ನೀರಿನ ಸಮಸ್ಯೆಯಿಂದ ಪಾರಾದ ಬಂಡೀಪುರ ವನ್ಯಪ್ರಾಣಿಗಳು
ಚಾಮರಾಜನಗರ, ಏಪ್ರಿಲ್ 30: ಕಳೆದ ವರ್ಷ ಈ ವೇಳೆಗೆಲ್ಲ ಬಂಡೀಪುರ ಅರಣ್ಯದಲ್ಲಿ ನೀರಿನ ಸಮಸ್ಯೆಯುಂಟಾಗಿ ವನ್ಯಜೀವಿಗಳು ನೀರು ಆಹಾರ ಹುಡುಕಿಕೊಂಡು ವಲಸೆ ಹೋಗಿದ್ದವು. ಅಲ್ಲಿ ಇಲ್ಲಿ ಉಳಿದ ಪ್ರಾಣಿಗಳು ನೀರಿಗಾಗಿ ಹುಡುಕಾಟ ನಡೆಸುತ್ತಿದ್ದವು. ಒಟ್ಟಾರೆ ಮನಕಲಕುವ ದೃಶ್ಯಗಳು ಕಂಡು ಬಂದಿತ್ತು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅರಣ್ಯ ಇಲಾಖೆಯ ಅಧಿಕಾರಿಗಳು ತೆಗೆದುಕೊಂಡ ಮುಂಜಾಗ್ರತಾ ಕ್ರಮದಿಂದಾಗಿ ಸಮಸ್ಯೆಗಳು ಉದ್ಭವಿಸಿಲ್ಲ. ಜತೆಗೆ ಈ ವ್ಯಾಪ್ತಿಯಲ್ಲಿ ಸ್ವಲ್ಪ ಮಟ್ಟಿಗೆ ಮಳೆ ಬಂದಿರುವುದರಿಂದಾಗಿ ಕೆರೆಕಟ್ಟೆಗಳು ಒಣಗದೆ ಪ್ರಾಣಿಗಳಿಗೆ ನೀರು ದೊರೆಯುವಂತಾಗಿದೆ.
ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಫೆಬ್ರವರಿ ತಿಂಗಳ ವೇಳೆಯಲ್ಲಿಯೇ ಕೆರೆಗಳು ಬರಿದಾಗುತ್ತಿರುವುದನ್ನು ಅರಿತು ವನ್ಯಜೀವಿಗಳಿಗೆ ನೀರಿನ ದಾಹ ನೀಗಿಸಲು ಅರಣ್ಯ ಇಲಾಖೆಯು ಸೋಲಾರ್ ಮೋಟಾರ್ ಮುಖಾಂತರ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಮಾಡಿದ್ದರಿಂದ ಅರಣ್ಯದಲ್ಲಿ ನೀರಿನ ಸಮಸ್ಯೆ ಅಷ್ಟಾಗಿ ಕಾಣಿಸಿಲ್ಲ.

ಹಾಗೆನೋಡಿದರೆ ಬಂಡೀಪುರ ವ್ಯಾಪ್ತಿಯ ಎಲ್ಲ್ಲ ವಲಯಗಳಲ್ಲಿ ಸುಮಾರು 350 ಕೆರೆಗಳಿವೆ. 2017ರಲ್ಲಿ ಉತ್ತಮ ಮಳೆಯಾದ್ದರಿಂದ ಕೆರೆಗಳು ನೀರಿನಿಂದ ಭರ್ತಿಯಾಗಿತ್ತು. ಆದರೂ ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಬಿಸಿಲಿನ ಧಗೆಗೆ ಕೆರೆಗಳು ಬರಿದಾಗ ತೊಡಗಿದ್ದರಿಂದ ಅವುಗಳಿಗೆ ಸಾಧ್ಯವಾದಷ್ಟು ಮಟ್ಟಿಗೆ ಸೋಲಾರ್ ಮೋಟಾರ್ ಮೂಲಕ ನೀರು ತುಂಬಿಸುವ ಕೆಲಸ ಮಾಡಿದ್ದರಿಂದ ಸದ್ಯ ಪ್ರಾಣಿಗಳು ನೆಮ್ಮದಿಯುಸಿರು ಬಿಟ್ಟಿವೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಈಗಾಗಲೇ ಬಂಡೀಪುರ ವಲಯದ ನೀಲಕಂಠರಾವ್ ಕೆರೆ, ಸೊಳ್ಳೀಕಟ್ಟೆ ಕೆರೆ, ಕುಂದಕೆರೆ ವಲಯದ ಮಾಲಗಟ್ಟೆ, ಕಡಬೂರು ಕಟ್ಟೆ, ದೇವರಮಡು, ಮೊಳೆಯೂರು ವಲಯದ ಹುರುಳಿಪುರ ಕೆರೆ, ಎನ್ .ಬೇಗೂರು ದೊಡ್ಡಮುತ್ತಿಗೆ ಕೆರೆಗಳಿಗೆ ಸೋಲಾರ್ ಮುಖಾಂತರ ನೀರು ತುಂಬಿಸಿದ್ದರಿಂದ ಕಳೆದ ವರ್ಷದಷ್ಟು ಸಮಸ್ಯೆ ಈ ಬಾರಿ ಕಂಡು ಬಂದಿಲ್ಲ. ಮುಂದಿನ ದಿನಗಳಲ್ಲಿ ಮಳೆ ಬಂದರೆ ಅರಣ್ಯದಲ್ಲಿರುವ ಪ್ರಾಣಿಗಳಿಗೆ ಯಾವುದೇ ರೀತಿಯ ನೀರು ಮತ್ತು ಆಹಾರಕ್ಕೆ ಸಮಸ್ಯೆ ಕಾಣಿಸದು.
ಬಂಡೀಪುರಕ್ಕೆ ಸದಾ ಪ್ರವಾಸಿಗರು ಬರುತ್ತಾರೆ ಇವರೆಲ್ಲರೂ ಅರಣ್ಯದಲ್ಲಿ ವನ್ಯಪ್ರಾಣಿಗಳನ್ನು ನೋಡಲು ಸಫಾರಿ ತೆರಳುತ್ತಾರೆ. ಆದರೆ ಕಳೆದ ವರ್ಷ ಹೀಗೆ ಸಫಾರಿಗೆ ಹೋದವರು ಯಾವುದೇ ಪ್ರಾಣಿಗಳು ಕಾಣಿಸದೆ ನಿರಾಶೆಯಿಂದ ಹಿಂತಿರುಗುತ್ತಿದ್ದರು. ಆದರೆ ಈ ಬಾರಿ ಆ ರೀತಿಯ ಸಮಸ್ಯೆಯಾಗಿಲ್ಲ. ನೀರು ಮತ್ತು ಆಹಾರಕ್ಕೆ ಕೊರತೆಯಾಗದ ಕಾರಣ ಪ್ರಾಣಿಗಳು ಇಲ್ಲಿಯೇ ಉಳಿದು ಪ್ರಾಣಿಪ್ರಿಯರ ಗಮನಸೆಳೆಯುತ್ತಿವೆ.












Click it and Unblock the Notifications