ಚಾಮರಾಜನಗರ: ಕಳಪೆ ಕಾಮಗಾರಿಗೆ ಸಾಕ್ಷಿಯಾದ ನೀರಿನ ಟ್ಯಾಂಕ್
ಚಾಮರಾಜನಗರ, ಆಗಸ್ಟ್ 10: ಕಮೀಷನ್ ದಂಧೆಗಳು ಎಲ್ಲ ರೀತಿಯ ಕಾಮಗಾರಿಗಳಲ್ಲಿ ನಡೆಯುತ್ತಿರುವ ಕಾರಣದಿಂದಾಗಿ ಇತ್ತೀಚೆಗೆ ಸರ್ಕಾರದಿಂದ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಕಳಪೆಯಾಗುತ್ತಿದ್ದು, ಇದರ ಪರಿಣಾಮವನ್ನು ಸಾರ್ವಜನಿಕರು ಎದುರಿಸುವಂತಾಗಿದೆ.
ಅಧಿಕಾರಿಗಳಿಂದ ಜನಪ್ರತಿನಿಧಿಗಳ ತನಕ ಕಾಮಗಾರಿಗಳಲ್ಲಿ ಕಮೀಷನ್ ನೀಡಬೇಕಾಗಿರುವ ಕಾರಣದಿಂದಾಗಿ ಎಲ್ಲೆಡೆ ಕಳಪೆ ಕಾಮಗಾರಿಗಳನ್ನು ಮಾಡುತ್ತಿರುವುದು ಕಂಡುಬರುತ್ತಿದ್ದು ಇದಕ್ಕೆ ತಾಲೂಕಿನ ಕೆಂಪನಪುರ ಗ್ರಾಮದ ಓವರ್ಹೆಡ್ ಟ್ಯಾಂಕ್ ಸಾಕ್ಷಿಯಾಗಿದೆ.

ಗ್ರಾಮಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ಯೋಜನೆ ತರಲಾಗಿದ್ದು, ಅದರಡಿ ಜಿಲ್ಲಾ ಪಂಚಾಯಿತಿಯಿಂದ 25 ಲಕ್ಷ ರೂ. ವೆಚ್ಚದಲ್ಲಿ ಓವರ್ಹೆಡ್ ಟ್ಯಾಂಕ್, ಎರಡು ಬೋರ್ವೆಲ್, ಎರಡು ಮೋಟಾರ್ ಅಳವಡಿಕೆ, ಎರಡು ಪಂಪ್ ಹೌಸ್ ನಿರ್ಮಾಣ ಹಾಗೂ ಟ್ಯಾಂಕ್ಗೆ ಪೈಪ್ಲೈನ್ ಮೂಲಕ ನೀರು ಸರಬರಾಜು ಮಾಡಬೇಕಾಗಿತ್ತು.
ಈ ಸಂಬಂಧ ಕಾಮಗಾರಿ ಆರಂಭಿಸಿ ಕಳಪೆ ಮಟ್ಟದ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗಿದೆ. ಆದರೆ ಪಂಪ್ಹೌಸ್ ನಿರ್ಮಾಣ ಹಾಗೂ ಬೋರ್ವೆಲ್ ಕೊರೆಯಿಸಿ ಮೋಟಾರ್ ಅಳವಡಿಕೆ ಮಾಡುವ ಮುನ್ನವೇ ಪೂರ್ಣ ಬಿಲ್ ಪಾವತಿ ಮಾಡಿಕೊಂಡಿರುವುದು ಜಿ.ಪಂ. ಕುಡಿಯುವ ನೀರು ವಿಭಾಗ ಹಿರಿಯ ಅಧಿಕಾರಿಗಳ ತಂಡ ಭೇಟಿ ಪರಿಶೀಲನೆ ಮಾಡಿದ ಸಂದರ್ಭ ಬೆಳಕಿಗೆ ಬಂದಿದೆ.
ಈ ಕಾಮಗಾರಿಯ ಗುತ್ತಿಗೆಯನ್ನು ಆನಂದ್ಕುಮಾರ್ ಎಂಬುವರು ಪಡೆದಿದ್ದು, ಅವರು ಸಮರ್ಪಕವಾಗಿ ಕಾಮಗಾರಿ ನಡೆಸದಿರುವುದು ಕಂಡು ಬಂದಿದ್ದು, ಇದರಲ್ಲಿ ಅಧಿಕಾರಿಗಳು, ಎಂಜಿನಿಯರ್ಗಳು, ಜನಪ್ರತಿನಿಧಿಗಳು ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ.
ಈ ಕುರಿತಂತೆ ಪರಿಶೀಲನೆ ನಡೆಸಿದ ಜಿ.ಪಂ. ಕುಡಿಯುವ ನೀರು ವಿಭಾಗ ಹಿರಿಯ ಅಧಿಕಾರಿಗಳ ತಂಡಕ್ಕೆ 2017-18ನೇ ಸಾಲಿನ ಕಾಮಗಾರಿಯನ್ನು ಗುತ್ತಿಗೆ ಪಡೆದು ಟ್ಯಾಂಕನ್ನು ಗುಣಮಟ್ಟದಿಂದ ನಿರ್ಮಾಣ ಮಾಡಿಲ್ಲ. ಈ ಅಪೂರ್ಣ ಕಾಮಗಾರಿಗೆ ಮಾರ್ಚ್ನಲ್ಲೇ ಪೂರ್ಣ ಬಿಲ್ ಪಾವತಿ ಮಾಡಿರುವುದು ಕಂಡು ಬಂದಿದೆ.
ಸದ್ಯ ಗ್ರಾಮಸ್ಥರು ಟ್ಯಾಂಕ್ ಸೋರುತ್ತಿದೆ ಎಂಬ ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅಧಿಕಾರಿಗಳು ಪರಿಶೀಲನೆಗೆ ಭೇಟಿ ನೀಡಿದ್ದರು. ಈ ವೇಳೆ ಅಕ್ರಮ ಬೆಳಕಿಗೆ ಬಂದಿದ್ದು, ಈ ಬಗ್ಗೆ ಸ್ಥಳದಲ್ಲೇ ಸಂಬಂಧಪಟ್ಟ ಎಂಜಿನಿಯರ್ ನಿಂಗರಾಜು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನು ಟ್ಯಾಂಕ್ಗೆ ಪರಿಶೀಲನೆಗೆ ಹತ್ತಲು ಅಳವಡಿಸಿರುವ ಏಣಿಯು ಕೂಡ ಗುಣಮಟ್ಟದಿಂದ ಕೂಡಿರದೆ ಅಲುಗಾಡುತ್ತಿರುವುದು ಕಂಡು ಬಂದಿದೆ. ಒಟ್ಟಾರೆ ಈ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಮುಂದೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications