ಚಾಮರಾಜನಗರ: ತೆಳ್ಳನೂರು ಶಾಲಾ ಮಕ್ಕಳಿಗೆ ಮಳೆ ಬಂದರೆ ಭಯ
ಚಾಮರಾಜನಗರ, ಅಕ್ಟೋಬರ್ 4: ಸರ್ಕಾರಿ ಶಾಲೆಗಳ ಅಭಿವೃದ್ಧಿ ಬಗ್ಗೆ ಮಾತನಾಡುವ ಆಡಳಿತರೂಢರು ಶಾಲೆಗಳನ್ನು ಯಾವ ರೀತಿಯಲ್ಲಿಟ್ಟುಕೊಂಡಿದ್ದಾರೆ ಎಂಬುದಕ್ಕೆ ಜಿಲ್ಲೆಯ ಸಂತೇಮರಹಳ್ಳಿ ಬಳಿಯ ತೆಳ್ಳನೂರು ಸರ್ಕಾರಿ ಶಾಲೆ ಸಾಕ್ಷಿಯಾಗಿದೆ.
ಇಲ್ಲಿ ಮಳೆ ಬಂದರೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನರಕ ಯಾತನೆ ಅನುಭವಿಸಬೇಕಾಗುತ್ತದೆ. ಕಾರಣ ಮಳೆ ನೀರಿನೊಂದಿಗೆ ಊರಿನ ತ್ಯಾಜ್ಯವೆಲ್ಲ ಹರಿದು ಬಂದು ಶಾಲಾ ಆವರಣದಲ್ಲಿ ಶೇಖರಣೆಯಾಗುತ್ತದೆ. ಅಲ್ಲದೆ ನೀರು ಕೂಡ ಹರಿದು ಹೋಗದೆ ಅಲ್ಲಿಯೇ ನಿಂತು ಸಾಂಕ್ರಾಮಿಕ ರೋಗಗಳಿಗೆ ಎಡೆ ಮಾಡಿಕೊಡುತ್ತದೆ.

ಇದರಿಂದ ಊರಿನಲ್ಲಿ ಮಳೆ ಬಂತೆಂದರೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಯಪಡುವಂತಾಗಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮರ್ಪಕ ಶಿಕ್ಷಣ ಸಿಗುತ್ತಿದೆ. ಇರುವ ಶಿಕ್ಷಕರು ಉತ್ತಮವಾಗಿ ಪಾಠ ಮಾಡುವುದರಿಂದ ಸುತ್ತಮುತ್ತಲ ಮಕ್ಕಳು ಈ ಶಾಲೆಗೆ ಬರುತ್ತಿದ್ದಾರೆ. ಆದರೆ ಶಾಲೆಯ ದುಸ್ಥಿತಿ ಇದೀಗ ಪೋಷಕರಿಗೂ ಬೇಸರ ತರಿಸಿದ್ದು, ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುವ ಚಿಂತನೆ ನಡೆಸುತ್ತಿದ್ದಾರೆ.
ಮಳೆ ಬಂದರೆ ಶಾಲಾವರಣದಲ್ಲಿ ಶೇಖರಣೆಯಾಗುವ ನೀರು ಹರಿದು ಹೋಗಲು ಯಾವುದೇ ಅವಕಾಶವಿಲ್ಲ. ಹೀಗಾಗಿ ಅದು ಇಂಗಿಹೋಗಬೇಕು. ಅಲ್ಲಿ ತನಕ ದುರ್ವಾಸನೆ ಬೀರುವುದರಿಂದ ಆ ದುರ್ವಾಸನೆಯನ್ನು ಸಹಿಸಿಕೊಂಡು ಪಾಠ ಕೇಳುವುದು ಮಕ್ಕಳಿಗೆ ಅನಿವಾರ್ಯವಾಗಿದೆ.

ಇನ್ನು ಶಾಲೆಯಲ್ಲಿ ಶೌಚಾಲಯವಿದೆಯಾದರೂ ಇಲ್ಲಿಗೆ ಸಮರ್ಪಕವಾಗಿ ನೀರಿನ ವ್ಯವಸ್ಥೆಯಿಲ್ಲ. ಆದ್ದರಿಂದ ಮಕ್ಕಳು ಬಯಲನ್ನು ಆಶ್ರಯಿಸಬೇಕಾಗಿದೆ. ಎಲ್ಲೆಡೆ ಸ್ವಚ್ಛ ಭಾರತ, ಬಯಲು ಶೌಚಮುಕ್ತದ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದರೆ ಅದಕ್ಕೆ ವಿರುದ್ದವಾಗಿ ಮಕ್ಕಳು ಬಯಲಿಗೆ ಶೌಚಕ್ಕೆ ಹೋಗುತ್ತಿದ್ದಾರೆ.
ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಶಾಲೆಗೆ ಸಮರ್ಪಕವಾಗಿ ನೀರಿನ ವ್ಯವಸ್ಥೆಯನ್ನು ಕಲ್ಪಿಸದಿರುವುದರಿಂದಾಗಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ತಪ್ಪಾಗಲಾರದು. ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಅನುಭವಿಸುತ್ತಿರುವ ತೊಂದರೆ ಬಗ್ಗೆ ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿಯ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನ ಮಾತ್ರ ಆಗಿಲ್ಲ.
ಮನವಿಗೆ ಸ್ಪಂದಿಸಿ ಶಾಲೆಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿ ಹೋದವರು ಮತ್ತೆ ಇತ್ತ ಬಂದಿಲ್ಲ. ಹೀಗಾಗಿ ಸಮಸ್ಯೆ ಮಾತ್ರ ಸಮಸ್ಯೆಯಾಗಿಯೇ ಉಳಿದಿದ್ದು ಶಾಲಾ ಮಕ್ಕಳು ನರಕಯಾತನೆ ಅನುಭವಿಸುವುದು ಮಾತ್ರ ತಪ್ಪಿಲ್ಲ.












Click it and Unblock the Notifications