಾತ್ರ ಸಾಯಬಾರದ ವಯಸ್ಸಲ್ಲಿ, ಇಹಲೋಕದ ಪಯಣ ಮುಗಿಸಿದ್ದಾಳೆ!

11 ಜನರ ದಾರುಣ ಸಾವು
ಚಾಮರಾಜನಗರ ಜಿಲ್ಲೆಯ ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ಗೋಪುರ ನಿರ್ಮಾಣದ ಶಿಲಾನ್ಯಾಸ ಪೂಜೆ ಅಂಗವಾಗಿ ಶುಕ್ರವಾರ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸುಳವಾಡಿ ಮತ್ತು ಸುತ್ತಮುತ್ತಲಿನ ಗ್ರಾಮಗಳಾದ ಬಿದರಹಳ್ಳಿ, ಹಳೇ ಮಾರ್ಟಳ್ಳಿ, ತಂಡಮೇಡು ಗ್ರಾಮಗಳ ನೂರಾರು ಜನರು ದೇವಾಲಯಕ್ಕೆ ಬಂದಿದ್ದರು. ಪೂಜೆಯ ನಂತರ ಟೊಮ್ಯಾಟೋ ಬಾತ್ ಅನ್ನು ಪ್ರಸಾದವಾಗಿ ಹಂಚಲಾಗಿತ್ತು. ಕೆಲವರು ಪ್ರಸಾದವನ್ನು ಅಲ್ಲಿಯೇ ಸೇವಿಸಿದರೆ, ಕೆಲವರು ಮನೆಗೆ ಕೊಂಡೊಯ್ದಿದ್ದರು. ಆದರೆ ಪ್ರಸಾದ ಸೇವಿಸಿದ ಕೆಲ ಹೊತ್ತಿನಲ್ಲೇ ಒಬ್ಬರಾದ ನಂತರ ಒಬ್ಬರು ಎಂಬಂತೆ ಹನ್ನೊಂದು ಜನ ಮೃತರಾದರೆ ನೂರಕ್ಕೂ ಹೆಚ್ಚು ಜನ ಜೀವನ್ಮರಣ ಹೋರಾಟದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದುರ್ಘಟನೆಗೆ ಇಡೀ ದೇಶವೂ ಕಂಬನಿ ಮಿಡಿದಿದೆ.

ಈ ದುರಂತಕ್ಕೆ ಕಾರಣವೇನು?
ದೇವಾಲಯದ ಗೋಪುರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎರಡು ಪಂಗಡಗಳ ನಡುವೆ ವೈಮನಸ್ಯವಿತ್ತು. ಒಂದು ಬಣದ ಮೇಲಿನ ಕೋಪಕ್ಕೆ ಇನ್ನೊಂದು ಬಣದವರೇ ಭಕ್ತರಿಗೆ ನೀಡುವ ಪ್ರಸಾದಲ್ಲಿ ಕೀಟನಾಶಕ ಬೆರೆಸಿ ಪ್ರತೀಕಾರ ತೀರಿಸಿಕೊಳ್ಳಲು ಯತ್ನಿಸಿದ್ದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಯುತ್ತಿದೆ.












Click it and Unblock the Notifications